ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ ಬೆಂಗಾಲ್ ತಂಡ ಸೆಮಿಫೈನಲ್ ಪ್ರವೇಶಿಸಿದೆ. ಈ ಬಾರಿಯ ರಣಜಿ ಟ್ರೋಫಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡ ಎನಿಸಿಕೊಂಡಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಬೆಂಗಾಲ್ ತವರಿನ ಪರಿಸ್ಥಿತಿಯ ಲಾಭ ಪಡೆಯುವಲ್ಲಿ ಯಶಸ್ವಿಯಾಯಿತು. ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಗೆಲುವು ಸಾಧಿಸಿದೆ.
ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗಾಗಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದ ಬೆಂಗಾಲ್ ವೇಗಿ ಮುಖೇಶ್ ಕುಮಾರ್ ನ್ಯೂಜಿಲೆಂಡ್ ವಿರುದ್ಧದ ಕೊನೆಯ ಟಿ20 ಪಂದ್ಯಕ್ಕೆ ಮುನ್ನವೇ ಭಾರತ ತಂಡದಿಂದ ಬಿಡೆಗಡೆ ಪಡೆದು ಕೋಲ್ಕತ್ತಾಗೆ ಆಗಮಿಸಿ ಬೆಂಗಾಲ್ ತಂಡವನ್ನು ಸೇರಿಕೊಂಡಿದ್ದರು. ಪ್ರಮುಖ ಬೌಲರ್ ಆಗಮನ ತಂಡಕ್ಕೆ ಮತ್ತಷ್ಟು ಉತ್ಸಾಹ ತಂದುಕೊಟ್ಟಿತ್ತು.
ವಿರಾಟ್ ಕೊಹ್ಲಿ ಈ ವಯಸ್ಸಿನವರೆಗೆ ಕ್ರಿಕೆಟ್ ಆಡಿದರೆ, 100 ಶತಕ ದಾಖಲಿಸುತ್ತಾರೆ; ವ್ಯಾನ್ ಡೆರ್ ಮೆರ್ವೆ
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಬೆಂಗಾಲ್ ಜಾರ್ಖಂಡ್ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಮೊದಲ ಇನ್ನಿಂಗ್ಸ್ನಲ್ಲಿ ಜಾರ್ಖಂಡ್ 173 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಮುಖೇಶ್ ಕುಮಾರ್ 3 ವಿಕೆಟ್ ಪಡೆದರೆ, ಆಕಾಶ್ ದೀಪ್ 4 ವಿಕೆಟ್ ಪಡೆದು ಮಿಂಚಿದರು. ಇಶಾನ್ ಪೊರೆಲ್ ಮತ್ತು ಆಕಾಶ್ ಘಟಕ್ ತಲಾ 1 ವಿಕೆಟ್ ಪಡೆದುಕೊಂಡರು. ಜಾರ್ಖಂಡ್ ಪರವಾಗಿ ಸೂರಜ್ 89 ರನ್ ಗಳಿಸಿದ್ದು ಬಿಟ್ಟರೆ ಉಳಿದ ಎಲ್ಲಾ ಬ್ಯಾಟರ್ ಗಳು ವಿಫಲವಾದರು.
ಮುನ್ನಡೆ ಸಾಧಿಸಿದ ಬೆಂಗಾಲ್
ನಂತರ ಬ್ಯಾಟಿಂಗ್ ಮಾಡಿದ ಬೆಂಗಾಲ್ ಮೊದಲ ಇನ್ನಿಂಗ್ಸ್ನಲ್ಲಿ 328 ರನ್ ಗಳಿಸುವ ಮೂಲಕ 135 ರನ್ಗಳ ಭರ್ಜರಿ ಮುನ್ನಡೆ ಸಾಧಿಸಿತು. ಅಭಿಮನ್ಯು ಈಶ್ವರನ್ 77, ಸುದಿಪ್ ಘರಮಿ 68, ಶಹಬಾಜ್ ಅಹಮದ್ 82 ರನ್ ಗಳಿಸುವ ಮೂಲಕ ಬೆಂಗಾಲ್ ತಂಡಕ್ಕೆ ಆಸರೆಯಾದರು. ಉತ್ತಮ ಬ್ಯಾಟಿಂಗ್ ಮಾಡುವ ಮೂಲಕ ಮುನ್ನಡೆ ಪಡೆದುಕೊಂಡ ಬೆಂಗಾಲ್ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿತು.
ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿದ ಜಾರ್ಖಂಡ್ 221 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗುವ ಮೂಲಕ ಕೇವಲ 66 ರನ್ಗಳ ಮುನ್ನಡೆ ಸಾಧಿಸಿತು. ಆಕಾಶ್ ದೀಪ್ ಮತ್ತು ಶಹಬಾಜ್ ಅಹ್ಮದ್ ತಲಾ 2 ವಿಕೆಟ್ ಪಡೆದರೆ, ಮುಕೇಶ್ ಕುಮಾರ್ ಮತ್ತು ಇಶಾನ್ ಪೊರೆಲ್ ತಲಾ 1 ವಿಕೆಟ್ ಪಡೆದರು. ಆಕಾಶ್ ಘಟಕ್ 3 ವಿಕೆಟ್ ಪಡೆದರು.
ಗೆಲುವನ್ನು ಖಚಿತಪಡಿಸಿಕೊಳ್ಳಲು ಬೆಂಗಾಲ್ಗೆ ಸಣ್ಣ ಗುರಿಯನ್ನು ಬೆನ್ನಟ್ಟುವ ಕೆಲಸ ಬಾಕಿಯಿತ್ತು. ಎರಡನೇ ಇನ್ನಿಂಗ್ಸ್ನಲ್ಲಿ 1 ವಿಕೆಟ್ ಕಳೆದುಕೊಂಡು 69 ರನ್ ಗಳಿಸಿದ ಬೆಂಗಾಲ್ ಸೆಮಿಫೈಲ್ಗೆ ಅರ್ಹತೆ ಪಡೆದುಕೊಂಡಿತು.
ಸೆಮಿಫೈನಲ್ ತಲುಪಲು ಇತರೆ ತಂಡಗಳ ಹೋರಾಟ
ರಣಜಿಯ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ಉತ್ತರಾಖಂಡದ ವಿರುದ್ಧ ಇನ್ನಿಂಗ್ಸ್ ಮತ್ತು 281 ರನ್ಗಳ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ. ಪಂಜಾಬ್-ಸೌರಾಷ್ಟ್ರ ಮತ್ತು ಮಧ್ಯಪ್ರದೇಶ-ಆಂಧ್ರಪ್ರದೇಶ ನಡುವೆ ಪೈಪೋಟಿ ನಡೆಯುತ್ತಿದೆ.