ಮುಂಬೈ, ಜುಲೈ 13: ಭಾರತೀಯ ಪುರುಷರ ಕ್ರಿಕೆಟ್ ತಂಡಕ್ಕೆ ಮುಖ್ಯ ಕೋಚ್ ಆಗಿ ರವಿಶಾಸ್ತ್ರಿ ಹಾಗೂ ಬೌಲಿಂಗ್ ಕೋಚ್ ಆಗಿ ಜಹೀರ್ ಖಾನ್ ನೇಮಕಗೊಂಡ ಎರಡು ದಿನಗಳು ಕಳೆಯುವುದರೊಳಗೆ ರವಿಶಾಸ್ತ್ರಿಯವರು ಬೌಲಿಂಗ್ ಕೋಚ್ ಸ್ಥಾನಕ್ಕೆ ಭರತ್ ಅರುಣ್ ಅವರನ್ನು ಆಯ್ಕೆ ಮಾಡಬೇಕೆಂಬ ಮನವಿಯನ್ನು ಭಾರತೀಯ ಕ್ರಿಕೆಟ್ ಸಂಸ್ಥೆಗೆ (ಬಿಸಿಸಿಐ) ಮುಂದಿಟ್ಟಿದ್ದಾರೆ.
ಈ ಹಿಂದೆ, ರವಿಶಾಸ್ತ್ರಿ ಅವರ, 2014ರಿಂದ 2016ರವರೆಗೆ ಟೀಂ ಇಂಡಿಯಾದ ನಿರ್ದೇಶಕರಾಗಿದ್ದರು. ಆ ವೇಳೆಯಲ್ಲಿ, ಭರತ್ ಅರುಣ್ ಅವರು ಟೀಂ ಇಂಡಿಯಾದ ಬೌಲಿಂಗ್ ಕೋಚ್ ಆಗಿದ್ದರು. ಅವರ ಕಾರ್ಯವೈಖರಿ ರವಿ ಶಾಸ್ತ್ರಿಗೆ ಮೆಚ್ಚುಗೆಯಾಗಿದೆಯಂತೆ.
ಟೀಂ ಇಂಡಿಯಾ ನೂತನ ಬೌಲಿಂಗ್ ಕೋಚ್ ಜಹೀರ್ ವ್ಯಕ್ತಿ ವಿಶೇಷ
ಭರತ್ ಅರುಣ್ ಅವರಿಗೆ ತಂಡದ ಬೌಲರ್ ಗಳಲ್ಲಿನ ನ್ಯೂನತೆಗಳನ್ನು ಪತ್ತೆ ಹಚ್ಚುವ ಕಲೆ ಗೊತ್ತಿದೆಯಂತೆ. ಅಲ್ಲದೆ ಭರತ್ ಅವರಿಗೆ ಕೋಚಿಂಗ್ ಕಲೆಯೂ ಇದೆಯಂತೆ.
ಇವರಿಗೆ ಹೋಲಿಸಿದರೆ, ಜಹೀರ್ ಖಾನ್ ಅವರಿಗೆ ಬೌಲಿಂಗ್ ಬಗ್ಗೆ ಅಪಾರವಾದ ಜ್ಞಾನವಿದ್ದರೂ, ಅವರಿಗೆ ಕೋಚಿಂಗ್ ನಲ್ಲಿ ಅನುಭವವಿಲ್ಲ ಎಂಬುದು ರವಿಶಾಸ್ತ್ರಿ ಹೇಳಿಕೆ.
ಭಾರತೀಯ ಕ್ರಿಕೆಟ್ ತಂಡದ ನೂತನ ಕೋಚ್ ರವಿಶಾಸ್ತ್ರಿ ವ್ಯಕ್ತಿ ವಿಶೇಷ
ಆದರೆ, ಜಹೀರ್ ಅವರ ಆಯ್ಕೆಯನ್ನು ಕೈಬಿಡಬೇಕು ಎಂಬ ಇರಾದೆಯೇನೂ ಶಾಸ್ತ್ರಿ ಅವರಿಗೆ ಇಲ್ಲವಂತೆ. ಜಹೀರ್ ಅವರು ಬೌಲಿಂಗ್ ಸಲಹೆಗಾರರಾಗಿ ಇರಲಿ. ಆದರೆ, ಮೈದಾನದಲ್ಲಿ ಬೌಲಿಂಗ್ ಕಲೆ ಅಳವಡಿಸಲು ಭರತ್ ಅವರಿಗೆ ಅವಕಾಶ ನೀಡಬೇಕೆಂದು ಶಾಸ್ತ್ರಿ ಮನವಿ ಸಲ್ಲಿಸಿದ್ದಾರೆ.