ಬೆಂಗಳೂರು, ಸೆ. 16: ಅಡ್ಡಾದಿಡ್ಡಿ ಶಾಟ್ ಹೊಡೆದು ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರುವುದನ್ನು ರಿಷಬ್ ಪಂತ್ ಮುಂದುವರೆಸಿದರೆ ತಕ್ಕಶಾಸ್ತಿ ಮಾಡಬೇಕಾಗುತ್ತದೆ ಎಂದು ಟೀಂ ಇಂಡಿಯಾದ ಮುಖ್ಯ ಕೋಚ್ ರವಿಶಾಸ್ತ್ರಿ ಹಾಗೂ ನಾಯಕ ವಿರಾಟ್ ಕೊಹ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಟೀಂ ಇಂಡಿಯಾದ ಯುವ ಪ್ರತಿಭಾವಂತ ವಿಕೆಟ್ ಕೀಪರ್ ಬ್ಯಾಟ್ಸಮನ್ ರಿಷಬ್ ಪಂತ್ ಅವರು ಇತ್ತೀಚೆಗೆ ಮುಕ್ತಾಯವಾದ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ ಅದ್ರಲ್ಲೂ ಟ್ರಿನಿಡಾಡ್ ನಲ್ಲಿ ಮೊದಲ ಎಸೆತದಲ್ಲೇ ಪಂತ್ ಔಟಾದ ರೀತಿ ನೋಡಿ ಕೋಚ್ ಶಾಸ್ತ್ರಿಗೆ ಪಿತ್ತ ನೆತ್ತಿಗೇರಿದೆ. ಪ್ರತಿಭೆಗೆ ತಕ್ಕ ಪ್ರದರ್ಶನ ನೀಡುವ ಭರವಸೆ ಇದೆ ಆದರೆ, ಇದೇ ರೀತಿ ಕೆಟ್ಟ ಹೊಡೆತಕ್ಕೆ ಯತ್ನಿಸಿ ಔಟಾಗುವುದನ್ನು ಮುಂದುವರೆಸಿದರೆ, ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಸಂದರ್ಶನವೊಂದರಲ್ಲಿ ರವಿಶಾಸ್ತ್ರಿ ಹೇಳಿದ್ದಾರೆ.
ವಿಜಯ್ ಹಜಾರೆ ಟ್ರೋಫಿ: ಸೆ. 24ರಿಂದ ಕರ್ನಾಟಕದ ಪಂದ್ಯ, ವೇಳಾಪಟ್ಟಿ
ಇಡೀ ತಂಡ ನಿಮ್ಮ ಮೇಲೆ ಭರವಸೆ ಇಟ್ಟುಕೊಂಡಿದ್ದಾಗ, ಪದೇ ಪದೇ ನಂಬಿಕೆಯನ್ನು ಸುಳ್ಳಾಗಿಸಿದರೆ ಹೇಗೆ? ಪ್ರತಿಭೆಯ ಜೊತೆಗೆ ಆಡುವಾಗ ಸ್ವಲ್ಪ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದು ಒಳ್ಳೆಯದು ಎಂದು ಕಿವಿಮಾತನ್ನು ಹೇಳಿದ್ದಾರೆ.
'ರಿಷಪ್ ಪಂತ್ ಬ್ಯಾಟಿಂಗ್ ಶೈಲಿ ಬಗ್ಗೆ ಯಾರು ಪ್ರಶ್ನಿಸುತ್ತಿಲ್ಲ, ಆದರೆ, ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ಆಡುವುದು, ಶಾಟ್ ಆಯ್ಕೆ ಎಲ್ಲವನ್ನು ಅರಿತು ಆಡುವುದು ಮುಖ್ಯ, ಐಪಿಎಲ್ ನಲ್ಲಿ ಎಷ್ಟೋ ಕ್ಲಿಷ್ಟಕರ ಸನ್ನಿವೇಶಗಳನ್ನು ಎದುರಿಸಿ ಆಡಿದ ಅನುಭವವನ್ನು ಪಂತ್ ಹೊಂದಿದ್ದಾರೆ. ಸರಿಯಾದ ಸಮಯದಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡುವುದು ಮುಖ್ಯ' ಎಂದು ರವಿಶಾಸ್ತ್ರಿ ಹೇಳಿದರು.
ವಿರಾಟ್ ಕೊಹ್ಲಿ ಮಾತನಾಡಿ, "ಪಂತ್ ಆಡುವ ರೀತಿ ಆಡಲು ಎಲ್ಲರೂ ಇಷ್ಟ ಪಡುತ್ತಾರೆ, ಆದರೆ, ಪಂತ್ ಔಟಾಗುವ ರೀತಿ, ಬೇಡದ ಹೊಡೆತಕ್ಕೆ ವಿಕೆಟ್ ಒಪ್ಪಿಸುವುದನ್ನು ನೋಡಿದರೆ ಕಿರಿಕಿರಿಯಾಗುತ್ತದೆ" ಎಂದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಬಳಿಕ ಮೂರು ಟೆಸ್ಟ್ ಪಂದ್ಯಗಳ ಸರಣಿ ಇದೆ. ನಂತರ ನವೆಂಬರ್ ನಲ್ಲಿ ಬಾಂಗ್ಲಾದೇಶ, ಆನಂತರ ನ್ಯೂಜಿಲೆಂಡ್ ಪ್ರವಾಸ ಕಾದಿದೆ. ಪಂತ್ ತಮ್ಮ ಆಟವನ್ನು ಸುಧಾರಿಸಿಕೊಳ್ಳದಿದ್ದರೆ ಸ್ಥಾನ ಉಳಿಸಿಕೊಳ್ಳುವುದು ಕಷ್ಟ ಎಂಬ ಮುನ್ಸೂಚನೆಯಂತೂ ಸಿಕ್ಕಿದೆ.