ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಲಾರ್ಡ್ಸ್ ಅಂಗಳದಲ್ಲಿ ಎರಡನೇ ಟೆಸ್ಟ್ ಪಂದ್ಯವನ್ನಾಡಲು ಸಿದ್ಧವಾಗಿದೆ. ಎರಡು ತಂಡಗಳು ಕೂಡ ಸರಣಿಯಲ್ಲಿ ಮೇಲುಗೈ ಸಾಧಿಸಲು ಐತಿಹಾಸಿಕ ಅಂಗಳದಲ್ಲಿ ಹೋರಾಟವನ್ನು ನಡೆಸಲಿದೆ. ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಓರ್ವ ಆಟಗಾರನ ವಿಶೇಷ ಸಾಮರ್ಥ್ಯದ ಬಗ್ಗೆ ಮಾತನಾಡಿದ್ದಾರೆ. ಟೀಮ್ ಇಂಡಿಯಾದ ಈ ಆಟಗಾರನಿಂದ ಇನ್ನೂ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಪೂರ್ಣ ಸಾಮರ್ಥ್ಯದ ಪ್ರದರ್ಶನ ಬಂದಿಲ್ಲ ಎಂದಿದ್ದಾರೆ.
ಟೀಮ್ ಇಂಡಿಯಾ ಆಲ್ರೌಂಡರ್ ಬಗ್ಗೆ ಸೆಹ್ವಾಗ್ ಮಾತು: ಟೀಮ್ ಇಂಡಿಯಾದ ಮಾಜಿ ಸ್ಪೋಟಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ಈ ರೀತಿಯ ಮಾತನ್ನಾಡಿರುವುದು ಆಲ್ರೌಂಡರ್ ರವೀಂದ್ರ ಜಡೇಜಾ ಕುರಿತಾಗಿ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ವಿಶ್ಲೇಷಣೆಯನ್ನು ನಡೆಸುತ್ತಿದ್ದ ಸಂದರ್ಭದಲ್ಲಿ ಸೆಹ್ವಾಗ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಟೀಮ್ ಇಂಡಿಯಾದ ಪ್ರಮುಖ ಸ್ಪಿನ್ ಬೌಲರ್ ಆಗಿ ರವೀಂದ್ರ ಜಡೇಜಾ ತಂಡದಲ್ಲಿ ಸ್ಥಾನವನ್ನು ಗಳಿಸಿರುವುದಕ್ಕೆ ಸೆಹ್ವಾಗ್ ಹರ್ಷ ವ್ಯಕ್ತಪಡಿಸಿದ್ದಾರೆ. ಆದರೆ ಆಲ್ರೌಂಡರ್ ಆಗಿ ಬ್ಯಾಟಿಂಗ್ನಲ್ಲಿ ಈಗಾಗಲೇ ನೀಡಿರುವ ಪ್ರದರ್ಶನಕ್ಕಿಂತಲೂ ಅತ್ಯುತ್ತಮ ಆಟವನ್ನು ನೀಡುವ ಸಾಮರ್ಥ್ಯವನ್ನು ಜಡೇಜಾ ಹೊಂದಿದ್ದಾರೆ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
"ಈಗ ರವೀಂದ್ರ ಜಡೇಜಾ ಭಾರತದ ಪ್ರಮುಖ ಸ್ಪಿನ್ ಬೌಲರ್ ಆಗಿದ್ದಾರೆ. ಎಡಗೈ ಸ್ಪಿನ್ನರ್ ಆಗಿರುವ ರವೀಂದ್ರ ಜಡೇಜಾ ಬ್ಯಾಟಿಂಗ್ ಮೂಲಕವೂ ತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ. ಆದರೆ ಆತ ತನ್ನ ನಿಜವಾದ ಸಾಮರ್ಥ್ಯವನ್ನು ಇನ್ನೂ ಅರಿತುಕೊಂಡಿಲ್ಲ. ಅದು ನಿಜಕ್ಕೂ ಅದ್ಭುತವಾಗಿದೆ" ಎಂದು ವೀರೇಂದ್ರ ಸೆಹ್ವಾಗ್ ಪ್ರತಿಕ್ರಿಯಿಸಿದ್ದಾರೆ.
