ಸೂರ್ಯಕುಮಾರ್ ಯಾದವ್.. 2020ರ ಐಪಿಎಲ್ ಸಮಯದಿಂದ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಪಟ್ಟಿರುವ ಆಟಗಾರ. ತಾನೊಬ್ಬ ಪ್ರತಿಭಾವಂತ ಆಟಗಾರ ಎಂದು ಪ್ರದರ್ಶನದ ಮೂಲಕ ಸಾಬೀತುಪಡಿಸಿದರೂ ಸಹ ಹಲವಾರು ವರ್ಷಗಳ ಕಾಲ ಬ್ಲೂ ಜೆರ್ಸಿ ಧರಿಸುವ ಅವಕಾಶ ಸೂರ್ಯಕುಮಾರ್ ಯಾದವ್ ಪಾಲಿಗೆ ಬಂದಿರಲಿಲ್ಲ. ಆದರೆ ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟಿ ಟ್ವೆಂಟಿಐ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಆಡುವ ಮೂಲಕ ಸೂರ್ಯಕುಮಾರ್ ಯಾದವ್ ಅವರ ಬಹು ವರ್ಷಗಳ ಕನಸು ನನಸಾಗಿದೆ.
ಇಂಗ್ಲೆಂಡ್ ವಿರುದ್ಧದ ಟಿ ಟ್ವೆಂಟಿಐ ಸರಣಿಯ ಎರಡನೇ ಪಂದ್ಯದಲ್ಲಿ ಆಡುವ ಅವಕಾಶ ಪಡೆದರೂ ಸಹ ಬ್ಯಾಟ್ ಮಾಡುವ ಅವಕಾಶದಿಂದ ಸೂರ್ಯಕುಮಾರ್ ಯಾದವ್ ವಂಚಿತರಾಗಿದ್ದರು. ಆದರೆ ಮಾರ್ಚ್ 18ರಂದು ನಡೆದ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ ಟ್ವೆಂಟಿಐ ಪಂದ್ಯದಲ್ಲಿ ಬ್ಯಾಟ್ ಮಾಡುವ ಅವಕಾಶ ಪಡೆದ ಸೂರ್ಯಕುಮಾರ್ ಯಾದವ್ 31 ಎಸೆತಗಳಲ್ಲಿ 57 ರನ್ ಬಾರಿಸುವ ಮೂಲಕ ಅತ್ಯುತ್ತಮ ಪ್ರದರ್ಶನ ತೋರಿದರು.
ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಪ್ರದರ್ಶನ ತೋರಿದ ಬೆನ್ನಲ್ಲೇ ಇದೀಗ ರೋಹಿತ್ ಶರ್ಮಾ ಅವರು ಹತ್ತು ವರ್ಷಗಳ ಹಿಂದೆ 2011 ರಲ್ಲಿ ಮಾಡಿದ ಟ್ವೀಟ್ ಒಂದು ವೈರಲ್ ಆಗಿದೆ. 2010 - 11 ನೇ ಸಾಲಿನ ಬಿಸಿಸಿಐ ಅವಾರ್ಡ್ಸ್ ಕಾರ್ಯಕ್ರಮ ಮುಗಿದ ನಂತರ ರೋಹಿತ್ ಶರ್ಮಾ ಅವರು ಟ್ವೀಟ್ ಒಂದನ್ನು ಮಾಡಿದ್ದರು. ಅದೇ ಅವಾರ್ಡ್ ಕಾರ್ಯಕ್ರಮದಲ್ಲಿ 'ಅತ್ಯುತ್ತಮ ಅಂಡರ್ - 22 ಕ್ರಿಕೆಟಿಗ' ಪ್ರಶಸ್ತಿಯನ್ನು ಪಡೆದಿದ್ದ ಸೂರ್ಯಕುಮಾರ್ ಯಾದವ್ ಬಗ್ಗೆ ರೋಹಿತ್ ಶರ್ಮಾ ಟ್ವೀಟ್ ಮಾಡಿ ಹೊಗಳಿದ್ದರು.
''ಇದೀಗ ತಾನೇ ಚೆನ್ನೈನಲ್ಲಿ 2011 ರ ಬಿಸಿಸಿಐ ಅವಾರ್ಡ್ಸ್ ಕಾರ್ಯಕ್ರಮ ಮುಗಿದಿದೆ. ಕೆಲವು ಅತ್ಯುತ್ತಮ ಕ್ರಿಕೆಟಿಗರು ಮುಂದಿನ ದಿನಗಳಲ್ಲಿ ಬರಲಿದ್ದಾರೆ , ಮುಂಬೈ ಆಟಗಾರ ಸೂರ್ಯಕುಮಾರ್ಗೆ ಒಳ್ಳೆಯ ಭವಿಷ್ಯ ಇದೆ'' ಎಂದು ಟ್ವೀಟ್ ಮಾಡಿದ್ದರು ರೋಹಿತ್ ಶರ್ಮಾ. ಇದೀಗ ಈ ಟ್ವೀಟ್ ವೈರಲ್ ಆಗಿದ್ದು ಹತ್ತು ವರ್ಷಗಳ ಬಳಿಕ ಟೀಮ್ ಇಂಡಿಯಾದಲ್ಲಿ ಸೂರ್ಯಕುಮಾರ್ ಯಾದವ್ ಸ್ಥಾನ ಪಡೆದುಕೊಂಡು ಮಿಂಚುತ್ತಿದ್ದಾರೆ ಎಂದು ಕ್ರೀಡಾಭಿಮಾನಿಗಳು ರೋಹಿತ್ ಶರ್ಮಾ ಅವರ ಟ್ವೀಟ್ಗೆ ರಿಪ್ಲೈ ಮಾಡುತ್ತಿದ್ದಾರೆ.