ಕ್ರಿಕೆಟ್ ಹೊಸ ಆಯಾಮ
1983ರ ವಿಶ್ವಕಪ್ ಗೆಲುವು ಭಾರತದಲ್ಲಿ ಕ್ರಿಕೆಟ್ ಅಂಗಳದಲ್ಲಿ ಹೊಸ ಸಂಚಲನವನ್ನು ಸೃಷ್ಟಿ ಮಾಡಿದ ಸಂದರ್ಭ. ಆದರೆ ಅದನ್ನು ಇನ್ನೊಂದು ಮಟ್ಟಕ್ಕೆ ತೆಗೆದುಕೊಂಡು ಹೋಗುವಲ್ಲಿ ಪ್ರಮುಖಪಾತ್ರವಹಿಸಿದ್ದು ನಿಸ್ಸಂಶಯವಾಗಿ ಸಚಿನ್ ತೆಂಡೂಲ್ಕರ್. ತನ್ನ ಅಮೋಘ ಆಟದ ಮೂಲಕ ಕ್ರಿಕೆಟ್ಗೆ ಹೊಸ ಆಯಾಮವನ್ನು ನೀಡಿದ ಆಟಗಾರನೇ ಸಚಿನ್ ತೆಂಡೂಲ್ಕರ್.
ಶಾರ್ಜಾದಲ್ಲಿ ಸಚಿನ್ ಚಂಡಮಾರುತ
ಸಚಿನ್ ತಾನೊಬ್ಬ ಎಂತಾ ಅದ್ಭುತ ಬ್ಯಾಟ್ಸ್ಮನ್ ಎಂಬುದನ್ನು ಜಗತ್ತಿಗೆ ತೋರಿಸಿದ್ದರು. ಅದರೆ ತನ್ನ ಅತ್ಯುಗ್ರ ಸ್ವರೂಪವನ್ನು ತೋರಿಸಿದ್ದು ಶಾರ್ಜಾದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಕೊಕೊಕೊಲಾ ಕಪ್ ಸರಣಿಯಲ್ಲಿ. ಸಚಿನ್ ತೆಂಡೂಲ್ಕರ್ ಈ ಪಂದ್ಯದಲ್ಲಿ 131 ಎಸೆತಗಳಲ್ಲಿ ಭರ್ಜರಿ 143 ರನ್ ಸಿಡಿಸಿದ್ದರು. 9 ಬೌಂಡರಿ ಮತ್ತು 5 ಭರ್ಜರಿಸ ಸಿಕ್ಸರ್ ಒಳಗೊಂಡಿತ್ತು ಆ ಅದ್ಭುತ ಇನ್ನಿಂಗ್ಸ್. ಶಾರ್ಜಾದ ಚಂಡಮಾರುತದ ನಡುವೆಯೇ ಸಚಿನ್ ತನ್ನ ಬ್ಯಾಟಿಂಗ್ ಚಂಡಮಾರುತದೊಂದಿಗೆ ಅಬ್ಬರಿಸಿದ್ದರು. ಈ ಆಕ್ರಮಣಕಾರಿ ಆಟ ಕ್ರಿಕೆಟ್ನಲ್ಲಿ ಹೊಸ ಸಂಚಲನಕ್ಕೆ ಕಾರಣವಾಯಿತು. ಈ ಪಂದ್ಯವನ್ನು ಭಾರತ ಗೆಲ್ಲಲು ಸಾಧ್ಯವಾಗಲಿಲ್ಲ ಆದರೆ ಇದು ಏಕದಿನ ಕ್ರಿಕೆಟ್ ಇತಿಹಾಸದ ಅದ್ಭುತ ಇನ್ನಿಂಗ್ಸ್ಗಳಲ್ಲಿ ಒಂದಾಗಿದೆ.
