ರೋಹಿತ್ ಶರ್ಮಾ ಯಶಸ್ಸಿನ ಕಥೆ
ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ತಾನು ದೀರ್ಘಕಾಲದ ಗುರಿಗಳನ್ನು ಹಾಕಿಕೊಳ್ಳುವುದೇ ಇಲ್ಲ ಎಂದಿದ್ದಾರೆ. ದೀರ್ಘ ಕಾಲದ ಗುರಿಗಳು ನಮ್ಮ ಮೇಲೆ ಒತ್ತಡವನ್ನು ಹಾಕುತ್ತದೆ. ಹಾಗಾಗಿ ನನಗೆ ದೀರ್ಘ ಕಾಲದ ಗುರಿಗಳ ಮೇಲೆ ನಂಬಿಕೆಯಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
2-3 ತಿಂಗಳ ಯೋಜನೆಗಳು
ನಾನು ಹಾಕಿಕೊಳ್ಳುವ ಯೋಜನೆಗಳು ಅಲ್ಪಾವಧಿಯದ್ದಾಗಿರುತ್ತದೆ. ಎರಡರಿಂದ ಮೂರು ತಿಂಗಳಲ್ಲಿ ನಾನು ಮಾಡಬೇಕಾಗಿರುವುದೇನು ಎಂಬುದನ್ನು ನಾನು ಯೋಜನೆ ಮಾಡಿಕೊಳ್ಳುತ್ತೇನೆ. ತರಬೇತಿ ಮತ್ತು ಆಟದ ದೃಷ್ಟಿಕೋನದಿಂದಲೂ ಈ ಯೋಜನೆಯನ್ನು ಹಾಕಿಕೊಂಡಿರುತ್ತೇನೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಪ್ರತಿ ಸರಣಿಗೂ ಗುರಿ
ಮುಂದುವರಿದು ಮಾತನಾಡಿದ ರೋಹಿತ್ ಶರ್ಮಾ "ಪ್ರತೀ ಸರಣಿಗೆ ಅಥವಾ ಪ್ರತೀ ಟೂರ್ನಮೆಂಟ್ಗೂ ನಾನು ನನ್ನದೇ ಆದ ಯೋಜನೆಗಳನ್ನು ಹಾಕಿಕೊಂಡಿರುತ್ತೇನೆ. ಅದರ ಪ್ರಕಾರವೇ ನನ್ನ ಆಟವನ್ನು ಅನುಷ್ಟಾನಕ್ಕೆ ತರುವ ಪ್ರಯತ್ನ ಮಾಡುತ್ತೇನೆ ಎಮದು ರೋಹಿತ್ ಶರ್ಮಾ ಹೇಳಿದ್ದಾರೆ. ಇದು ಮುಂದಿನ ದಿನಗಳಲ್ಲೂ ಮುಂದುವರಿಯುತ್ತದೆ ಎಂದು ಟೀಮ್ ಇಂಡಿಯಾ ಸೀಮಿತ ಓವರ್ಗಳ ಉಪನಾಯಕ ಸ್ಟಾರ್ ಸ್ಪೋರ್ಟ್ಸ್ನ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಸಾಮಾನ್ಯ ಸ್ಥಿತಿಯಿದ್ದರೆ ಈಗ ಐಪಿಎಲ್ ನಡೆಯಬೇಕಿತ್ತು
ಇದೇ ಸಂದರ್ಭದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದ್ದರೆ ಈಗ ಕ್ರಿಕೆಟಿಗರೆಲ್ಲರೂ ಐಪಿಎಲ್ನಲ್ಲಿ ಬ್ಯುಸಿ ಇರುತ್ತಿದ್ದರು. ಆದರೆ ಕೊರೊನಾ ವೈರಸ್ ಕಾರಣದಿಂದಾಗಿ ವಿಶ್ವಾದ್ಯಂತ ಎಲ್ಲಾ ಕ್ರೀಡೆಗಳು ನಿಂತಿದೆ. ಮುಂದೆ ಮತ್ತೆ ಯಾವಾಗ ಕ್ರಿಕೆಟ್ ಆಡುವ ಅವಕಾಶ ಸಿಗಲಿದೆ ಎಂದು ಯಾರಿಗೂ ಗೊತ್ತಿಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಮತ್ತೆ ಕ್ರಿಕೆಟ್ ಆರಂಭವಾದ ನಂತರ..
ಎಲ್ಲಾ ಸಾಮಾನ್ಯ ಸ್ಥಿತಿಗೆ ಬಂದು ಮತ್ತೆ ಕ್ರಿಕೆಟ್ ಆರಂಭವಾದ ನಂತರ ಮುಂದ ಯಾವ ಟೂರ್ನಿ ನಡೆಯಲಿದೆ ಎಂದು ಎದುರು ನೋಡುತ್ತಿದ್ದೇವೆ, ಅದು ವಿಶ್ವಕಪ್ ಆಗಿರಬಹುದು ಅಥವಾ ಐಪಿಎಲ್ ಆಗಿರಬಹುದು. ಅದರ ಜೊತೆಗೆ ಆಸ್ಟ್ರೇಲಿಯಾ ತಂಡದ ವಿರುದ್ಧ ದ್ವಿಪಕ್ಷೀಯ ಸರಣಿಯೂ ಇದೆ. ಹೀಗಾಗಿ ನಾವು ಯಾವುದರ ವಿರುದ್ಧ ಆಡಲಿದ್ದೇವೆ ಎಂಬುದರ ವಿಮರ್ಶೆಯೂ ನಡೆಯಬೇಕಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.