ನವದೆಹಲಿ, ಡಿಸೆಂಬರ್ 02 : ಶ್ರೀಲಂಕಾ ವಿರುದ್ಧ ನವದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನ ಭಾರತ ಬ್ಯಾಟ್ಸ್ಮನ್ಗಳು ಸ್ಪಷ್ಟ ಮೇಲುಗೈ ಸಾಧಿಸಿದ್ದಾರೆ.
3ನೇ ಟೆಸ್ಟ್: ಮೊದಲ ದಿನದಾಂತ್ಯಕ್ಕೆ ಭಾರತ 371ಕ್ಕೆ 4
ವಿರಾಟ್ ಕೋಹ್ಲಿ ಮತ್ತು ಆರಂಭಿಕ ಬ್ಯಾಟ್ಸ್ಮನ್ ಮುರಳಿ ವಿಜಯ್ ಅವರ ಅಮೋಘ ಶತಕದ ನೆರವಿನಿಂದ ಮೊದಲ ದಿನದಾಂತ್ಯಕ್ಕೆ ಭಾರತ 371/4 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿದೆ.
ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ಆರಂಭದ ಆಘಾತ ಎದುರಾಯ್ತು. 23 ರನ್ ಗಳಿಸಿ ಉತ್ತಮವಾಗಿಯೇ ಆಡುತ್ತಿದ್ದ ಶೀಖರ್ ಧವನ್ ದಿಲ್ರುವಾನ್ ಪೆರೆರಾ ಬೌಲಿಂಗ್ ನಲ್ಲಿ ಸುರಂಗಾ ಲಕ್ಮಲ್ಗೆ ಕ್ಯಾಚಿತ್ತು ಪವಿಲಿಯನ್ಗೆ ಮರಳಿದರು ಆಗ ಭಾರತದ ಸ್ಕೋರ್ ಇನ್ನೂ 42.
ನಂತರ ಆರಂಭಿಕ ಬ್ಯಾಟ್ಸ್ಮನ್ ಮುರಳಿ ವಿಜಯ್ಗೆ ಜತೆಯಾದ ಕಳೆದ ಮ್ಯಾಚಿನಲ್ಲಿ ಶತಕ ಭಾರಿಸಿದ್ದ ಚೆತೇಶ್ವರ್ ಪುಜಾರ ಅವರು ಕೂಡ ಶಿಖರ್ ಗಳಿಸದಷ್ಟೆ ರನ್ ಗಳಿಸಿ ಲಹಿರು ಗಮಾಗೆ ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. 78 ರನ್ಗಳಿಗೆ ಪ್ರಮುಖವಾದ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತವನ್ನು ಸಧೃಡ ಸ್ಥಿತಿಗೆ ತಂದದ್ದು ಮುರಳಿ ವಿಜಯ್ ಹಾಗೂ ವಿರಾಟ್ ಕೋಹ್ಲಿ.
ಎಚ್ಚರಿಕೆಯಿಂದ ಆಟವಾಡಿದ ಮುರಳಿ ವಿಜಯ್ 267 ಚೆಂಡೆದುರಿಸಿ ಭರ್ಜರಿ 156 ರನ್ ಗಳಿಸಿ ಶ್ರೀಲಂಕಾ ಬೌಲರ್ಗಳ ತಾಳ್ಮೆ ಪರೀಕ್ಷೆ ಮಾಡಿದರು. ಅವರ ಜಾಣ್ಮೆ ಭರಿತ ಇನ್ನಿಂಗ್ಸ್ನಲ್ಲಿ 13 ಬೌಂಡರಿಗಳಿದ್ದವು. ಶತಕ ಬಾರಿಸಿದ ಕೂಡಲೆ ತಮ್ಮ ಆಯ್ಕೆಗೆ ಕಾರಣವಾದ ವಿರಾಟ್ ಕೋಹ್ಲಿ ಅವರನ್ನು ಬಿಗಿದಪ್ಪಿಕೊಂಡ ವಿಜಯ್ ಅಂಕಣದಲ್ಲಿ ಸಣ್ಣ ನೃತ್ಯವನ್ನೂ ಮಾಡಿ ರಂಜಿಸಿದರು. ಕೊನೆಗೆ ಲಕ್ಷಣ್ ಸಂದಕಾನ್ ಅವರಿಗೆ ವಿಕೆಟ್ ಒಪ್ಪಿಸಿ ಹೊರ ನಡೆದರು.
ಲಗು ಬಗೆಯ ಆಟವಾಡಿದ ವಿರಾಟ್ ಕೋಹ್ಲಿ ಚೆಂಡನ್ನು ಅಂಗಳದ ಎಲ್ಲ ಭಾಗಗಳಿಗೂ ಅಟ್ಟಿದರು. 156 ರನ್ ಭಾರಿಸಿದ ಕೋಹ್ಲಿ ಇದಕ್ಕಾಗಿ ತೆಗೆದುಕೊಂಡದ್ದು 186 ಬಾಲ್ ಅಷ್ಟೆ. 16 ಬೌಂಡರಿಗಳನ್ನು ಸಿಡಿಸಿದ ಅವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ 86.87. ವಿರಾಟ್ ಆಟವನ್ನು ನಾಳೆಗೂ ಇರಿಸಿಕೊಂಡಿದ್ದಾರೆ.
ವೃತ್ತಿ ಜೀವನದ 52ನೇ ಶತಕ ಭಾರಿಸಿದ ಕೋಹ್ಲಿ ಅವರು ಟೆಸ್ಟ್ ಕ್ರಿಕೆಟ್ನಲ್ಲಿ 5000 ರನ್ ಕೂಡ ಪೂರೈಸಿದರು. ಆ ಮುಲಕ 5000 ರನ್ ಪೂರೈಸಿದ ಭಾರತದ 11 ನೇ ಬ್ಯಾಟ್ಸ್ಮನ್ ಆದರು. ಮುರಳಿ ವಿಜಯ್ ನಂತರ ಬಂದ ಅಜಿಂಕ್ಯಾ ರಹಾನೆ ಇಲ್ಲಿಯೂ ತಮ್ಮ ಕಳಪೆ ಫಾರ್ಮ್ ಮುಂದುವರೆಸಿ ಕೇವಲ 1 ರನ್ಗೆ ಔಟಾಗಿ ಪೆಚ್ಚು ಮೋರೆ ಹಾಕಿಕೊಂಡು ಪೆವಿಲಿಯನ್ಗೆ ತೆರಳಿದರು.
ರಹಾನೆ ಸ್ಥಾನ ತುಂಬಿದ ರೋಹಹಿತ್ ಶರ್ಮಾ 6 ರನ್ಗಳಿಸಿ ಸ್ಕ್ರೀಸ್ನಲ್ಲಿದ್ದಾರೆ.
ಶ್ರೀಲಂಕಾದ ಬೌಲರ್ಗಳಿಗೆ ಉತ್ತಮ ದಿನವಲ್ಲವಾದರೂ, ಲಕ್ಷಣ್ ಸಂದ್ಕಾನ್ 2 ವಿಕೆಟ್ ಕಬಳಿಸಿ ಗಮನ ಸೆಳೆದರು, ಇನ್ನುಳಿದಂತೆ ಲಹೇರು ಗಮಾಗೆ ಮತ್ತು ದಿಲ್ರುವಾನ್ ಪೆರೆರಾ ತಲಾ ಒಂದು ವಿಕೆಟ್ ಪಡೆದರು.