ಒಂದೂವರೆ ವರ್ಷ ಅವಕಾಶ ಸಿಗದೇ ನೊಂದಿದ್ದೆ
2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಬಳಿಕ ಟೀಮ್ ಇಂಡಿಯಾದ ಆಡುವ ಬಳಗದಿಂದ ನನ್ನನ್ನು ಕೈಬಿಟ್ಟರು. ಅಲ್ಲಿಂದ ಸರಿಯಾಗಿ ಒಂದೂವರೆ ವರ್ಷದ ಕಾಲ ನನಗೆ ತಂಡದಲ್ಲಿ ಆಡುವ ಅವಕಾಶವೇ ಸಿಗಲಿಲ್ಲ, ಆಗ ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ ಎಂದು ಜಡೇಜಾ ಹೇಳಿಕೊಂಡಿದ್ದಾರೆ.
5 ಗಂಟೆಯವರೆಗೂ ಮಲಗದೆ ಎದ್ದಿರುತ್ತಿದ್ದೆ
ಟೀಮ್ ಇಂಡಿಯಾದಿಂದ ಸ್ಥಾನವನ್ನು ಕಳೆದುಕೊಂಡು ಹೊರಬಿದ್ದಾಗ ನಿದ್ರೆಯಿಲ್ಲದೆ ರಾತ್ರಿ ಪೂರಾ ತಂಡಕ್ಕೆ ಹೇಗೆ ಮರಳಬೇಕು ಎಂದು ಯೋಚಿಸುತ್ತಿದ್ದೆ. ಬೆಳಗಿನ ಜಾವ 5 ಗಂಟೆಯವರೆಗೂ ನಿದ್ರೆಯಿಲ್ಲದೆ ಪರಿತಪಿಸುತ್ತಿದ್ದೆ ಎಂದು ಜಡೇಜಾ ಹೇಳಿಕೊಂಡಿದ್ದಾರೆ.
ತಂಡದಲ್ಲಿದ್ದರೂ ಆಡುವ ಅವಕಾಶ ನೀಡುತ್ತಿರಲಿಲ್ಲ
ವಿವಿಧ ಸರಣಿಗಳಿಗೆ ಟೀಮ್ ಇಂಡಿಯಾ ತಂಡ ಪ್ರಕಟವಾದಾಗ ಜಡೇಜಾ ಹೆಸರು ಕೂಡ ಇರುತ್ತಿತ್ತು, ಆದರೆ ಆಡುವ ಬಳಗದಲ್ಲಿ ಮಾತ್ರ ಜಡೇಜಾರನ್ನು ಸೇರಿಸಿಕೊಳ್ಳದೇ ಕೈಬಿಡಲಾಗುತ್ತಿತ್ತು. ಹೀಗಾಗಿ ತಂಡದಲ್ಲಿ ಅವಕಾಶ ಸಿಗದೇ ಇದ್ದರೂ ಸಹ ತಂಡದ ಜೊತೆ ಪ್ರವಾಸವನ್ನು ಕೈಗೊಳ್ಳುತ್ತಿದೆ ಎಂದು ಜಡೇಜಾ ಹೇಳಿಕೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಸರಣಿಯ ಮೂಲಕ ಮತ್ತೆ ಯಶಸ್ಸಿನ ಹಾದಿಗೆ ಮರಳಿದರು
2018ರಲ್ಲಿ ನಡೆದ ಓವಲ್ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಆಡುವ ಅವಕಾಶವನ್ನು ಪಡೆದುಕೊಂಡು ಅತ್ಯದ್ಭುತ ಪ್ರದರ್ಶನವನ್ನು ನೀಡಿದ್ದರು. ಟೀಮ್ ಇಂಡಿಯಾ 6 ವಿಕೆಟ್ಗೆ 160 ರನ್ ಗಳಿಸಿ ಸಂಕಷ್ಟದಲ್ಲಿತ್ತು. ಈ ಸಂದರ್ಭದಲ್ಲಿ ಆಪತ್ಬಾಂಧವನ ಆಟವನ್ನಾಡಿದ ಜಡೇಜಾ 86 ರನ್ ಬಾರಿಸಿ ತಂಡದ ಮೊತ್ತ 332 ತಲುಪುವಂತೆ ಮಾಡಿದರು. ಈ ಪಂದ್ಯದ ಬಳಿಕ ತಂಡದಲ್ಲಿ ಖಾಯಂ ಸ್ಥಾನವನ್ನು ಪಡೆದುಕೊಂಡ ಜಡೇಜಾ ಸತತವಾಗಿ ಟೀಮ್ ಇಂಡಿಯಾ ಪರ ಉತ್ತಮ ಪ್ರದರ್ಶನವನ್ನು ನೀಡುತ್ತಾ ಬಂದಿದ್ದಾರೆ.