ಐಪಿಎಲ್ 14ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಯುವ ಆಟಗಾರ ರಿಷಬ್ ಪಂತ್ ಮುನ್ನಡೆಸಲಿದ್ದಾರೆ. ಈ ಮೂಲಕ ಪಂತ್ ತಮ್ಮ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ. ಡೆಲ್ಲಿ ನಾಯಕ ಶ್ರೇಯಸ್ ಐಯ್ಯರ್ ಗಾಯಗೊಂಡು ಟೂರ್ನಿಯಿಂದಲೇ ಹೊರಬಿದ್ದ ಕಾರಣ ಪಂತ್ಗೆ ಈ ಬಾರಿಯ ಐಪಿಎಲ್ನಲ್ಲಿ ನಾಯಕತ್ವದ ಜವಾಬ್ಧಾರಿ ಬಿದ್ದಿದೆ.
ಈ ಮೂಲಕ ರಿಷಭ್ ಪಂತ್ ಮಹತ್ವದ ಟೂರ್ನಿಯಲ್ಲಿ ಮೊಟ್ಟಮೊದಲ ಬಾರಿಗೆ ನಾಯಕತ್ವದ ರುಚಿ ಸವಿಯಲಿದ್ದಾರೆ. 2016ರಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿರುವ ರಿಷಭ್ ಪಂತ್ ಕೇವಲ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಮಾತ್ರವೇ ಆಡಿದ್ದಾರೆ. ಗಮನಾರ್ಹ ಸಂಗತಿಯೆಂದರೆ ರಿಷಭ್ ಪಂತ್ ದೇಶೀಯ ಕ್ರಿಕೆಟ್ನಲ್ಲಿ ಡೆಲ್ಲಿ ರಾಜ್ಯ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. 2017ರ ಆವೃತ್ತಿಯ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಡೆಲ್ಲಿ ತಂಡದ ನಾಯಕನಾಗಿದ್ದರು ಪಂತ್.
ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ವಹಿಸಿಕೊಳ್ಳುತ್ತಲೇ ಪಂತ್ ಹೆಸರಿಗೆ ದಾಖಲೆ
"ಡೆಲ್ಲಿ ನಾನು ಬೆಳೆದ ಪ್ರದೇಶ. ಆರು ವರ್ಷಗಳ ಹಿಂದೆ ನಾನು ಐಪಿಎಲ್ಗೆ ಪದಾರ್ಪಣೆ ಮಾಡಿದ ಸ್ಥಳ. ಈ ತಂಡವನ್ನು ಒಂದಲ್ಲ ಒಂದು ದಿನ ಮುನ್ನಡೆಸಬೇಕು ಎಂಬುದು ನನ್ನ ದೊಡ್ಡ ಕನಸು. ಆದರೆ ಇಂದು ಆ ಕನಸು ನಿಜವಾಗುತ್ತಿದೆ. ನಾನು ಇದಕ್ಕಾಗಿವಿನಮ್ರನಾಗಿರುತ್ತೇನೆ. ಈ ಜವಾಬ್ಧಾರಿಗೆ ನಾನು ಸಮರ್ಥ ಎಂದು ಪರಿಗಣಿಸಿದ ತಂಡದ ಮಾಲೀಕರಿಗೆ ನಾನು ನಿಜವಾಗಿಯೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ" ಎಂದು ಪಂತ್ ಹೇಳಿಕೆ ನೀಡಿದ್ದಾರೆ.
"ಅದ್ಭುತ ಕೋಚಿಂಗ್ ಸಿಬ್ಬಂದಿ ಮತ್ತು ನನ್ನ ಸುತ್ತಲಿರುವ ಅದ್ಭುತ ಅನುಭವವಿರುವ ಹಿರಿಯ ಆಟಗಾರರ ಉಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಟಿಲ್ಸ್ ತಂಡ ಅತ್ಯುತ್ತಮ ಪ್ರದರ್ಶನ ನೀಡುವುದನ್ನು ಕಾಯಲು ನನ್ನಿಂದ ಸಾಧ್ಯವಾಗುವುದಿಲ್ಲ" ಎಂದು ಪಂತ್ ಉತ್ಸುಕತೆಯನ್ನು ವ್ಯಕ್ತಪಡಿಸಿದ್ದಾರೆ.
ರೋಹಿತ್, ಕೊಹ್ಲಿಯನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ರಿಷಭ್ ಪಂತ್!
ಈ ಬಾರಿಯ ಐಪಿಎಲ್ನಲ್ಲಿ ಶ್ರೇಯಸ್ ಐಯ್ಯರ್ ಗಾಯದಿಂದಾಗಿ ಇಡೀ ಟೂರ್ನಿಯಿಂದ ಹೊರಬಿದ್ದಿರುವುದು ತಂಡಕ್ಕೆ ದೊಡ್ಡ ಹಿನ್ನೆಡೆಯಾಗಿದೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಮದ್ಯದಲ್ಲಿ ಫೀಲ್ಡಿಂಗ್ ವೇಳೆ ಐಯ್ಯರ್ ಭುಜದ ನೋವಿಗೆ ಒಳಗಾದರು. ಏಪ್ರಿಲ್ 8ರಂದು ಐಯ್ಯರ್ಗೆ ಭುಜದ ಶಸ್ತ್ರ ಚಿಕಿತ್ಸೆಯನ್ನು ನಡೆಸಲಾಗುತ್ತದೆ.