ವೃತ್ತಿ ಬದುಕಿನ ಕರಾಳ ಕ್ಷಣವದು
ಪೀಟರ್ಸನ್ ಜೊತೆ ಮಾತನಾಡಿದ ರೋಹಿತ್, 2011ರ ವಿಶ್ವಕಪ್ಗೆ ಟೀಮ್ ಇಂಡಿಯಾದಲ್ಲಿ ಸ್ಥಾನವೇ ಸಿಗದಿದ್ದುದು ನನ್ನ ವೃತ್ತಿ ಬದುಕಿನಲ್ಲಿ ನನಗೆ ಅತೀ ದುಃಖಕರ ಸಂಗತಿ ಎಂದು ಹೇಳಿದ್ದಾರೆ. ಅಂದಿನ ಟೂರ್ನಿಯಲ್ಲಿ ಭಾರತ ಪರ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಎಂಎಸ್ ಧೋನಿ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ನಂತ ಆಟಗಾರರು ಆಡಿದ್ದರು.
ಭಾರತದಲ್ಲೇ ನಡೆದಿದ್ದ ಟೂರ್ನಿ
2011ರ ವಿಶ್ವಕಪ್ ಟೂರ್ನಿ ನಡೆದಿದ್ದು ಭಾರತದಲ್ಲೇ. ಇದನ್ನೇ ನೆನಪಿಸಿಕೊಂಡಿರುವ ರೋಹಿತ್, '2011ರ ವಿಶ್ವಕಪ್ ತಂಡಕ್ಕೆ ಆರಿಸಲ್ಪಡದಿದ್ದುದು ನನ್ನ ಪಾಲಿಗೆ ಅತೀ ಬೇಸರ ಸಂದರ್ಭವಾಗಿತ್ತು. ಅದರಲ್ಲೂ ಟೂರ್ನಿ ಭಾರತದಲ್ಲೇ ನಡೆದಿತ್ತು, ಫೈನಲ್ ಪಂದ್ಯ ನನ್ನ ತವರು ನೆಲದಲ್ಲೇ (ಮುಂಬೈ) ನಡೆದಿತ್ತು,' ಎಂದು ಬೇಸರ ತೋರಿಕೊಂಡರು.
ತಂಡಕ್ಕೆ ಆರಿಸದಿದ್ದಕ್ಕೆ ಕಾರಣ
2011ರ ವಿಶ್ವಕಪ್ ತಂಡದಲ್ಲಿ ಸ್ಥಾನ ಲಭಿಸದಿದ್ದಕ್ಕೆ ತಾನೇ ಕಾರಣ ಎಂದೂ ಶರ್ಮಾ ಹೇಳಿಕೊಂಡಿದ್ದಾರೆ. 'ಅಂದು ತಂಡದಲ್ಲಿ ಕಾಣಿಸದಿದ್ದಕ್ಕೆ ನನ್ನ ಪ್ರದರ್ಶನವೇ ಕಾರಣ. ಆಗ ನಾನು ಅತ್ಯುತ್ತಮ ಫಾರ್ಮ್ನಲ್ಲಿ ಇರಲಿಲ್ಲ,' ಎಂದು ರೋಹಿತ್ ವಿವರಿಸಿದ್ದಾರೆ.
ಭಾರತಕ್ಕೆ 2ನೇ ವಿಶ್ವಕಪ್ ಗೆಲುವು
2011ರ ವಿಶ್ವಕಪ್ ಫೈನಲ್ ಪಂದ್ಯ ಮುಂಬೈನಲ್ಲಿ ನಡೆದಿತ್ತು. ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಎಂ.ಎಸ್.ಧೋನಿ (ನಾಯಕ), ಸುರೇಶ್ ರೈನಾ, ಹರ್ಭಜನ್ ಸಿಂಗ್, ಜಹೀರ್ ಖಾನ್, ಮುನಾಫ್ ಪಟೇಲ್, ಎಸ್ ಶ್ರೀಶಾಂತ್ ಪ್ಲೇಯಿಂಗ್ XIನಲ್ಲಿ ಆಡಿದ್ದರು. ಶ್ರೀಲಂಕಾ ವಿರುದ್ಧ ಅಂದು ಭಾರತ 6 ವಿಕೆಟ್ ಗೆಲುವು ಕಂಡಿತ್ತು. ಎಂಎಸ್ ಧೋನಿ ಪಂದ್ಯಶ್ರೇಷ್ಠ, ಯುವರಾಜ್ ಸಿಂಗ್ ಸರಣಿಶ್ರೇಷ್ಠರೆನಿಸಿದ್ದರು.