ಪ್ರಚಾರ ರಾಯಭಾರಿಯಾಗಿದ್ದರು
50 ವರ್ಷ ಹರೆಯದವರಾಗಿರುವ ಬಲ್ವೀರ್ ಚಂದ್, ಮುಂಬೈಯಲ್ಲಿನ ಒಂದು ಫುಡ್ ಚೈನ್ ಕಂಪನಿಯ ಪ್ರಚಾರ ರಾಯಭಾರಿಯಾಗಿದ್ದರು. ಕೊರೊನಾವೈರಸ್ನಿಂದಾಗಿ ಆರ್ಥಿಕ ಸಮಸ್ಯೆಯಿಂದ ಬಲ್ವೀರ್ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಉದ್ಯೋಗ ಕಳೆದುಕೊಂಡ ಬಲ್ವೀರ್ ಈ ತಿಂಗಳ ಆರಂಭದಲ್ಲಿ ಪಂಜಾಬ್ನ ತನ್ನೂರಿಗೆ ತಲುಪಿದ್ದರು. ಅಷ್ಟರಲ್ಲಾಗಲೆ ಚಂದ್ ಅವರನ್ನು ಕೊರೊನಾ ಆವರಿಸಿಕೊಂಡಿತ್ತು.
ಕೆಲಸ ಬಿಡುವಂತೆ ಕೇಳಿಕೊಂಡರು
'ಕೊರೊನಾವೈರಸ್ ಲಾಕ್ಡೌನ್ನಿಂದಾಗಿ ನಾನಿದ್ದ ಕಂಪನಿ (ಗೋಲಿ ವಡಾಪಾವ್ ನಂ.1) ವ್ಯವಹಾರ ಕಳೆದುಕೊಂಡಿತು. ಹೀಗಾಗಿ ಕಂಪನಿ ಬಹಳಷ್ಟು ಸಿಬ್ಬಂದಿಯನ್ನು ಮನೆಗೆ ಕಳುಹಿಸಿತು. ಕೆಲಸ ಬಿಡುವಂತೆ ನನ್ನನ್ನೂ ಕೇಳಿಕೊಳ್ಳಲಾಯಿತು. ಪರಿಸ್ಥಿತಿ ಸುಧಾರಣೆಯಾದಾಗ ಮತ್ತೆ ಕೆಲಸಕ್ಕೆ ಕರೆಸಿಕೊಳ್ಳುವುದಾಗಿ ಕಂಪನಿ ಹೇಳಿದೆ,' ಎಂದು ಹಿಂದುಸ್ತಾನ್ ಟೈಮ್ಸ್ ಜೊತೆ ಮಾತನಾಡಿದ ಚಂದ್ ಹೇಳಿದ್ದಾರೆ.
ಗ್ರಾಮ ತಲುಪುತ್ತಲೇ ಕೊರೊನಾ ಆಘಾತ
ಸದ್ಯ ತನ್ನ ಕುಟುಂಬದೊಂದಿಗೆ ಇರುವ ಬಲ್ವೀರ್ ಚಂದ್, ಮುಂಬೈ ತೊರೆದು ಅವರ ಗ್ರಾಮವಾದ ಸಲ್ಹೋನ್ಗೆ ತಲುಪುವಾಗಲೇ ಅವರಿಗೆ ಕೊರೊನಾವೈರಸ್ ಪಾಸಿಟಿವ್ ಬಂದಿತ್ತು. ಈ ವಾರ ಬಲ್ವೀರ್ ಅವರಲ್ಲಿ ಅವರಿದ್ದ ಐಸೊಲೇಶನ್ ವಾರ್ಡ್ನಿಂದ ಹೊರ ಹೋಗುವಂತೆ ಹೇಳಲಾಗಿತ್ತು.
ಫೇಮಸ್ ಆಗಿದ್ದು ಹೇಗೆ?
1999ರ ವೇಳೆ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಕಣ್ಣಿಗೆ ಬಿದ್ದಿದ್ದ ಬಲ್ವೀರ್ ಚಂದ್ ಅವರನ್ನು ಗವಾಸ್ಕರ್ ಟೆಸ್ಟ್ ಪಂದ್ಯವೊಂದರ ವೇಳೆ ಕಾಮೆಂಟರಿ ಬಾಕ್ಸ್ಗೆ ಆಹ್ವಾನಿಸಿದ್ದರು. ಆ ಬಳಿಕ ಗವಾಸ್ಕರ್ ಚಂದ್ ಅವರನ್ನು ಕರೆದೊಯ್ದು ಸಚಿನ್ ಗೆ ಪರಿಚರಿಸಿದರು. ಆವತ್ತು ಚಂದ್, ಸಚಿನ್ ಅವರಲ್ಲಿ ತನ್ನ ಆರು ಫೋಟೋಗಳ ಮೇಲೆ ಆಟೋಗ್ರಾಫ್ ಹಾಕುವಂತೆ ಕೇಳಿಕೊಂಡಿದ್ದರಂತೆ. ಸಿಗ್ನೇಚರ್ ಹಾಕುತ್ತ ಸಚಿನ್, 'ಇದು ನಿಮ್ಮ ಫೋಟೋ ಅಲ್ಲ, ನನ್ನದು,' ಅಂತ ನಕ್ಕಿದ್ದರಂತೆ.