ಎನ್ಸಿಎ ಮುಖ್ಯಸ್ಥರ ಸ್ಥಾನಕ್ಕೆ ಅರ್ಜಿ ಕರೆದ ಬಿಸಿಸಿಐ, ದ್ರಾವಿಡ್ ಮರು ಅರ್ಜಿ ಸಲ್ಲಿಕೆ ನಿರೀಕ್ಷೆ
ಟೀಮ್ ಇಂಡಿಯಾದ ಪ್ರಮುಖ ಆಟಗಾರ ಜಡೇಜಾ: ಇನ್ನು ಇದೇ ಸಂದರ್ಭದಲ್ಲಿ ರವೀಂದ್ರ ಜಡೇಜಾ ಅವರನ್ನು ಭಾರತ ಕ್ರಿಕೆಟ್ ತಮಡದ ಪ್ರಮುಖ ಆಟಗಾರ ಎಮದು ಸೆಹ್ವಾಗ್ ಬಣ್ಣಿಸಿದ್ದಾರೆ. ಇದಕ್ಕೆ ಅವರು ಕಾರಣವನ್ನು ಕೂಡ ನೀಡಿದ್ದಾರೆ. "ರವೀಮದ್ರ ಜಡೇಜಾ ಟೀಮ್ ಇಂಡಿಯಾದ ಪ್ರಮುಖ ಆಟಗಾರ. ಯಾಕೆಂದರೆ ಟೆಸ್ಟ್ ಕ್ರಿಕೆಟ್ಅನ್ನು ನಾವು ದೃಷ್ಟಿಯಲ್ಲಿಟ್ಟುಕೊಂಡು ಮಾತನಾಡುವಾಗ ಪ್ರಮುಖವಾಗಿ ಆತ 25-30 ಓವರ್ಗಳನ್ನು ಎಸೆಯಬಲ್ಲವರಾಗಿದ್ದಾರೆ. ಎರಡನೇಯದಾಗಿ ಬ್ಯಾಟ್ಸ್ಮನ್ಗಳು ವಿಕೆಟ್ ಕಳೆದುಕೊಂಡಿದ್ದಾಗ ಆತ ಏಳು ಅಥವಾ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದು ನಿರ್ಣಾಯಕ ಸಂದರ್ಭದಲ್ಲಿ ರನ್ಗಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ" ಎಂದು ವಿರೇಂದ್ರ ಸೆಹ್ವಾಗ್ ಹೇಳಿಕೆಯನ್ನು ನೀಡಿದ್ದಾರೆ.
ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಜಡೇಜಾ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ರವೀಂದ್ರ ಜಡೇಜಾ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದರು. ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಬದಲಿಗೆ ಟೀಮ್ ಇಂಡಿಯಾದ ಏಕೈಕ ಸ್ಪಿನ್ನರ್ ಆಗಿ ಕಣಕ್ಕಿಳಿದಿದ್ದರು ಜಡೇಜಾ. ನಾಟಿಂಗ್ಹ್ಯಾಮ್ನಲ್ಲಿ ನಡೆದ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಜಡೇಜಾ ಬ್ಯಾಟಿಂಗ್ ಮೂಲಕ 56 ರನ್ಗಳ ನಿರ್ಣಾಯಕ ಕಾಣಿಕೆಯನ್ನು ನೀಡಿದ್ದರು. ಈ ಮೂಲಕ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 95 ರನ್ಗಳ ಮುನ್ನಡೆಯನ್ನು ಸಾಧಿಸಲು ಸಾಧ್ಯವಾಗಿತ್ತು.
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಗುರುವಾರ ಆರಂಭವಾಗಲಿದ್ದು ಲಾರ್ಡ್ಸ್ ಅಂಗಳದಲ್ಲಿ ಈ ಪಂದ್ಯ ಆಯೋಜನೆಯಾಗಲಿದೆ. ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ಎರಡು ತಂಡಗಳಿಗೂ ಗಾಯದ ಆತಂಕ ಕಾಡುತ್ತಿದೆ. ಭಾರತದ ಪರವಾಗಿ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಶಾರ್ದೂಲ್ ಠಾಕೂರ್ ಮಂಡಿರಜ್ಜುಗಾಯಕ್ಕೊಳಗಾಗಿದ್ದರೆ ಇಂಗ್ಲೆಂಡ್ ತಂಡದ ವೇಗಿ ಸ್ಟುವರ್ಟ್ ಬ್ರಾಡ್ ಸ್ನಾಯುಸೆಳೆತಕ್ಕೆ ಒಳಗಾಗಿದ್ದಾರೆ. ಈ ಇಬ್ಬರು ಕೂಡ ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯುವ ಬಗ್ಗೆ ಇನ್ನಷ್ಟೇ ಖಚಿತವಾಗಬೇಕಿದೆ.