ಬೆಂಗಳೂರು, ಏಪ್ರಿಲ್ 26: ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕಳಪೆ ಬೌಲಿಂಗ್ನಿಂದಾಗಿ ದಂಡ ತೆತ್ತ ಆರ್ಸಿಬಿ ನಾಯಕ ಮತ್ತೊಂದು ದಂಡವನ್ನು ತೆರಬೇಕಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಬೃಹತ್ ಮೊತ್ತವನ್ನು ಕಲೆಹಾಕಿದ್ದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅದನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲವಾಗಿತ್ತು. 206 ರನ್ಗಳ ಗುರಿಯನ್ನು ಬೆನ್ನತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ 74 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಬಳಿಕ ಜತೆಗೂಡಿದ ಅಂಬಾಟಿ ರಾಯುಡು ಮತ್ತು ಮಹೇಂದ್ರ ಸಿಂಗ್ ಧೋನಿ, ಆರ್ಸಿಬಿ ಬೌಲರ್ಗಳ ಮೇಲೆ ಪ್ರಹಾರ ನಡೆಸಿದ್ದರು. ಬೌಂಡರಿ ಸಿಕ್ಸರ್ಗಳನ್ನು ಲೀಲಾಜಾಲವಾಗಿ ಸಿಡಿಸಿದ್ದರು.
ಬೌಲರ್ಗಳ ವೈಫಲ್ಯ ನಾಯಕ ವಿರಾಟ್ ಕೊಹ್ಲಿ ಅವರನ್ನು ಕಂಗೆಡಿಸಿತ್ತು. ಪದೇ ಪದೇ ಫೀಲ್ಡರ್ಗಳ ಬದಲಾವಣೆಗೆ ಹೆಚ್ಚು ಸಮಯ ತೆಗೆದುಕೊಂಡಿದ್ದರು. ಇದರಿಂದ ನಿಗದಿತ ಅವಧಿಯೊಳಗೆ ಓವರ್ಗಳನ್ನು ಪೂರ್ಣಗೊಳಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಇದಕ್ಕಾಗಿ ಅವರಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಸಿಎಸ್ಕೆ ಆಟಗಾರರನ್ನು ಕಟ್ಟಿಹಾಕಲು, ಫೀಲ್ಡಿಂಗ್ನಲ್ಲಿ ಬದಲಾವಣೆ ಮಾಡಲು ಕೊಹ್ಲಿ ಮತ್ತು ತಂಡದ ಸಹ ಆಟಗಾರರು ಹೆಚ್ಚು ಸಮಯ ತೆಗೆದುಕೊಂಡಿದ್ದರು. ಇದರಿಂದ ನಿಗದಿತ ಸಮಯದಲ್ಲಿ ಓವರ್ ಪೂರ್ಣಗೊಳಿಸುವುದು ಸಾಧ್ಯವಾಗಿರಲಿಲ್ಲ.
ಐಪಿಎಲ್ ನೀತಿ ಸಂಹಿತೆ ಅಡಿಯಲ್ಲಿ ವಿಳಂಬ ಬೌಲಿಂಗ್ ನಿರ್ವಹಣೆಗಾಗಿ ಮೊದಲ ಬಾರಿಗೆ ಆರ್ಸಿಬಿ ದಂಡ ತೆರಬೇಕಾಗಿದೆ. ಪ್ರಸಕ್ತ ಅವಧಿಯಲ್ಲಿ ನಿಗದಿತ ಅವಧಿಯಲ್ಲಿ ಬೌಲಿಂಗ್ ಪೂರ್ಣಗೊಳಿಸಲು ಕೊಹ್ಲಿ ವಿಫಲರಾಗಿ ದಂಡ ತೆರುತ್ತಿರುವುದು ಇದೇ ಮೊದಲು. 24 ಪಂದ್ಯಗಳಲ್ಲಿ ಇದುವರೆಗೆ ಎರಡು ಪಂದ್ಯಗಳು ಮಾತ್ರ ನಿಗದಿತ ಅವಧಿಯೊಳಗೆ ಮುಗಿದಿವೆ. 200 ನಿಮಿಷಗಳ ನಿರ್ದಿಷ್ಟ ಸಮಯದ ಬಳಿಕ ಆಟವನ್ನು ಪೂರ್ಣಗೊಳಿಸಲು ಸರಾಸರಿ 18.67 ನಿಮಿಷ ಹೆಚ್ಚುವರಿ ತೆಗೆದುಕೊಳ್ಳಲಾಗುತ್ತಿದೆ.