ಮೆಲ್ಬೋರ್ನ್ ಟೆಸ್ಟ್ ಮುಗಿದ ನಂತರ ಆಟಗಾರರ ಜತೆ ಮಾತನಾಡಬೇಕು ಎಂದಿದ್ದ ಧೋನಿ
ಎಂ ಎಸ್ ಧೋನಿ ಡಿಸೆಂಬರ್ 26, 2014ರಲ್ಲಿ ನಡೆದಿದ್ದ ಮೆಲ್ಬೋರ್ನ್ ಟೆಸ್ಟ್ ಮುಕ್ತಾಯದ ನಂತರ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ವಿದಾಯ ಘೋಷಿಸಿ ಇಡೀ ಕ್ರಿಕೆಟ್ ಜಗತ್ತಿಗೆ ಶಾಕ್ ನೀಡಿದ್ದರು. ಹೀಗೆ ಈ ದೊಡ್ಡ ಘಟನೆ ನಡೆಯುವ ಮುನ್ನ ಟೀಮ್ ಇಂಡಿಯಾದ ಡ್ರೆಸ್ಸಿಂಗ್ ರೂಂನಲ್ಲಿ ನಡೆದ ಘಟನೆಯನ್ನು ರವಿಶಾಸ್ತ್ರಿ ಬಿಚ್ಚಿಟ್ಟಿದ್ದಾರೆ. ಆ ಸಂದರ್ಭದಲ್ಲಿ ಟೀಮ್ ಇಂಡಿಯಾ ಡೈರೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ರವಿಶಾಸ್ತ್ರಿ ಬಳಿ ಬಂದ ಎಂ ಎಸ್ ಧೋನಿ ತಾನು ತಂಡದ ಆಟಗಾರರ ಜೊತೆ ಮಾತನಾಡಬೇಕು ಎಂದು ರವಿಶಾಸ್ತ್ರಿಗೆ ತಿಳಿಸಿದ್ದರಂತೆ. ಆ ಸಂದರ್ಭದಲ್ಲಿ ಧೋನಿ ಪಂದ್ಯದ ಕುರಿತು ಸಾಮಾನ್ಯವಾಗಿ ಮಾತನಾಡುವುದಕ್ಕೆ ಕರೆದಿರಬಹುದು ಎಂದು ಊಹಿಸಿದ್ದೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ಸಭೆ ಕರೆದು ಇದ್ದಕ್ಕಿದ್ದಂತೆ ಟೆಸ್ಟ್ ಕ್ರಿಕೆಟ್ ನಿವೃತ್ತಿ ವಿಷಯ ತಿಳಿಸಿದ್ದ ಎಂಎಸ್ ಧೋನಿ
ಹೀಗೆ ರವಿಶಾಸ್ತ್ರಿ ಬಳಿ ಆಟಗಾರರ ಜತೆ ಚರ್ಚಿಸಬೇಕು ಎಂದಿದ್ದ ಎಂಎಸ್ ಧೋನಿ ಏಕಾಏಕಿ ಮಾತು ಶುರು ಮಾಡುತ್ತಲೇ ತಾನು ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಲು ತೀರ್ಮಾನಿಸಿದ್ದೇನೆ ಎಂದು ಹೇಳಿಕೆ ನೀಡಿದ್ದರಂತೆ. ಹೀಗೆ ಎಂಎಸ್ ಧೋನಿ ದಿಢೀರ್ ಹೇಳಿಕೆಯನ್ನು ನೀಡಿದ್ದನ್ನು ಕಂಡ ಆಟಗಾರರ ಮುಖದಲ್ಲಿ ದೊಡ್ಡಮಟ್ಟದ ಆಶ್ಚರ್ಯ ಮತ್ತು ಬೇಸರ ಮೂಡಿತ್ತು ಎಂದು ರವಿಶಾಸ್ತ್ರಿ ಹೇಳಿಕೊಂಡಿದ್ದಾರೆ.
ಕೊಹ್ಲಿ ನಾಯಕತ್ವ ಸ್ವೀಕರಿಸಲು ತಯಾರಿದ್ದ ವಿಷಯ ಎಂಎಸ್ ಧೋನಿಗೆ ಚೆನ್ನಾಗಿ ತಿಳಿದಿತ್ತು
ಇನ್ನು ಎಂಎಸ್ ಧೋನಿ ಏಕಾಏಕಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದರ ಹಿಂದೆ ಆಲೋಚನೆಗಳು ಕೂಡ ಇದ್ದವು ಎಂದು ರವಿಶಾಸ್ತ್ರಿ ಹೇಳಿದ್ದಾರೆ. ತಾನು ಟೆಸ್ಟ್ ಕ್ರಿಕೆಟ್ಗೆ ವಿದಾಯ ಘೋಷಿಸಿದ ನಂತರ ಟೀಮ್ ಇಂಡಿಯಾವನ್ನು ಮುನ್ನಡೆಸಲು ಸರಿಯಾದ ಆಟಗಾರ ಇರುವ ವಿಷಯವನ್ನು ಎಂಎಸ್ ಧೋನಿ ಚೆನ್ನಾಗಿ ಅರಿತ ನಂತರವಷ್ಟೇ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು ಎಂದು ರವಿಶಾಸ್ತ್ರಿ ಹೇಳಿದ್ದಾರೆ. ರವಿಶಾಸ್ತ್ರಿ ಮಾತಿನ ಪ್ರಕಾರ ವಿರಾಟ್ ಕೊಹ್ಲಿ ನಾಯಕತ್ವವನ್ನು ನಿರ್ವಹಿಸುವಷ್ಟು ಜವಾಬ್ದಾರಿ ಹೊಂದಿದ್ದಾರೆ ಎಂಬ ವಿಷಯವನ್ನು ಚೆನ್ನಾಗಿ ಅರಿತ ನಂತರವಷ್ಟೇ ಎಂ ಎಸ್ ಧೋನಿ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದರು. 3 ಆವೃತ್ತಿಗಳಲ್ಲಿಯೂ ಭಾರತ ತಂಡವನ್ನು ಮುನ್ನಡೆಸಿ ಹೆಚ್ಚಿನ ಒತ್ತಡಕ್ಕೆ ಒಳಗಾಗಿದ್ದ ಎಂಎಸ್ ಧೋನಿ ಟೆಸ್ಟ್ ತಂಡದ ನಾಯಕತ್ವವನ್ನು ವಹಿಸಿಕೊಳ್ಳುವ ಆಟಗಾರನಿಗೋಸ್ಕರ ಕಾಯುತ್ತಿದ್ದರು ಎಂದು ರವಿ ಶಾಸ್ತ್ರಿ ಬಿಚ್ಚಿಟ್ಟಿದ್ದಾರೆ.