ಪಾಕಿಸ್ತಾನ ಕ್ರಿಕೆಟ್ ತಂಡ ಇಂಗ್ಲೆಂಡ್ ನೆಲದಲ್ಲಿ ಟೂರ್ನಿಯ ಮೊದಲ ಗೆಲುವನ್ನು ಸಾದಿಸುವಲ್ಲಿ ಯಶಸ್ವಿಯಾಗಿದೆ. ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ 5 ರನ್ಗಳ ರೊಚಕ ಗೆಲುವನ್ನು ಸಾಧಿಸಿದೆ. ಈ ಮೂಲಕ ಟಿ20 ಸರಣಿಯನ್ನು 1-1 ಅಂತರದಿಂದ ಸಮಬಲ ಮಾಡಿಕೊಂಡಿದೆ.
ಪಾಕಿಸ್ತಾನದ ತಂಡದ ಈ ಗೆಲುವಿಗೆ ಮಾಜಿ ಪಾಕಿಸ್ತಾನದ ವೇಗಿ ಶೋಯೆಬ್ ಅಖ್ತರ್ ಕಾರಣವನ್ನು ಹೇಳಿದ್ದಾರೆ. ಕಡೆಗೂ ಪಾಕಿಸ್ತಾನ ಬುದ್ಧಿ ಕಲಿತುಕೊಂಡಿದೆ. ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ತಂಡ ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಶೋಯೆಬ್ ಅಕ್ತರ್ ಗೆಲುವಿಗೆ ಪ್ರತಿಕ್ರಿಯಿಸಿದ್ದಾರೆ.
ಟಿ20 ಹೈಲೈಟ್ಸ್: ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಪಾಕಿಸ್ತಾನ
ಇಂಗ್ಲೆಂಡ್ ವಿರುದ್ಧದ ಮೂರನೇ ಪಂದ್ಯದಲ್ಲಿ ಪಾಕಿಸ್ತಾನ ಸರಿಯಾದ ಆಟಗಾರರ ತಂಡವನ್ನು ಆಯ್ಕೆಮಾಡಿಕೊಂಡಿದೆ. ಇದು ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು. ಈ ಮೂಲಕ ಕೊನೆಗೂ ಪಾಕಿಸ್ತಾನ ತಂಡ ಪಾಠ ಕಲಿತುಕೊಂಡಿದೆ ಎಂದಿದ್ದಾರೆ ಪಾಕಿಸ್ತಾನದ ಮಾಜಿ ವೇಗಿ ಶೊಯೆಬ್ ಅಖ್ತರ್.
ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ತಂಡದಲ್ಲಿ ವಾಹಬ್ ರಿಯಾಜ್, ಯುವ ಕ್ರಿಕೆಟಿಗ ಹೈದರ್ ಅಲಿ ಹಾಗೂ ಸರ್ಫರಾಜ್ ಅಹ್ಮದ್ಗೆ ಅವಕಾಶವನ್ನು ನೀಡಿತ್ತು. "ನಾನು ಪದೇ ಪದೆ ಹೇಳಿದ್ದೆ, ಯುವ ಆಟಗಾರರನ್ನು ಬಳಸಿಕೊಳ್ಳುವಂತೆ. ಹೈದರ್ ಅಲಿಗೆ ಕೊನೆಗೂ ಅವಕಾಶ ದೊರೆಯಿತು. ಸಿಕ್ಕ ಅವಕಾಶವನ್ನು ಆತ ಹೇಗೆ ಬಳಸಿಕೊಂಡಿದ್ದಾನೆ ಎಂದು ನೋಡಿಕೊಳ್ಳಿ ಎಂದು ಶೋಯೆಬ್ ಅಖ್ತರ್ ತಮ್ಮ ಯುಟ್ಯೂಬ್ ಚಾನೆಲ್ನಲ್ಲಿ ಪ್ರತಿಕ್ರಿಯಿಸಿದ್ದಾರೆ.
'ಪದಾರ್ಪಣಾ ಪಂದ್ಯದಲ್ಲಿ ಯುವ ಕ್ರಿಕೆಟಿಗ ಬಾರಿಸಿದ ಅರ್ಧಶತಕವನ್ನು ನೋಡಲು ತುಂಬಾ ಖುಷಿಯಾಯಿತು. ತಂಡದ ಆಯ್ಕೆಯ ಕ್ರಮವೇ ಮೂರನೇ ಪಂದ್ಯದ ಗೆಲುವಿಗೆ ಕಾರಣವಾಯಿತು' ಎಂದಿ ಅಖ್ತರ್ ಪ್ರತಿಕ್ರಿಯಿಸಿದ್ದಾರೆ. ಇದೇ ಸಂದರ್ಭದಲ್ಲಿ ಹಫೀಜ್ ಅನುಭವದ ಆಟವನ್ನು ಹೊಗಳಿದರೆ ಶೋಯೆಬ್ ಮಲಿಕ್ಗೆ ಇದು ಎಚ್ಚರಿಕೆಯ ಗಂಟೆ ಎಂದು ಹೇಳಿದರು.