ಕೆಲವೇ ಗಂಟೆಗಳಲ್ಲಿ ಪಂದ್ಯದ ಗತಿ ಬದಲಾಯಿಸಬಲ್ಲ
ಟೆಸ್ಟ್ ಕ್ರಿಕೆಟ್ನಲ್ಲಿ ಮುನ್ನುಗ್ಗುತ್ತಿರುವ ರೀತಿಯನ್ನು ನೋಡಿದರೆ ರಿಷಭ್ ಪಂತ್ ಆಟದಲ್ಲಿ ಗಿಲ್ಕ್ರಿಸ್ಟ್ ಅವರ ಬಿಂಬ ಕಾಣಿಸುತ್ತಿದೆ. ಈ ಯುವ ಆಟಗಾರ ಪಂದ್ಯವನ್ನು ಕೆಲವೇ ಗಂಟೆಗಳಲ್ಲಿ ಭಾರತದತ್ತ ತಿರುಗಿಸುವ ವಿಶೇಷ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಸಚಿನ್ ತೆಂಡೂಲ್ಕರ್ ಪಂತ್ ವಿಚಾರವಾಗಿ ಮುಕ್ತವಾಗಿ ಮಾತನಾಡಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಪಂತ್ ಅಬ್ಬರ
ರಿಷಭ್ ಪಂತ್ ಕಳೆದ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಿಂದ ಹೊರಗುಳಿದಿದ್ದರು. ನಂತರ ಅವಕಾಶವನ್ನು ಪಡೆದ ಪಂತ್ ತಮ್ಮ ಲಯವನ್ನು ಕಂಡುಕೊಂಡರು. ಅದರಲ್ಲೂ ಅಂತಿಮ ಎರಡು ಪಂದ್ಯಗಳಲ್ಲಿ ರಿಷಭ್ ಪಂತ್ ನೀಡಿದ ಕೆಚ್ಚೆದೆಯ ಪ್ರದರ್ಶನ ಆಸಿಸ್ ನೆಲದಲ್ಲಿ ಭಾರತ ಇತಿಹಾಸ ಬರೆಯಲು ಕಾರಣವಾಗಿತ್ತು. ಇದೇ ಪ್ರದರ್ಶನವನ್ನು ಪಂತ್ ಭಾರತದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿಯೂ ಮುಂದುವರಿಸುವಲ್ಲಿ ಯಶಸ್ವಿಯಾಗಿದ್ದರು.
ಔಟಾದ ರೀತಿಗೆ ಟೀಕಿಸುವುದು ಸರಿಯಲ್ಲ
ಇನ್ನು ಇದೇ ಸಂದರ್ಭದಲ್ಲಿ ರಿಷಬ್ ಪಂತ್ ಹೇಗೆ ಔಟಾದರು ಎಂಬುದನ್ನು ಬೊಟ್ಟು ಮಾಡುವುದು ನ್ಯಾಯವಲ್ಲ. ಕ್ರಿಕೆಟ್ನ ಅತ್ಯುನ್ನತ ಮಟ್ಟದಲ್ಲಿ ತಮ್ಮದೇ ಆದ ಶೈಲಿಯಲ್ಲಿ ರನ್ಗಳಿಸುವುದು ಬಹಳ ಪ್ರಮುಖವಾಗಿರುತ್ತದೆ ಎಂದು ಸಚಿನ್ ತೆಂಡೂಲ್ಕರ್ ಹೇಳಿಕೆ ನೀಡಿದ್ದಾರೆ.
ಪೂಜಾರ ಹಾಗೂ ಪಂತ್ ಇಬ್ಬರ ಶೈಲಿ ವಿಭಿನ್ನ
"ತುಂಬಾ ಜನರು ಬೇಜವಾಬ್ಧಾರಿಯುತ ಹೊಡೆತಗಳಿಗಾಗಿ ರಿಷಭ್ ಪಂತ್ ಅವರನ್ನು ಟೀಕಿಸಿದ್ದು ನನಗೆ ನೆನಪಿದೆ. ಇದೇ ಸಂದರ್ಭದಲ್ಲಿ ಪೂಜಾರ ಅವರನ್ನು ಪಂತ್ ಜೊತೆಗೆ ಹೋಲಿಕೆ ಮಾಡುವುದನ್ನು ಕೂಡ ಬಯಸುವುದಿಲ್ಲ. ಪಂತ್ರನ್ನು ಪೂಜಾರ ಅವರೊಂದಿಗೆ ಹೋಲಿಕೆ ಮಾಡಬಾರದು. ಯಾಕೆಂದರೆ ಅವರಿಬ್ಬರೂ ವಿಭಿನ್ನ ರೀತಿಯಲ್ಲಿ ರನ್ ಗಳಿಸುವ ಆಟಗಾರರು. ರಿಷಭ್ ಪಂತ್ ದೊಡ್ಡ ಹೊಡೆತಗಳನ್ನು ಬಾರಿಸಲು ಮುಂದಾಗಿ ಔಟಾಗಬಹುದು. ಹಾಗೆಯೇ ಪೂಜಾರ ರಕ್ಷಣಾತ್ಮಕ ಆಟದಿಂದ ವಿಕೆಟ್ ಕಳೆದುಕೊಳ್ಳಬಹುದು. ಈ ಇಬ್ಬರು ಆಟಗಾರರು ಕೂಡ ತಮ್ಮದೇ ರೀತಿಯ ಮೂಲಕ ರನ್ ಗಳಿಸುತ್ತಾರೆ. ಹಾಗಾಗಿ ಅದು ಸಂಗತಿಯಾಗುವುದಿಲ್ಲ" ಎಂದು ಸಚಿನ್ ತೆಂಡೂಲ್ಕರ್ ಹೇಳಿಕೆ ನೀಡಿದ್ದಾರೆ.