ಕಳೆದ ಭಾನುವಾರದಿಂದ ಬಹುನಿರೀಕ್ಷಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭಗೊಂಡಿದ್ದು, ಟೂರ್ನಿಗೆ ಅರ್ಹತಾ ಪಂದ್ಯಗಳ ಮೂಲಕ ಚಾಲನೆ ದೊರೆತಿದೆ. ಅರ್ಹತಾ ಸುತ್ತಿನ ಪಂದ್ಯಗಳು ಒಂದೆಡೆ ನಡೆಯುತ್ತಿದ್ದರೆ ಮತ್ತೊಂದೆಡೆ ವಿವಿಧ ತಂಡಗಳು ಅಭ್ಯಾಸ ಪಂದ್ಯಗಳಲ್ಲಿ ತೊಡಗಿಕೊಂಡಿವೆ.
ಇನ್ನು ಪ್ರತಿಷ್ಠಿತ ಟೂರ್ನಿಯ ಸೂಪರ್ 12 ಪಂದ್ಯಗಳು ಅಕ್ಟೋಬರ್ 23ರ ಶನಿವಾರದಿಂದ ಆರಂಭವಾಗಲಿದ್ದು, ಭಾರತ ಮತ್ತು ಪಾಕಿಸ್ತಾನ ತಂಡಗಳು ಟೂರ್ನಿಯಲ್ಲಿ ತಮ್ಮ ಮೊದಲನೇ ಪಂದ್ಯವನ್ನು ಅಕ್ಟೋಬರ್ 24ರ ಭಾನುವಾರದಂದು ಆಡಲಿವೆ. ಹೌದು, ಬದ್ಧ ವೈರಿಗಳ ಕಾದಾಟ ಎಂದೇ ಹೆಸರನ್ನು ಮಾಡಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಮುಂಬರಲಿರುವ ಭಾನುವಾರ ( ಅಕ್ಟೋಬರ್ 24 ) ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಇನ್ನು ಈ ಪಂದ್ಯ ನಡೆಯುವ ದಿನದಂದು ಟೆನಿಸ್ ತಾರೆ ಸಾನಿಯಾ ಮಿರ್ಜಾ ಸಾಮಾಜಿಕ ಜಾಲತಾಣವನ್ನು ತೊರೆಯುವ ನಿರ್ಧಾರ ಮಾಡಿದ್ದಾರೆ. ಈ ಕುರಿತು ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ಸಾನಿಯಾ ಮಿರ್ಜಾ ಭಾರತ ಮತ್ತು ಪಾಕಿಸ್ತಾನದ ಪಂದ್ಯ ನಡೆಯುವ ದಿನದಂದು ತಾನು ಸಾಮಾಜಿಕ ಜಾಲತಾಣದಿಂದ ಹೊರಗುಳಿಯಲಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಈ ಪಂದ್ಯ ನಡೆಯುವ ವೇಳೆ ಎದುರಾಗುವ ವೈರತ್ವದಿಂದ ಕೂಡಿದ ಕಾಮೆಂಟ್ಗಳಿಂದ ದೂರ ಉಳಿಯಲು ಈ ನಿರ್ಧಾರವನ್ನು ಕೈಗೊಂಡಿರುವುದಾಗಿ ಸಾನಿಯಾ ಮಿರ್ಜಾ ಇದೇ ವಿಡಿಯೋದಲ್ಲಿ ತಿಳಿಸಿದ್ದಾರೆ.
ಮೂಲತಃ ಭಾರತದವರಾದ ಸಾನಿಯಾ ಮಿರ್ಜಾ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಜೊತೆ ವಿವಾಹವಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಈ ಕಾರಣದಿಂದಾಗಿಯೇ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಪಂದ್ಯಗಳು ನಡೆದ ಸಂದರ್ಭದಲ್ಲಿ ಯಾವುದೇ ತಂಡ ಗೆದ್ದರೂ ಸಾನಿಯಾ ಮಿರ್ಜಾ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಮತ್ತು ಟೀಕೆಗಳು ವ್ಯಕ್ತವಾಗುತ್ತಿರುತ್ತವೆ. ಹೀಗಾಗಿಯೇ ಇಂತಹ ಟೀಕೆಗಳಿಂದ ದೂರ ಉಳಿಯಲು ಸಾನಿಯಾ ಮಿರ್ಜಾ ಸಾಮಾಜಿಕ ಜಾಲತಾಣದಿಂದ ದೂರ ಉಳಿಯುವ ನಿರ್ಧಾರವನ್ನು ಕೈಗೊಂಡಿದ್ದಾರೆ.
