2ನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಭರ್ಜರಿ ಶತಕ
ಚೆನ್ನೈನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ರೋಹಿತ್ ಶರ್ಮಾ ಮೊದಲ ಇನ್ನಿಂಗ್ಸ್ನಲ್ಲಿ 161 ರನ್ಗಳ ಬೃಹತ್ ಕೊಡುಗೆಯನ್ನು ನೀಡಿದರು. ಈ ಮೂಲಕ ಭಾರತ 329 ರನ್ಗಳನ್ನು ಪೇರಿಸಲು ಶಕ್ತವಾಗಿತ್ತು. ಈ ಪ್ರದರ್ಶನ ಭಾರತದ ಗೆಲುವಿಗೆ ಕಾರಣವಾಗಿತ್ತು. ಅಹ್ಮದಾಬಾದ್ನಲ್ಲಿ ಸರಣಿ ಗೆದ್ದ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ "ರೋಹಿತ್ ಶರ್ಮಾ ನೀಡಿದ ಆ ಪ್ರದರ್ಶನ ಭಾರತದ ಪರವಾಗಿ ಸರಣಿ ನಿರ್ಣಯಿಸಲು ಕಾರಣವಾಯಿತು" ಎಂದಿದ್ದಾರೆ.
ಕಮ್ಬ್ಯಾಕ್ ಮಾಡಲು ಅತ್ಯಂತ ಮಹತ್ವವಾಗಿತ್ತು
"ರೋಹಿತ್ ಶರ್ಮಾ ಅವರ ಪ್ರದರ್ಶನ ಈ ಸರಣಿಯಲ್ಲಿ ಭಾರತ ಕಮ್ಬ್ಯಾಕ್ ಮಾಡಲು ಅತ್ಯಂತ ಮಹತ್ವವನ್ನು ಪಡೆದುಕೊಂಡಿತ್ತು. ಅಂತಾ ಪಿಚ್ನಲ್ಲಿ 150 ರನ್(160) ಬಾರಿಸುವುದು ಅದು 250 ಗಳಿಸಿದ್ದಕ್ಕೆ ಸಮವಾಗಿದೆ" ಎಂದು ರೋಹಿತ್ ಶರ್ಮಾ ಬ್ಯಾಟಿಂಗ್ ಬಗ್ಗೆ ವಿರಾಟ್ ಕೊಹ್ಲಿ ಮೆಚ್ಚುಗೆಯನ್ನು ಸೂಚಿಸಿದರು. "ಸರಣಿಯ ಉದ್ದಕ್ಕೂ ಅವರು ಅದ್ಭುತ ಆಟಗಳನ್ನು ಪ್ರದರ್ಶಿಸುವ ಜೊತೆಗೆ ಅತ್ಯುತ್ತಮ ಜೊತೆಯಾಟಗಳನ್ನು ನೀಡಿದ್ದಾರೆ" ಎಂದು ಕೊಹ್ಲಿ ರೋಹಿತ್ ಶರ್ಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಯುವ ಆಟಗಾರರ ಬಗ್ಗೆಯೂ ಕೊಹ್ಲಿ ಮೆಚ್ಚುಗೆ
ಇನ್ನು ಇದೇ ಸಂದರ್ಭದಲ್ಲಿ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನಿಡಿದ ಯುವ ಆಟಗಾರರ ಬಗ್ಗೆಯೂ ವಿರಾಟ್ ಕೊಹ್ಲಿ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. ಸಿಕ್ಕ ಅವಕಾಶಗಳನ್ನು ಅಕ್ಷರ್ ಪಟೇಲ್ ಹಾಗೂ ವಾಶಿಂಗ್ಟನ್ ಸುಂದರ್ ಎರಡೂ ಕೈಗಳಿಂದ ಬಾಚಿ ಕೊಂಡಿದ್ದಾರೆ ಎಂದಿದ್ದಾರೆ. "ನಿರ್ಭಯವಾಗಿ ಪ್ರದರ್ಶನವನ್ನು ನೀಡುವ ಯುವ ಆಟಗಾರರನ್ನು ಹೊಂದಬೇಕೆಂಬ ಆಲೋಚನೆಯಿತ್ತು, ಅಕ್ಷರ್ ಹಾಗೂ ವಾಶಿಂಗ್ಟನ್ ಸುಂದರ್ ಸಿದ್ಧರಾಗಿದ್ದರು. ರಿಷಭ್ ಹಾಗೂ ಸುಂದರ್ ಪಂದ್ಯದ ಗತಿಯನ್ನು ಬದಲಾಯಿಸುವ ಜೊತೆಯಾಟವನ್ನು ನೀಡಿದರು. ಅಕ್ಷರ್ ಪಟೇಲ್ ಕೂಡ ಅದೇ ರೀತಿಯ ಆಟವನ್ನು ಪ್ರದರ್ಶಿಸಿದರು" ಎಂದಿದ್ದಾರೆ ವಿರಾಟ್ ಕೊಹ್ಲಿ.
ಆರ್ ಅಶ್ವಿನ್ ಬಗ್ಗೆ ಕೊಹ್ಲಿ ಹೇಳಿಕೆ
ಇನ್ನು ಇದೇ ಸಂದರ್ಭದಲ್ಲಿ ನಾಯಕ ವಿರಾಟ್ ಕೊಹ್ಲಿ ಅನುಭವಿ ಆಟಗಾರ ಆರ್ ಅಶ್ವಿನ್ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. "ಟೀಮ್ ಇಂಡಿಯಾ ಪರವಾಗಿ ಕಳೆದ ಆರೇಳು ವರ್ಷಗಳಿಂದ ಆರ್ ಅಶ್ವಿನ್ ಅತ್ಯಂತ ನಂಬಿಕಾರ್ಹವಾದ ಆಟಗಾರನಾಗಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಅವರು ನೀಡಿದ ಕೊಡುಗೆ ಅತ್ಯಂತ ಗಮನಾರ್ಹ" ಎಂದಿದ್ದಾರೆ ವಿರಾಟ್ ಕೊಹ್ಲಿ. ಇಂಗ್ಲೆಂಡ್ ವಿರುದ್ಧ ಆರ್ ಅಶ್ವಿನ್ ನೀಡಿದ ಪ್ರದರ್ಶನಕ್ಕೆ ಅವರು ಸರಣೀ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.