ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿಯೇ ಭಾರತ ಟೆಸ್ಟ್ ತಂಡಕ್ಕೆ ನೂತನ ಉಪ ನಾಯಕನ ನೇಮಕ
ಬಿಸಿಸಿಐನ ಅಧಿಕಾರಿಯೋರ್ವರು ನೀಡಿರುವ ಮಾಹಿತಿಯ ಪ್ರಕಾರ ಭಾರತ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳಲಿದ್ದು ಟೆಸ್ಟ್ ಸರಣಿಯನ್ನು ಆಡಲಿದೆ. ಈ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸುವ ಮುನ್ನ ಆಯ್ಕೆಗಾರರು ವಿಶೇಷ ಸಭೆಯನ್ನು ನಡೆಸಲಿದ್ದು ಭಾರತ ಟೆಸ್ಟ್ ತಂಡಕ್ಕೆ ನೂತನ ಉಪನಾಯಕನನ್ನು ನೇಮಿಸಲಿದ್ದಾರೆ ಎನ್ನಲಾಗುತ್ತಿದೆ. ಹೀಗೆ ಆಯ್ಕೆ ಸಮಿತಿ ನೇಮಿಸಲಿರುವ ಭಾರತ ಟೆಸ್ಟ್ ತಂಡದ ನೂತನ ಉಪ ನಾಯಕ ದಕ್ಷಿಣ ಆಫ್ರಿಕಾ ಪ್ರವಾಸದಿಂದಲೇ ತನ್ನ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ.
ಯಾರಾಗಲಿದ್ದಾರೆ ಉಪನಾಯಕ?
ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ಟೆಸ್ಟ್ ತಂಡದ ನೂತನ ಉಪ ನಾಯಕನ ಆಯ್ಕೆಯಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಬಿಸಿಸಿಐ ಅಧಿಕಾರಿಯೋರ್ವರು ತಿಳಿಸಿರುವ ಪ್ರಕಾರ ರೋಹಿತ್ ಶರ್ಮಾ ಅಜಿಂಕ್ಯ ರಹಾನೆ ನಂತರ ಭಾರತ ಟೆಸ್ಟ್ ತಂಡದ ಉಪನಾಯಕನ ಸ್ಥಾನವನ್ನು ಅಲಂಕರಿಸಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ರೋಹಿತ್ ಶರ್ಮಾ ಇತ್ತೀಚೆಗಷ್ಟೇ ಭಾರತ ಟಿ ಟ್ವೆಂಟಿ ತಂಡದ ನೂತನ ನಾಯಕನಾಗಿ ಆಯ್ಕೆಯಾಗಿದ್ದರು. ಇದೀಗ ಭಾರತ ಟೆಸ್ಟ್ ತಂಡದ ಉಪನಾಯಕನಾಗಿ ಕೂಡ ರೋಹಿತ್ ಶರ್ಮಾ ಅಧಿಕಾರ ಸ್ವೀಕರಿಸುತ್ತಿರುವುದು ರೋಹಿತ್ ಶರ್ಮಾಗೆ ಮತ್ತಷ್ಟು ಜವಾಬ್ದಾರಿ ಹೆಚ್ಚಾದಂತಾಗಿದೆ.
ದ್ವಿತೀಯ ಟೆಸ್ಟ್ನಿಂದ ಹೊರಬಿದ್ದಿರುವ ಅಜಿಂಕ್ಯ ರಹಾನೆ
ವಿರಾಟ್ ಕೊಹ್ಲಿ ಅಲಭ್ಯರಾಗಿದ್ದ ಕಾರಣ ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ನಾಯಕನಾಗಿ ಕಣಕ್ಕಿಳಿದಿದ್ದ ಅಜಿಂಕ್ಯ ರಹಾನೆ ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಹೌದು, ಸದ್ಯ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಿಂದ ಅಜಿಂಕ್ಯ ರಹಾನೆ ಹೊರಗುಳಿದಿದ್ದು ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಕೂಡ ಕಳಪೆ ಪ್ರದರ್ಶನ ನೀಡಿದ್ದರು. ಕಾನ್ಪುರದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್ನಲ್ಲಿ 35 ರನ್ ಗಳಿಸಿದ್ದ ಅಜಿಂಕ್ಯ ರಹಾನೆ ದ್ವಿತೀಯ ಇನ್ನಿಂಗ್ಸ್ನಲ್ಲಿ ಕೇವಲ 4 ರನ್ ಗಳಿಸಿದ್ದರು. ಹೀಗೆ ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಅಜಿಂಕ್ಯ ರಹಾನೆ ದ್ವಿತೀಯ ಟೆಸ್ಟ್ ಪಂದ್ಯದಿಂದ ಗಾಯದ ಸಮಸ್ಯೆ ಕಾರಣದಿಂದಾಗಿ ಹೊರಗುಳಿದಿದ್ದಾರೆ.