ಭಾರತ ಪ್ರವಾಸವನ್ನು ಕೈಗೊಂಡು ಟೀಮ್ ಇಂಡಿಯಾ ವಿರುದ್ಧದ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಿ ಎರಡೂ ಸರಣಿಗಳಲ್ಲಿಯೂ ಸೋಲುವುದರ ಮೂಲಕ ನ್ಯೂಜಿಲೆಂಡ್ ಮುಖಭಂಗಕ್ಕೆ ಒಳಗಾಗಿದೆ. ಮೊದಲಿಗೆ ಇತ್ತಂಡಗಳ ನಡುವೆ ನಡೆದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಎಲ್ಲ ಪಂದ್ಯಗಳಲ್ಲಿಯೂ ಜಯಗಳಿಸುವುದರ ಮೂಲಕ ವೈಟ್ ವಾಷ್ ಬಳಿಯಿತು. ನಂತರ ಇತ್ತಂಡಗಳ ನಡುವೆ ನಡೆದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಕೊನೆಯದಾಗಿ ಸೋಲಿನ ಸುಳಿಯಿಂದ ಪಾರಾಗಿ ಪಂದ್ಯವನ್ನು ಡ್ರಾ ಮಾಡಿಕೊಂಡಿತು. ಹಾಗೂ ಇತ್ತಂಡಗಳ ನಡುವೆ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 372 ರನ್ಗಳ ಬೃಹತ್ ಅಂತರದಿಂದ ಜಯ ಸಾಧಿಸುವುದರ ಮೂಲಕ ನೂತನ ದಾಖಲೆಯನ್ನು ಬರೆಯಿತು.
ಪುನೀತ್ ನೆನೆದು ವಿಶೇಷವಾಗಿ ಗೌರವ ಸಲ್ಲಿಸಿದ ಡೇವಿಡ್ ವಾರ್ನರ್; ವಿಡಿಯೋ ವೈರಲ್
ಹೀಗೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ 1-0 ಅಂತರದಿಂದ ಕೈವಶ ಮಾಡಿಕೊಳ್ಳುವುದರ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಪ್ರತೀಕಾರವನ್ನು ತೀರಿಸಿಕೊಂಡಿತು. ಇನ್ನು ಮುಂಬೈ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತದ ಈ ಅಮೋಘ ಗೆಲುವಿಗೆ ಪ್ರಮುಖ ಕಾರಣವೆಂದರೆ ಸ್ಪಿನ್ ಬೌಲರ್ಗಳು. ಹೌದು, ಸ್ಪಿನ್ ಬೌಲರ್ಗಳು ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಮಾತ್ರವಲ್ಲದೇ ಪ್ರಥಮ ಟೆಸ್ಟ್ ಪಂದ್ಯದಲ್ಲಿಯೂ ಕೂಡ ತಂಡಕ್ಕೆ ಬೇಕಾದ ಉತ್ತಮ ಪ್ರದರ್ಶನವನ್ನು ನೀಡಿದ್ದರು. ಅದರಲ್ಲಿಯೂ ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿಯೂ ಮಿಂಚಿದ್ದು, ನ್ಯೂಜಿಲೆಂಡ್ ವಿರುದ್ಧದ 2 ಟೆಸ್ಟ್ ಪಂದ್ಯಗಳ ಪೈಕಿ 70 ರನ್ ಕಲೆಹಾಕುವುದು ಮಾತ್ರವಲ್ಲದೆ ಬರೋಬ್ಬರಿ 14 ವಿಕೆಟ್ ಪಡೆದು ಮಿಂಚಿದ್ದಾರೆ.
ಕಿವೀಸ್ ವಿರುದ್ಧ 372 ರನ್ಗಳ ಭರ್ಜರಿ ಜಯ ಸಾಧಿಸಿ ಹಿಂದೆಂದೂ ಮಾಡಿರದ ಸಾಧನೆ ಮಾಡಿದ ಭಾರತ
ಹೀಗೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಿಂಚಿರುವ ರವಿಚಂದ್ರನ್ ಅಶ್ವಿನ್ ಕುರಿತಾಗಿ ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ಮಾತನಾಡಿದ್ದು ವಿರಾಟ್ ಕೊಹ್ಲಿ ಮತ್ತು ರವಿಶಾಸ್ತ್ರಿ ವಿರುದ್ಧ ಈ ಕೆಳಕಂಡಂತೆ ಕಿಡಿಕಾರಿದ್ದಾರೆ..
