ಬೆಂಗಳೂರು, ಫೆಬ್ರವರಿ 20: ಕರ್ನಾಟಕ ಮೂಲದ ಕ್ರಿಕೆಟರ್ ರಾಬಿನ್ ಉತ್ತಪ್ಪ ಅವರು ದೀರ್ಘಕಾಲದ ನಂತರ ಮತ್ತೆ ಕ್ರಿಕೆಟ್ ಅಂಗಳಕ್ಕೆ ಕಾಲಿಡುತ್ತಿದ್ದಾರೆ. ಮೊಣಕಾಲಿನ ಸ್ನಾಯು ಸೆಳೆತ, ಹಿಮ್ಮಡಿಗೆ ಗಾಯ ಮಾಡಿಕೊಂಡಿದ್ದ 33 ವರ್ಷ ವಯಸ್ಸಿನ ಉತ್ತಪ್ಪ ಅವರು ಕಳೆದ ಅಕ್ಟೋಬರ್ ನಲ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದ್ದರು.
ದೇಶಿ ಕ್ರಿಕೆಟ್ನಲ್ಲಿ ಸೌರಾಷ್ಟ್ರ ಪರ ಆಡುತ್ತಿರುವ ಉತ್ತಪ್ಪ, ಮುಂಬರುವ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಆಡುತ್ತಿದ್ದಾರೆ. 2018-19ರ ಸಂಪೂರ್ಣ ರಣಜಿ ಋತುವಿನಿಂದ ಉತ್ತಪ್ಪ ಹೊರಗುಳಿದಿದ್ದರು. ಸೌರಾಷ್ಟ್ರ ಪರವಾಗಿ ಆರಂಭಿಕ ಅಥವಾ 3ನೇ ಕ್ರಮಾಂಕದಲ್ಲಿ ಸಾಮಾನ್ಯವಾಗಿ ಕಣಕ್ಕಿಳಿಯುತ್ತಾರೆ. ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಪರ ಆಡಲಿದ್ದಾರೆ.
ಸೈಯದ್ ಮುಷ್ತಾಕ್ ಅಲಿ ಟ್ರೋಫಿ : ಮುಂಬೈಗೆ ಪೃಥ್ವಿ ಶಾ ಬಲ
ಇತ್ತೀಚೆಗೆ ಮುಕ್ತಾಯವಾದ ರಣಜಿ ಫೈನಲ್ ನಲ್ಲಿ ಹಾಲಿ ಚಾಂಪಿಯನ್ ವಿದರ್ಭದ ಎದುರು ಸೌರಾಷ್ಟ್ರ ಸೋಲು ಅನುಭವಿಸಿತ್ತು. ಈಗ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಮೆಂಟ್ ನಲ್ಲಿ ರೈಲ್ವೇಸ್ ವಿರುದ್ಧ ಮೊದಲ ಪಂದ್ಯವನ್ನು ಇಂದೋರ್ ನಲ್ಲಿ ಆಡಲಿದೆ.
ಯುಕೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರಾಬಿನ್ ಉತ್ತಪ್ಪ ಅವರಿಗೆ 6 ವಾರಗಳ ವಿಶ್ರಾಂತಿ ಅಗತ್ಯ ಎಂದು ವೈದ್ಯರು ಸೂಚಿಸಿದ್ದರು. ಈಗ ಸಂಪೂರ್ಣವಾಗಿ ಫಿಟ್ ಆಗಿ ತಂಡ ಸೇರಿರುವುದು ಬ್ಯಾಟಿಂಗ್ ಬಲ ಹೆಚ್ಚಿಸಿದೆ ಎಂದು ಸೌರಾಷ್ಟ್ರ ತಂಡದ ಕೋಚ್ ಸಿತಾಂಶು ಕೋಟಕ್ ಅವರು ಹೇಳಿದ್ದಾರೆ.
2007ರ ವಿಶ್ವಕಪ್ ತಂಡದಲ್ಲಿದ್ದ ಉತ್ತಪ್ಪ ಅವರು 46 ಏಕದಿನ ಪಂದ್ಯ, 13 ಟಿ20ಐ ಪಂದ್ಯಗಳನ್ನಾಡಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸೌರಾಷ್ಟ್ರ ಇರುವ ಗುಂಪಿನಲ್ಲಿ ಸಿಕ್ಕಿಂ, ಪಂಜಾಬ್, ಮಧ್ಯಪ್ರದೇಶ, ಗೋವಾ, ಮುಂಬೈ ಹಾಗೂ ರೈಲ್ವೇಸ್ ತಂಡಗಳಿವೆ.