ಇನ್ನು ಸಾನಿಯಾ ಮಿರ್ಜಾ ಪೋಸ್ಟ್ ಮಾಡಿರುವ ಈ ವಿಡಿಯೋಗೆ ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಮ್ಮ ಕಾಮೆಂಟ್ ಮಾಡಿದ್ದು ಒಳ್ಳೆಯ ಉಪಾಯ ಎಂದಿದ್ದಾರೆ.
ಇನ್ನು ದೊಡ್ಡ ಮಟ್ಟದಲ್ಲಿ ಕ್ರೇಜ್ ಮತ್ತು ವೀಕ್ಷಕ ವರ್ಗವನ್ನು ಹೊಂದಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಅಕ್ಟೋಬರ್ 24ರಂದು ನಡೆಯಬೇಕಾಗಿರುವ ಪಂದ್ಯದ ವಿರುದ್ಧ ಇದೀಗ ಸಾಕಷ್ಟು ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿದೆ. ಟೀಮ್ ಇಂಡಿಯಾ ಯಾವುದೇ ಕಾರಣಕ್ಕೂ ಪಾಕಿಸ್ತಾನದ ವಿರುದ್ಧ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಆಯೋಜಿಸಿರುವ ಪಂದ್ಯದಲ್ಲಿ ಭಾಗವಹಿಸಬಾರದು ಎಂದು ಭಾರತದ ಹಲವಾರು ಸಂಘಟನೆಗಳು ಒತ್ತಾಯಿಸಿದ್ದು ಇದೀಗ ಈ ಕುರಿತಾಗಿ ಬಿಸಿಸಿಐನ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮಾತನಾಡಿದ್ದು ಪಂದ್ಯ ನಡೆಯುವುದರ ಕುರಿತು ಸ್ಪಷ್ಟನೆ ನೀಡಿದ್ದಾರೆ. "ಐಸಿಸಿ ಆಯೋಜಿಸಿರುವ ಪಂದ್ಯಗಳನ್ನು ನಾವು ಯಾವುದೇ ಕಾರಣಕ್ಕೂ ಆಡುವುದಿಲ್ಲ ಎಂದು ವಿರೋಧಿಸಲು ಸಾಧ್ಯವಿಲ್ಲ. ಪ್ರತಿಯೊಂದು ತಂಡವೂ ಕೂಡ ಐಸಿಸಿ ನಿಯಮದಂತೆ ಪಂದ್ಯವನ್ನು ಆಡಿಯೇ ತೀರಬೇಕಾಗುತ್ತದೆ" ಎಂದು ರಾಜೀವ್ ಶುಕ್ಲಾ ಹೇಳಿಕೆ ನೀಡಿದ್ದಾರೆ. "ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿಗೆ ಬಲಿಯಾಗಿರುವವರಿಗೆ ಸಂತಾಪ ಸೂಚಿಸುತ್ತೇನೆ. ಈ ರೀತಿಯ ದಾಳಿ ಮಾಡಿರುವ ಉಗ್ರ ಸಂಘಟನೆಗಳು ಸರಿಯಾದ ಪಾಠ ಕಲಿಯಲಿವೆ. ಆದರೆ ಕ್ರಿಕೆಟ್ ವಿಚಾರದಲ್ಲಿ ಪಂದ್ಯವನ್ನಾಡದೇ ಹಿಂದೆ ಸರಿಯುವುದು ಸಾಧ್ಯವಿಲ್ಲ" ಎಂದು ರಾಜೀವ್ ಶುಕ್ಲಾ ಹೇಳಿಕೆ ನೀಡಿದ್ದಾರೆ.