ದುಬೈ,ಸೆ. 21: ಇಂಗ್ಲೆಂಡಿನ ಮಾಜಿ ನಾಯಕ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಒಂದು ಕಾಲದ ಕ್ಯಾಪ್ಟನ್ ಕೆವಿನ್ ಪೀಟರ್ಸನ್ ಅವರು ಆರ್ ಸಿಬಿ ದೌರ್ಬಲ್ಯದ ಬಗ್ಗೆ ಮಾತನಾಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 13ರಲ್ಲಿ ಆರ್ ಸಿಬಿಯ ದೌರ್ಬಲ್ಯವೇ ಶಕ್ತಿಯಾಗಿ ಪರಿಣಮಿಸಬಹುದು ಎಂದಿದ್ದಾರೆ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕತ್ವದ ಆರ್ ಸಿಬಿ ಅತ್ಯಂತ ಬಲಿಷ್ಠ ಬ್ಯಾಟಿಂಗ್ ಕ್ರಮಾಂಕವನ್ನು ಹೊಂದಿದೆ. ಎಂಥಾ ದೊಡ್ಡ ಮೊತ್ತವನ್ನು ಬೇಕಾದರೂ ಪೇರಿಸಬಹುದು ಆಥವಾ ಚೇಸ್ ಮಾಡಬಹುದು. ಆದರೆ, ಎಲ್ಲರಿಗೂ ತಿಳಿದಿರುವಂತೆ ಆರ್ ಸಿಬಿಯ ಮುಖ್ಯ ದೌರ್ಬಲ್ಯ ಬೌಲಿಂಗ್.
ಈ ಸಲ ಕಪ್ ಈ ತಂಡಕ್ಕೆ-ಕ್ರಿಕೆಟ್ ಬುಕ್ಕಿಗಳ ಭವಿಷ್ಯ ಬಹಿರಂಗ
ಆದರೆ, ಈ ಬಾರಿ ಯುಎಇಯ ಪಿಚ್ ಗಳು ಆರ್ ಸಿಬಿಯ ಬೌಲಿಂಗ್ ಪಡೆಗೆ ಹೆಚ್ಚು ನೆರವಾಗುವ ಸಾಧ್ಯತೆಗಳಿವೆ. ಸ್ಟಾರ್ ಸ್ಫೋರ್ಟ್ಸ್ ಶೋವೊಂದರಲ್ಲಿ ಮಾತನಾಡಿದ ಕೆಪಿ, ''ಶ್ರೇಷ್ಠ ಬ್ಯಾಟ್ಸ್ ಮನ್ ಗಳನ್ನು ಹೊಂದಿರುವ ಆರ್ ಸಿಬಿಗೆ ಈ ಬಾರಿ ಲಯದಲ್ಲಿರುವ ಬೌಲರ್ ಗಳು ಸಿಕ್ಕಿದ್ದಾರೆ. ಡೇಲ್ ಸ್ಟೇನ್ ವೇಗ ಹಾಗೂ ಆಡಂ ಝಂಪಾ ಸ್ಪಿನ್ ಜೊತೆಗೆ ಯಜುವೇಂದ್ರ ಚಾಹಲ್ ಮ್ಯಾಜಿಕ್ ವರ್ಕ್ ಆಗುವ ಭರವಸೆ ಇದೆ'' ಎಂದಿದ್ದಾರೆ.
ಐಪಿಎಲ್ 2020: ಬೇರೆ ಬೇರೆ ತಂಡಗಳಲ್ಲಿರುವ ಕನ್ನಡಿಗರ ಸಂಪೂರ್ಣ ಪಟ್ಟಿ
ಸೆ. 21ರಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮೊದಲ ಪಂದ್ಯವನ್ನು ಆರ್ ಸಿಬಿ ಆಡಲಿದ್ದು, ದುಬೈ, ಅಬುದಾಭಿ, ಶಾರ್ಜಾ ಮೈದಾನಗಳಿಗೂ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೂ ಭಾರಿ ವ್ಯತ್ಯಾಸವಿದೆ. ಮೋಯಿನ್ ಅಲಿ ಹಾಗೂ ವಾಷಿಂಗ್ಟನ್ ಸುಂದರ್ ಆಲ್ ರೌಂಡರ್ ಆಗಿ ಕಣಕ್ಕಿಳಿಸಬಹುದ, ಉಮೇಶ್ ಯಾದವ್, ಕ್ರಿಸ್ ಮೋರಿಸ್ ಅಲ್ಲದ ನವದೀಪ್ ಸೈನಿ ಕೂಡಾ ಬೌಲಿಂಗ್ ವಿಭಾಗದಲ್ಲಿದ್ದಾರೆ. ಪಿಚ್ ಸ್ವಭಾವಕ್ಕೆ ತಕ್ಕಂತೆ ತಂಡದ ಆಯ್ಕೆ ಮುಖ್ಯ, ಹಲವು ಬಾರಿ ಆಡುವ ಹನ್ನೊಂದು ಮಂದಿ ಆಯ್ಕೆಯಲ್ಲಿ ಆರ್ ಸಿಬಿ ಮ್ಯಾನೇಜ್ಮೆಂಟ್ ಎಡವಿ ಭಾರಿ ಬೆಲೆ ತೆತ್ತಿದೆ. ಈ ಬಾರಿ ಸಮತೋಲನ ಕಾಯ್ದುಕೊಂಡರೆ ಒಳ್ಳೆ ಫಲಿತಾಂಶ ಸಾಧ್ಯವಿದೆ ಎಂದು ಕೆವಿನ್ ಹೇಳಿದರು.