ರಾಯ್ಪುರ್ : ರಾಯ್ಪುರ್ನ ಶಾಹೀದ್ ವೀರ್ ನಾರಾಯಣಸಿಂಗ್ ಇಂಟರ್ನ್ಯಾಷನಲ್ ಬುಧವಾರ ( ಮಾರ್ಚ್ 17 ) ನಡೆದ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಟಿ20 ಸೆಮಿಫೈನಲ್ ಮೊದಲನೇ ಪಂದ್ಯದಲ್ಲಿ ಭಾರತ ಲೆಜೆಂಡ್ಸ್ ತಂಡವು ವೆಸ್ಟ್ ಇಂಡೀಸ್ ಲೆಜೆಂಡ್ಸ್ ತಂಡವನ್ನು 12 ರನ್ ಗಳಿಂದ ಸೋಲಿಸಿ ಫೈನಲ್ ಪ್ರವೇಶ ಮಾಡಿದೆ.
ಟಾಸ್ ಗೆದ್ದ ವೆಸ್ಟ್ ಇಂಡೀಸ್ ಲೆಜೆಂಡ್ಸ್ ಭಾರತಕ್ಕೆ ಬ್ಯಾಟ್ ಮಾಡುವ ಅವಕಾಶವನ್ನು ನೀಡಿತು. ಬ್ಯಾಟಿಂಗ್ ಆರಂಭಿಸಿದ ಇಂಡಿಯಾ ಲೆಜೆಂಡ್ಸ್ ಭರ್ಜರಿ ಆಟ ಆಡುವ ಮೂಲಕ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 218 ಬಾರಿಸಿ 219 ರನ್ಗಳ ಗುರಿಯನ್ನು ವೆಸ್ಟ್ ಇಂಡೀಸ್ ಲೆಜೆಂಡ್ಸ್ ತಂಡಕ್ಕೆ ನೀಡಿತು. ವೆಸ್ಟ್ ಇಂಡೀಸ್ ಲೆಜೆಂಡ್ಸ್ ತಂಡದಿಂದ ಓಪನರ್ ಗಳಾಗಿ ಡ್ವೇನ್ ಸ್ಮಿತ್ ಮತ್ತು ಪೆರ್ಕಿನ್ಸ್ ಕಣಕ್ಕಿಳಿದರು.
ಭಾರತ ಲೆಜೆಂಡ್ಸ್ ತಂಡದಿಂದ ಮೊದಲನೇ ಓವರನ್ನು ಇರ್ಫಾನ್ ಪಠಾಣ್ ಅವರು ಮಾಡಿದರು. ಮೊದಲನೆಯ ಓವರ್ನಲ್ಲಿಯೇ ಇರ್ಫಾನ್ ಪಠಾಣ್ ಅವರು ನೀಡಿದ್ದು ಬರೋಬ್ಬರಿ 18 ರನ್ಸ್. 4 ಬೌಂಡರಿ & 1 ಸಿಂಗಲ್ ನೀಡಿದ್ದಷ್ಟೇ ಅಲ್ಲದೆ ಇರ್ಫಾನ್ ಪಠಾಣ್ ಅವರು ಆ ಓವರ್ ಒಂದರಲ್ಲಿಯೇ 5 ವೈಡ್ ಬಾಲ್ ಗಳನ್ನು ಸಹ ಹಾಕಿದರು. ಈ ಮೂಲಕ ಭಾರತ ಲೆಜೆಂಡ್ಸ್ ತಂಡದ ಮೊದಲನೇ ಓವರ್ ದುಬಾರಿಯಾಯಿತು.
ಹೀಗೆ ಕೆಟ್ಟ ಓವರ್ ಮಾಡಿದ ನಂತರ ಇರ್ಫಾನ್ ಪಠಾಣ್ ಅವರ ಬಳಿ ಬಂದ ಭಾರತ ಲೆಜೆಂಡ್ಸ್ ತಂಡದ ನಾಯಕ ಸಚಿನ್ ತೆಂಡೂಲ್ಕರ್ ಅವರು ಪಠಾಣ್ ಅವರಿಗೆ ಧೈರ್ಯ ತುಂಬಿದರು. '' ಒಂದು ಕೆಟ್ಟ ಓವರ್ ಮಾಡಿದ ಕೂಡಲೇ ನಾನು ನಂಬಿಕೆ ಕಳೆದುಕೊಳ್ಳುವುದಿಲ್ಲ , ನೀನು ನಮಗಾಗಿ ಇದನ್ನು ಗೆಲ್ಲುವೆ " ಎಂದು ಆ ಓವರ್ ನ ನಂತರ ಸಚಿನ್ ಧೈರ್ಯ ತುಂಬಿದ ರೀತಿಯನ್ನು ಸ್ವತಃ ಇರ್ಪಾನ್ ಪಠಾಣ್ ಅವರು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಬಳಿಕ 11ನೇ ಓವರ್ನಲ್ಲಿ ಬೌಲ್ ಮಾಡುವ ಅವಕಾಶವನ್ನು ಪಡೆದ ಇರ್ಫಾನ್ ಪಠಾಣ್ ಅವರು ತಾವು ಮಾಡಿದ ಮೊದಲನೇ ಓವರ್ನಲ್ಲಿ ಬೌಂಡರಿಯೊಂದನ್ನು ಬಾರಿಸಿದ್ದ ಡ್ವೇನ್ ಸ್ಮಿತ್ ಅವರ ವಿಕೆಟ್ ಪಡೆದುಕೊಂಡರು.