ಬದುಕಿನ ಅಪೂರ್ವ ಕ್ಷಣವದು
'1983ರಲ್ಲಿ ಭಾರತದ ನಾಯಕ ಕಪಿಲ್ ದೇವ್ ಅವರು ವಿಶ್ವಕಪ್ ಮೇಲೊತ್ತೋದನ್ನು ನೋಡಿದ್ದೆ. ನಾನೂ ಅದನ್ನು ಸಂಭ್ರಮಿಸಿದ್ದೆ. ಆ ಕನಸು ನನಸಾಗಿಸಬೇಕೆಂದು ಕಾದಿದ್ದೆ. ಏನಾದರೂ ಬರಲಿ, ನಾನು ವಿಶ್ವಕಪ್ ಮೇಲೆತ್ತಬೇಕು ಅಂತ ನಿರ್ಧರಿಸಿದೆ. ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ನನ್ನ ಕನಸು ನನಸಾಯಿತು. ಅದನ್ನು ನಂಬಲು ಸಾಧ್ಯವಿಲ್ಲ. ಇದು ನನ್ನ ಕ್ರಿಕೆಟ್ ಬದುಕಿನಲ್ಲಿ ಅತ್ಯಪೂರ್ವ ಸಮಯ,' ಎಂದು ಸಂವಾದವೊಂದರಲ್ಲಿ ಮಾತನಾಡಿದ ಸಚಿನ್ ಹೇಳಿದ್ದಾರೆ.
ಸಚಿನ್ ಆಗ ಹೇಳಿದ್ದೇನು?
ಭಾರತ ವಿಶ್ವಕಪ್ ಎತ್ತುತ್ತಲೇ ಸಚಿನ್ ತೆಂಡೂಲ್ಕರ್ ಅವರನ್ನು ವಿರಾಟ್ ಕೊಹ್ಲಿ ಮತ್ತು ಯೂಸುಫ್ ಪಠಾಣ್ ಮೇಲಕ್ಕೆತ್ತಿದ್ದಾಗ ಪಠಾಣ್ ಮತ್ತು ಕೊಹ್ಲಿಯಲ್ಲಿ ಸಚಿನ್ ಒಂದು ಮಾತು ಹೇಳಿದ್ದರಂತೆ. ವಿಶ್ವಕಪ್ ಗೆದ್ದು ಒಂದು ದಶಕದ ಬಳಿಕ ಸಚಿನ್ ಈ ಬಗ್ಗೆ ತುಟಿ ಬಿಚ್ಚಿದ್ದಾರೆ. 'ವಿಜಯ ಸಂಭ್ರಮಾಚರಿಸುವಾಗ ಒಂದು ಘಟನೆ ನಡೆಯಿತು. ವಿರಾಟ್ ಮತ್ತು ಯೂಸುಫ್ ನನ್ನನ್ನು ಮೇಲಕ್ಕೆತ್ತಿದರು. ನಾವಾಗ ಬರೀ ಭಾರತ ತಂಡಕ್ಕಾಗಿ ಪ್ರಶಸ್ತಿ ಗೆದ್ದಿರಲಿಲ್ಲ. ಇಡೀ ದೇಶಕ್ಕಾಗಿ ಟ್ರೋಫಿ ಗೆದ್ದಿದ್ದೆವು. ಹೀಗಾಗಿ ನನ್ನನ್ನು ಬೀಳಿಸಬೇಡಿ ಎಂದು ನಾನು ವಿರಾಟ್ ಮತ್ತು ಯೂಸುಫ್ರಲ್ಲಿ ಕೇಳಿಕೊಂಡಿದ್ದೆ,' ಎಂದು ಸಚಿನ್ ಹೇಳಿದ್ದಾರೆ.
ಗಂಭೀರ್, ಧೋನಿ ಬ್ಯಾಟಿಂಗ್
2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಶ್ರೀಲಂಕಾ, ತಿಲಕರತ್ನೆ ದಿಲ್ಶನ್ 33, ಕುಮಾರ ಸಂಗಕ್ಕಾರ 48, ಮಹೇಲ ಜಯವರ್ದನೆ 103 (88), ತಿಲನ್ ಸಮರವೀರ 21, ನುವಾನ್ ಕುಲಸೇಕರ 32, ತಿಸಾರ ಪೆರೆರಾ 22 ರನ್ನೊಂದಿಗೆ 50 ಓವರ್ಗೆ 6 ವಿಕೆಟ್ ನಷ್ಟದಲ್ಲಿ 274 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಭಾರತ, ಸಚಿನ್ ತೆಂಡೂಲ್ಕರ್ 18, ಗೌತಮ್ ಗಂಭೀರ್ 97, ವಿರಾಟ್ ಕೊಹ್ಲಿ 35, ಎಂಎಸ್ ಧೋನಿ ಅಜೇಯ 91 (79), ಯುವರಾಜ್ ಸಿಂಗ್ 21 ರನ್ನೊಂದಿಗೆ 48.2 ಓವರ್ಗೆ 4 ವಿಕೆಟ್ ಕಳೆದು 277 ರನ್ ಗಳಿಸಿತ್ತು.