ಇಂಗ್ಲೆಂಡ್ ಪ್ರವಾಸದಲ್ಲಿ ಅಶ್ವಿನ್ ಅವರಿಗೆ ಆಡುವ ಅವಕಾಶ ನೀಡದೇ ಇರುವುದರ ಕುರಿತು ಸಲ್ಮಾನ್ ಬಟ್ ಬೇಸರ
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರವಿಚಂದ್ರನ್ ಅಶ್ವಿನ್ ಅವರ ಅಮೋಘ ಪ್ರದರ್ಶನವನ್ನು ನೋಡಿದ ನಂತರ ಮಾತನಾಡಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ಈ ರೀತಿ ಉತ್ತಮ ಪ್ರದರ್ಶನವನ್ನು ನೀಡುವಂತಹ ಆಟಗಾರನನ್ನು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿಸದೇ ಇರುವುದರ ಕುರಿತು ವಿರಾಟ್ ಕೊಹ್ಲಿ ಮತ್ತು ರವಿ ಶಾಸ್ತ್ರಿ ಅವರೇ ಉತ್ತರ ನೀಡಬೇಕು ಎಂದಿದ್ದಾರೆ. ಹೌದು, ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿದ್ದಾಗ ರವಿಶಾಸ್ತ್ರಿ ತಂಡದ ತರಬೇತುದಾರರಾಗಿದ್ದರು. ಹೀಗಾಗಿ ಸಲ್ಮಾನ್ ಬಟ್ ವಿರಾಟ್ ಕೊಹ್ಲಿ ಜೊತೆ ರವಿಶಾಸ್ತ್ರಿ ಅವರ ಹೆಸರನ್ನು ಇಲ್ಲಿ ಎಳೆದಿದ್ದಾರೆ.
ಟಿ ಟ್ವೆಂಟಿ ವಿಶ್ವಕಪ್ನಲ್ಲಿಯೂ ಅಶ್ವಿನ್ ಅವರನ್ನು ಕಡೆಗಣಿಸಲಾಗಿತ್ತು ಎಂದ ಬಟ್
ಇನ್ನೂ ಮುಂದುವರಿದು ಮಾತನಾಡಿರುವ ಸಲ್ಮಾನ್ ಬಟ್ ಇತ್ತೀಚೆಗಷ್ಟೇ ಮುಕ್ತಾಯವಾದ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದಲ್ಲಿನ ತನ್ನ ಮೊದಲೆರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾದ ರವಿಚಂದ್ರನ್ ಅಶ್ವಿನ್ ಅವರನ್ನು ಕಣಕ್ಕಿಳಿಸದೇ ಇರುವುದರ ಕುರಿತು ಕೂಡ ಪ್ರಶ್ನೆ ಎತ್ತಿದ್ದಾರೆ. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧದ ಪಂದ್ಯಗಳಲ್ಲಿ ರವಿಚಂದ್ರನ್ ಅಶ್ವಿನ್ ಅವರಿಗೆ ಅವಕಾಶ ನೀಡದೇ ಇದ್ದದ್ದು ಇನ್ನೂ ಆಶ್ಚರ್ಯಕರವಾಗಿದೆ ಎಂದು ಬಟ್ ಹೇಳಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರವಿಚಂದ್ರನ್ ಅಶ್ವಿನ್ ಸರಣಿಶ್ರೇಷ್ಠ
ಸಲ್ಮಾನ್ ಬಟ್ ಹೇಳಿದಂತೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮತ್ತು ಟಿ ಟ್ವೆಂಟಿ ವಿಶ್ವಕಪ್ನ ಕೆಲ ಪಂದ್ಯಗಳಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಳ್ಳದೇ ಇದ್ದ ರವಿಚಂದ್ರನ್ ಅಶ್ವಿನ್ ನ್ಯೂಜಿಲೆಂಡ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ 6 ವಿಕೆಟ್ ಮತ್ತು ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್ ಪಡೆದು ಮಿಂಚುವ ಮೂಲಕ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ.
Allow Notifications
You have already subscribed