ಐಪಿಎಲ್ 2021 ಆವೃತ್ತಿ ಕೊರೊನಾ ವೈರಸ್ನ ಕಾರಣದಿಂದಾಗಿ ಮುಂದೂಡಿಕೆಯಾಗಿರುವ ನಂತರ ಈಗ ಎಲ್ಲರ ಚಿತ್ತವೂ ಭಾರತದ ಇಂಗ್ಲೆಂಡ್ ಪ್ರವಾಸದತ್ತ ನೆಟ್ಟಿದೆ. ಅದರಲ್ಲೂ ಮೊದಲಿಗೆ ಭಾರತ ತಂಡ ಇಂಗ್ಲೆಂಡ್ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯಮ್ಶಿಪ್ನ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣೆಸಾಟವನ್ನು ನಡೆಸಲಿದೆ.
ಈ ಪಂದ್ಯಕ್ಕೆ ಭಾರತ ತಂಡವನ್ನು ಈಗಾಗಲೇ 20 ಆಟಗಾರರ ತಂಡವನ್ನು ಹೆಸರಿಸಲಾಗಿದೆ. ಆದರೆ ಆಯ್ಕೆಯಾಗಿರುವ ಮೂವರು ಆಟಗಾರರು ಪ್ರವಾಸಕ್ಕೆ ತೆರಳುವ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ. ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾ, ಕೆಎಲ್ ರಾಹುಲ್ ಹಾಗೂ ವೇಗಿ ಪ್ರಸಿದ್ಧ್ ಕೃಷ್ಣ ಅನಾರೋಗ್ಯದ ಸಮಸ್ಯೆಗೆ ಒಳಗಾಗಿರುವುದು ಇದಕ್ಕೆ ಕಾರಣವಾಗಿದೆ.
ವೃದ್ಧಿಮಾನ್ ಸಾಹಾ ಹಾಗೂ ಪ್ರಸಿದ್ಧ್ ಕೃಷ್ಣ ಕೊರೊನಾ ವೈರಸ್ಗೆ ತುತ್ತಾಗಿ ಸದ್ಯ ಐಸೋಲೇಶನ್ನಲ್ಲಿದ್ದಾರೆ. ಪಂಜಾಬ್ ಕಿಂಗ್ಸ ತಂಡದ ನಾಯಕ ಕೆಎಲ್ ರಾಹುಲ್ ಅಪೆಂಡಿಸಿಟಿಸ್ಗೆ ತುತ್ತಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಹೀಗಾಗಿ ಈ ಮೂವರು ಕೂಡ ಶೀಘ್ರವಾಗಿ ಚೇತರಿಸಿಕೊಂಡರಷ್ಟೇ ತಂಡದ ಜೊತೆಗೆ ವಿಮಾನವನ್ನು ಏರುವ ಅವಕಾಶವನ್ನು ಪಡೆಯಲಿದ್ದಾರೆ.
ಜೂನ್ 18-22ರ ವರೆಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯ ನಡೆಯಲಿದೆ. ಹೀಗಾಗಿ ಭಾರತ ಜೂನ್ 2ರಂದು ಇಂಗ್ಲೆಂಡ್ಗೆ ಪ್ರಯಾಣವನ್ನು ಬೆಳೆಸಲಿದೆ. ಬಳಿಕ ಇಂಗ್ಲೆಂಡ್ನಲ್ಲಿ ಭಾರತ ತಂಡ 14 ದಿನಗಳ ಕಡ್ಡಾಯ ಕ್ವಾರಂಟೈನ್ ಪೂರೈಸಬೇಕಿದೆ.