ಇಂಗ್ಲೆಂಡ್ ಪ್ರವಾಸದಲ್ಲಿ ಅಶ್ವಿನ್ ಅವರಿಗೆ ಆಡುವ ಅವಕಾಶ ನೀಡದೇ ಇರುವುದರ ಕುರಿತು ಸಲ್ಮಾನ್ ಬಟ್ ಬೇಸರ
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರವಿಚಂದ್ರನ್ ಅಶ್ವಿನ್ ಅವರ ಅಮೋಘ ಪ್ರದರ್ಶನವನ್ನು ನೋಡಿದ ನಂತರ ಮಾತನಾಡಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ಈ ರೀತಿ ಉತ್ತಮ ಪ್ರದರ್ಶನವನ್ನು ನೀಡುವಂತಹ ಆಟಗಾರನನ್ನು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿಸದೇ ಇರುವುದರ ಕುರಿತು ವಿರಾಟ್ ಕೊಹ್ಲಿ ಮತ್ತು ರವಿ ಶಾಸ್ತ್ರಿ ಅವರೇ ಉತ್ತರ ನೀಡಬೇಕು ಎಂದಿದ್ದಾರೆ. ಹೌದು, ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿದ್ದಾಗ ರವಿಶಾಸ್ತ್ರಿ ತಂಡದ ತರಬೇತುದಾರರಾಗಿದ್ದರು. ಹೀಗಾಗಿ ಸಲ್ಮಾನ್ ಬಟ್ ವಿರಾಟ್ ಕೊಹ್ಲಿ ಜೊತೆ ರವಿಶಾಸ್ತ್ರಿ ಅವರ ಹೆಸರನ್ನು ಇಲ್ಲಿ ಎಳೆದಿದ್ದಾರೆ.
ಟಿ ಟ್ವೆಂಟಿ ವಿಶ್ವಕಪ್ನಲ್ಲಿಯೂ ಅಶ್ವಿನ್ ಅವರನ್ನು ಕಡೆಗಣಿಸಲಾಗಿತ್ತು ಎಂದ ಬಟ್
ಇನ್ನೂ ಮುಂದುವರಿದು ಮಾತನಾಡಿರುವ ಸಲ್ಮಾನ್ ಬಟ್ ಇತ್ತೀಚೆಗಷ್ಟೇ ಮುಕ್ತಾಯವಾದ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದಲ್ಲಿನ ತನ್ನ ಮೊದಲೆರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾದ ರವಿಚಂದ್ರನ್ ಅಶ್ವಿನ್ ಅವರನ್ನು ಕಣಕ್ಕಿಳಿಸದೇ ಇರುವುದರ ಕುರಿತು ಕೂಡ ಪ್ರಶ್ನೆ ಎತ್ತಿದ್ದಾರೆ. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧದ ಪಂದ್ಯಗಳಲ್ಲಿ ರವಿಚಂದ್ರನ್ ಅಶ್ವಿನ್ ಅವರಿಗೆ ಅವಕಾಶ ನೀಡದೇ ಇದ್ದದ್ದು ಇನ್ನೂ ಆಶ್ಚರ್ಯಕರವಾಗಿದೆ ಎಂದು ಬಟ್ ಹೇಳಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರವಿಚಂದ್ರನ್ ಅಶ್ವಿನ್ ಸರಣಿಶ್ರೇಷ್ಠ
ಸಲ್ಮಾನ್ ಬಟ್ ಹೇಳಿದಂತೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮತ್ತು ಟಿ ಟ್ವೆಂಟಿ ವಿಶ್ವಕಪ್ನ ಕೆಲ ಪಂದ್ಯಗಳಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಳ್ಳದೇ ಇದ್ದ ರವಿಚಂದ್ರನ್ ಅಶ್ವಿನ್ ನ್ಯೂಜಿಲೆಂಡ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ 6 ವಿಕೆಟ್ ಮತ್ತು ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್ ಪಡೆದು ಮಿಂಚುವ ಮೂಲಕ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.