ಬ್ಯಾಟಿಂಗ್ ತಂತ್ರ ಬದಲಾವಣೆ
ಸೀಮಿತ ಓವರ್ಗಳಲ್ಲಿ ಉತ್ತಪ್ಪ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಆದರೆ ಉತ್ತಪ್ಪ ಅವರ ಕನಸು ಬೇರೆಯೇ ಆಗಿತ್ತು. ಆ ಕನಸನ್ನು ಬೆನ್ನತ್ತುವ ಪ್ರಯತ್ನ ಮಾಡಿದ್ದರು ಉತ್ತಪ್ಪ. ಅದಕ್ಕಾಗಿ ಬ್ಯಾಟಿಂಗ್ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದರು. ಆದರೆ ಇದು ಉತ್ತಪ್ಪ ಅವರ ಒಟ್ಟಾರೆ ಬ್ಯಾಟಿಂಗ್ ಮೇಲೆಯೇ ಪರಿಣಾಮ ಬಿತ್ತು ಎಂದು ಸ್ವತಃ ಉತ್ತಪ್ಪ ಹೇಳಿಕೊಂಡಿದ್ದಾರೆ.
ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ಕನಸು
ಉತ್ತಪ್ಪ ಅವರಿಗಿದ್ದ ಕನಸು ಬೇರೇನಲ್ಲ. ಟೀಮ್ ಇಮಡಿಯಾದ ಟೆಸ್ಟ್ ತಂಡದಲ್ಲಿ ಸ್ಥಾನವನ್ನು ಪಡೆಯಬೇಕೆಂಬುದಾಗಿತ್ತು. ಹೀಗಾಗಿ ಸ್ಪೋಟಕವಾಗಿ ಆಡುತ್ತಿದ್ದ ಉತ್ತಪ್ಪ ಒಂದಷ್ಟು ಬದಲಾವನೆ ಮಾಡುವ ನಿರ್ಧಾರವನ್ನು ಮಾಡಿದರು. "ನಾನು 25ನೇ ವಯಸ್ಸಿನಲ್ಲಿ ಬ್ಯಾಟಿಂಗ್ ಟೆಕ್ನಿಕ್ ಬದಲಿಸಿಕೊಂಡಿದ್ದೆ. ಅಲ್ಲಿವರೆಗೂ ಸ್ಥಿರವಾಗಿ ಸಾಗುತ್ತಿದ್ದ ನನ್ನ ಬ್ಯಾಟಿಂಗ್ ಸ್ಪೀಡ್ ಕಡಿಮೆ ಆಗಿತ್ತು. ಸ್ಪೋಟಕ ಬ್ಯಾಟಿಂಗ್ಗೆ ಬ್ರೇಕ್ ಬಿತ್ತು" ಎಂದು ಹೇಳಿದರು.
ಬೇಗನೆ ಪ್ರಯತ್ನ ಪಡಬೇಕಿತ್ತು
ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ ಪರ ಆಡುತ್ತಿರುವ ಉತ್ತಪ್ಪ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ನಡೆದ ಸೆಷನ್ನಲ್ಲಿ ತಮ್ಮ ವೃತ್ತಿ ಜೀವನ ಕುರಿತು ಆಸಕ್ತಿಕರ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಭಾರತ ಪರ ಟೆಸ್ಟ್ ಕ್ರಿಕೆಟ್ ಆಡುವುದು ನನ್ನ ಮುಖ್ಯ ಗುರಿಯಾಗಿತ್ತು. ಇದರಂತೆ ನಾನು 20-21ರ ವಯಸ್ಸಿನಲ್ಲೇ ಪ್ರಯತ್ನ ನಡೆಸಿದ್ದರೆ ಉತ್ತಮವಾಗಿರುತ್ತಿತ್ತು. ಆದರೆ ತಡವಾಗಿ ಆ ಪ್ರಯತ್ನವನ್ನು ಮಾಡಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.
ವಿಶ್ವಕಪ್ ಗೆಲುವಿನ ನೆನಪು
ಇದೇ ವೇಳೆ 2007ರ ವಿಶ್ವಕಪ್ ಗೆಲುವಿನ ಸಂಭ್ರಮದ ಬಗ್ಗೆ ಮಾತನಾಡಿರುವ ಉತ್ತಪ್ಪ, ವಿಶ್ವಕಪ್ ಗೆಲುವಿನಲ್ಲಿ ನೀವು ಒಂದು ಭಾಗವಾಗಿರುವುದರ ಅನುಭವವೇ ಬೇರೆಯಾಗಿರುತ್ತದೆ. 1983ರ ಬಳಿಕ ಮೊದಲ ವಿಶ್ವಕಪ್ ಗೆದ್ದದ್ದು ಬಹಳ ನಿರಾಳ ತಂದು ಕೊಟ್ಟಿತ್ತು. ವಿಶ್ವಕಪ್ ಗೆದ್ದ ಭಾರತಕ್ಕೆ ಹಿಂದಿರುಗಿದ್ದ ನಮಗೆ ಭವ್ಯ ಸ್ವಾಗತ ಲಭಿಸಿತ್ತು. ಅಂದು ಮೂರು ದಿನಗಳ ಕಾಲ ನಾನು ನಿದ್ದೆ ಮಾಡಿರಲಿಲ್ಲ ಎಂದು ಉತ್ತಪ್ಪ ಹೇಳಿದ್ದಾರೆ.