ಮೊಹಾಲಿ, ನ.05: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನಾಡುವ ಆಸೆ ಇರಿಸಿಕೊಂಡಿದ್ದ ರೋಹಿತ್ ಶರ್ಮ, ಭುವನೇಶ್ವರ್ ಕುಮಾರ್ ಹಾಗೂ ಸ್ಟುವರ್ಟ್ ಬಿನ್ನಿಗೆ ನಿರಾಶೆಯಾಗಿದೆ. ಮೂವರು ಆಟಗಾರರನ್ನು ಆಡುವ XI ನಿಂದ ಕೈಬಿಟ್ಟು ರಣಜಿ ಆಡುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೂಚಿಸಿದೆ.
| ದಕ್ಷಿಣ ಆಫ್ರಿಕಾ vs ಭಾರತ ಚಿತ್ರ ಸಂಪುಟ
ಅದರೆ, ಉತ್ತಮ ಲಯದಲ್ಲಿದ್ದರೂ ಮೊದಲ ಟೆಸ್ಟ್ ಪಂದ್ಯಕ್ಕೆ ಕರ್ನಾಟಕದ ಬಲಗೈ ಆರಂಭಿಕ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ರನ್ನು ಏಕೆ ಕಣಕ್ಕಿಳಿಸಿಲ್ಲ ಎಂಬುದರ ಬಗ್ಗೆ ಬಿಸಿಸಿಐ ಸೊಲ್ಲೆತ್ತಿಲ್ಲ. ಆರಂಭಿಕ ಆಟಗಾರ ರೋಹಿತ್ ಶರ್ಮ, ವೇಗಿ ಭುವನೇಶ್ವರ್ ಕುಮಾರ್, ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ ಅವರಿಗೆ ತಮ್ಮ ರಾಜ್ಯಕ್ಕೆ ತೆರಳಿ ರಣಜಿ ಆಡುವಂತೆ ಬಿಸಿಸಿಐ ನಿರ್ದೇಶಿಸಿದೆ.
ಈ ಮೂವರನ್ನು ಮೊದಲ ಟೆಸ್ಟ್ ನಲ್ಲಿ ಕಣಕ್ಕಿಳಿಸದಿರಲು ಬಿಸಿಸಿಐ ಮೊದಲೇ ನಿರ್ಧರಿಸಿದ್ದಂತೆ ತೋರುತ್ತದೆ. ಹೀಗಾಗಿ ಗುರುವಾರ ಆರಂಭಗೊಂಡ ಟೆಸ್ಟ್ ಪಂದ್ಯದಲ್ಲಿ ಆಡುವ XIನಲ್ಲಿ ಮೂವರ ಹೆಸರು ಕಾಣಿಸಿದ್ದ ಮೇಲೆ ಈ ಆದೇಶ ಹೊರಡಿಸಿದೆ.[ರಾಜಸ್ಥಾನ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಜಯ]
ರಣಜಿ ಪಂದ್ಯವನ್ನಾಡಿದ ಮೇಲೆ ಪೇಟಿಯಂ ಎರಡನೇ ಟೆಸ್ಟ್ ಪಂದ್ಯಕ್ಕೆ ಮೂವರು ಆಟಗಾರರು ಲಭ್ಯರಿರುತ್ತಾರೆ. ಬೆಂಗಳೂರಿನಲ್ಲಿ ನವೆಂಬರ್ 14ರಿಂದ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ. ಪಂಜಾಬಿನ ಗುರ್ ಕೀರತ್ ಸಿಂಗ್ ಹಾಗೂ ಮಂದೀಪ್ ಸಿಂಗ್ ಅವರು ಮೊದಲ ಟೆಸ್ಟ್ ಪಂದ್ಯದಲ್ಲಿ ರಿಸರ್ವ್ ಆಟಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ರಣಜಿಯ ಎರಡನೇ ಸುತ್ತಿನ ಪಂದ್ಯಾವಳಿಗಳು ನವೆಂಬರ್ 7ರಿಂದ ಆರಂಭಗೊಳ್ಳಲಿದೆ. ರೋಹಿತ್ ಹಾಗೂ ಭುವನೇಶ್ವರ್ ಕುಮಾರ್ ಅವರು ಎದುರಾಳಿಗಳಾಗಿ ಕಾದಾಡಲಿದ್ದಾರೆ. ಮುಂಬೈ ಹಾಗೂ ಉತ್ತರಪ್ರದೇಶ ಸೆಣಸಾಡಲಿವೆ. ಸ್ಟುವರ್ಟ್ ಬಿನ್ನಿ ಅವರು ಮೊಹಾಲಿಯಿಂದ ಮೈಸೂರಿಗೆ ಆಗಮಿಸಿ ಒಡಿಶಾ ವಿರುದ್ಧದ ಪಂದ್ಯದಲ್ಲಿ ಕರ್ನಾಟಕದ ಪರ ಆಡಲಿದ್ದಾರೆ. (ಒನ್ ಇಂಡಿಯಾ ಸುದ್ದಿ)