ಭಾರತೀಯ ಕ್ರಿಕೆಟ್ನ ಬದಲಾವಣೆ
ಸಚಿನ್ ತೆಂಡೂಲ್ಕರ್ ಆಕ್ರಮಣಕಾರಿ ಆಟ ಭಾರತೀಯ ಕ್ರಿಕೆಟ್ನಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಯಿತು. ಅನೇಕ ಯುವ ಕ್ರಿಕೆಟಿಗರು ಸಚಿನ್ ಅವರ ಆಕ್ರಮಣಕಾರಿ ಶೈಲಿಯಿಂದ ಪ್ರಭಾವಿತರಾಗಿದ್ದರು. ಅದರ ಪರಿಣಾಮವಾಗಿ ಭಾರತೀಯ ಕ್ರಿಕೆಟ್ನ ಯುವ ಪೀಳಿಗೆಯಲ್ಲಿ ಸ್ಪೋಟಕ ಆಟಗಾರರ ದಂಡೇ ಕಾಣಿಸಿಕೊಂಡಿತು. ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಧೋನಿಯಿಂದ ಆರಂಭವಾಗಿ ನಂತರ ಶಿಖರ್ ಧವನ್, ರೋಹಿತ್ ಶರ್ಮಾ ಅವರಿಂದ ಟೀಮ್ ಇಂಡಿಯಾ ನಾಯಕ ಕೊಹ್ಲಿವರೆ ಇದು ವಿಸ್ತರಣೆಯಾಯಿತು.
ವಿಶ್ವಕಪ್ನಲ್ಲಿ ಪಾಕ್ ವಿರುದ್ಧದ ಇನ್ನಿಂಗ್ಸ್
2003 ರ ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧದ ಸಚಿನ್ ಆಟವೂ ಅದ್ಭುತ ಇನ್ನಿಂಗ್ಸ್ಗಳಲ್ಲಿ ಒಂದು. ಇಲ್ಲಿ ಸಚಿನ್ ಶತಕಗಳಿಸಲು ವಿಫಲರಾಗಿದ್ದರು. ಆದರೆ ಸಚಿನ್ ಆಡಿದ ಅಮೋಘ ಆಟ ಪಾಕಿಸ್ತಾನ ನೀಡಿದ್ದ 274ರನ್ಗಳ ಬೃಹತ್ ಗುರಿಯನ್ನು ಭಾರತ ಹಿಂದಿಕ್ಕಿ ಗೆಲ್ಲಲು ಕಾರಣವಾಗಿತ್ತು. ಇಲ್ಲಿ ಸಚಿನ್ 98 ರನ್ಗಳಿಸಿದ್ದರು. ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಈ ಇನ್ನಿಂಗ್ಸ್ ಎಂದಿಗೂ ನೆನಪಿನಲ್ಲಿರುತ್ತದೆ.
ಭಾರತದ ಮೊದಲ 'ಹಿಟ್ಮ್ಯಾನ್'
ಕ್ರಿಕೆಟ್ನಲ್ಲಿ ಎಲ್ಲಾ ಬೌಲರ್ಗಳಿಗೆ ಸಚಿನ್ ಸಿಂಹಸ್ವಪ್ನರಾಗಿದ್ದರು. ಎಲ್ಲಾ ಬ್ಯಾಟ್ಸ್ಮನ್ಗಳಿಗೆ ಭೀತಿ ಹುಟ್ಟಿಸಿದ್ದ ಶೋಯೆಬ್ ಅಖ್ತರ್, ಶೇನ್ ವಾರ್ನ್ರಂತಾ ಬೌಲರ್ಗಳು ಸಚಿನ್ ಬ್ಯಾಟಿಂಗ್ ಮುಂದೆ ಸೊಲ್ಲೆತ್ತುತ್ತಿರಲಿಲ್ಲ. ತಾಂತ್ರಿಕವಾಗಿ ಅತ್ಯಂತ ಬಲಿಷ್ಠವಾಗಿದ್ದ ಸಚಿನ್ ಆಕ್ರಮಣಕಾರಿಯೂ ಆಗಿದ್ದರು. ಹೀಗಾಗಿ ಭಾರತದ ಮೊದಲ ಹಿಟ್ಮ್ಯಾನ್ ಎನಿಸಿಕೊಂಡರು. ಮಾತ್ರವಲ್ಲ ಕ್ರಿಕೆಟ್ ಎಂಬ ಧರ್ಮಕ್ಕೆ ಸಚಿನ್ ದೇವರೆ ಆಗಿಬಿಟ್ಟರು.