ಲೌಡರ್ಹಿಲ್, ಆಗಸ್ಟ್ 04: ಅಮೆರಿಕದ ನೆಲದಲ್ಲಿ ಟೀಮ್ ಇಂಡಿಯಾಗೆ ನೂತನ ಸ್ಟಾರ್ ಬೌಲರ್ನ ಆಗಮನವಾಗಿದೆ. ವೆಸ್ಟ್ ಇಂಡೀಸ್ ವಿರುದ್ಧ ಫ್ಲೋರಿಡಾದಲ್ಲಿ ಇದೇ ಶನಿವಾರ ನಡೆದ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ದಿಲ್ಲಿ ಎಕ್ಸ್ಪ್ರೆಸ್ ನವದೀಪ್ ಸೈನಿ ಆಡಿದ ಮೊದಲ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಗೌರವ ಸಂಪಾದಿಸಿದ್ದಾರೆ.
ಪಂದ್ಯದಲ್ಲಿ ಭಾರತ ತಂಡ ವಿಂಡೀಸ್ ಪಡೆಯನ್ನು 4 ವಿಕೆಟ್ಗಳಿಂದ ಮಣಿಸಿತ್ತು. ಈ ಸಂದರ್ಭದಲ್ಲಿ ಜಯ ತಂದುಕೊಟ್ಟ 26 ವರ್ಷದ ಯುವ ವೇಗಿಯನ್ನು ಗುಣಗಾನ ಮಾಡುವಲ್ಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಿಂದೇಟಾಕಲಿಲ್ಲ.
ಸೈನಿ ಸಾಮರ್ಥ್ಯ ಪ್ರಶ್ನಿಸಿದ್ದವರಿಗೆ ನಾಚಿಕೆಯಾಗಬೇಕು: ಗಂಭೀರ್
ಪಂದ್ಯದ ಬಳಿಕ ಮಾತಿಗಿಳಿದ ಕಿಂಗ್ ಕೊಹ್ಲಿ, "ಪಂದ್ಯದಲ್ಲಿ ನಮ್ಮ ಬೌಲರ್ಗಳ ಪ್ರದರ್ಶನ ಅದ್ಭುತವಾಗಿತ್ತು. ಸೈನಿ ದಿಲ್ಲಿಯವರು. ಅವರು ಅಪ್ಪಟ ದೇಶಿ ಪ್ರತಿಭೆ. ಅದ್ಭುತ ವೇಗ. ಅವರು ಗಂಟೆಗೆ 150 ಕಿ.ಮೀ ವೇಗದಲ್ಲಿ ಬೌಲ್ ಮಾಡಬಲ್ಲರು. ಇಷ್ಟು ವೇಗ ಹೊಂದಿರುವ ಬೌಲರ್ಗಳ ಸಂಖ್ಯೆ ಬಹಳ ಕಡಿಮೆ. ಜೊತೆಗೆ ಅವರ ಫಿಟ್ನೆಸ್ ಅದ್ಭುತವಾಗಿದೆ," ಎಂದು ಕೊಹ್ಲಿ ಭಾರತ ತಂಡಕ್ಕೆ ಎಂಟ್ರಿ ಕೊಟ್ಟಿರುವ ಯುವ ವೇಗಿಯ ಬೆನ್ನು ತಟ್ಟಿದ್ದಾರೆ.
"ತಮ್ಮ ಹೆಸರನ್ನು ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ಯಬಲ್ಲ ಸಾಮರ್ಥ್ಯ ಅವರರಲ್ಲಿದೆ. ಇದನ್ನು ಸಾಧಿಸುವ ಹಸಿವು ಅವರಲ್ಲಿದೆ. ಇಲ್ಲಿಂದ ಅವರು ತಮ್ಮ ವೃತ್ತಿ ಬದುಕನ್ನು ಕಟ್ಟುತ್ತಾ ಸಾಗುತ್ತಾರೆಂದು ನಂಬಿದ್ದೇನೆ," ಎಂದಿದ್ದಾರೆ.
ಟೀಮ್ ಇಂಡಿಯಾ ವಿರುದ್ಧ ಮುಗ್ಗರಿಸಿದ ಬಳಿಕ ವಿಂಡೀಸ್ ನಾಯಕ ಹೇಳಿದ್ದಿದು
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್, 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 95 ರನ್ಗಳನ್ನು ಮಾತ್ರವೇ ದಾಖಲಿಸಿತು. ಬಳಿಕ ಗುರಿ ಬೆನ್ನತ್ತಿದ ಭಾರತ ತಂಡ 17.2 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 98 ರನ್ ದಾಖಲಿಸಿ ಶುಭಾರಂಭ ಮಾಡಿತು. ಸರಣಿಯ ಎರಡನೇ ಪಂದ್ಯವೂ ಫ್ಲೋರಿಡಾದಲ್ಲೇ ಭಾನುವಾರ ನಡೆಯಲಿದೆ.
ಮೊದಲ ಟಿ20: ಸೈನಿ-ಭುವಿ ಬೌಲಿಂಗ್ ದಾಳಿಗೆ ಶರಣಾದ ವೆಸ್ಟ್ ಇಂಡೀಸ್
ಇದೇ ವೇಳೆ ಲೌಡರ್ಹಿಲ್ ಕ್ರೀಡಾಂಗಣದ ಪಿಚ್ ಬಗ್ಗೆ ಮಾತನಾಡಿದ ಕೊಹ್ಲಿ, "ಇಲ್ಲಿನ ಪಿಚ್ ನಿಜಕ್ಕೂ ಅಷ್ಟೇನು ಉತ್ತಮವಾದುದ್ದಲ್ಲ. ಕೆಲ ದಿನಗಳಿಂದ ಮಳೆ ಸುರಿಯುತ್ತಿರುವ ಕಾರಣ ಪಿಚ್ ಬಗ್ಗೆ ಹೆಚ್ಏನು ಮಾಡಲು ಸಾಧ್ಯವಾಗಿಲ್ಲ. ಪಂದ್ಯ ನಡೆಯಲು ಸಾಧ್ಯವಾಗುವಂತೆ ಮಾಡಿರುವುದು ಪ್ರಶಂಸಾರ್ಹ. ನಾಲ್ಕು ವಿಕೆಟ್ ನಷ್ಟದಲ್ಇ ಈ ಗುರಿ ಮುಟ್ಟಬೇಕೆಂದು ಲೆಕ್ಕಾಚಾರ ಮಾಡಿದ್ದೆವು. ಆದರೆ, ಚೆಂಡು ಹಳೆಯದಾಗುತ್ತಿದ್ದಂತೆ ರನ್ ಗಳಿಸುವುದು ಕಷ್ಟವಾಯಿತು," ಎಂದು ಹೇಳಿದ್ದಾರೆ.