ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ಕ್ರಿಕೆಟ್ನ ದೊಡ್ಡ ಅಭಿಮಾನಿ ಎನ್ನುವುದು ಹೊಸ ವಿಚಾರವೇನಲ್ಲ. ರಾಹುಲ್ ದ್ರಾವಿಡ್ರ ಅಪ್ಪಟ ಅಭಿಮಾನಿಯಾಗಿರುವ ಕಿಚ್ಚ ಸುದೀಪ್ ರಾಷ್ಟ್ರ, ಅಂತಾರಾಷ್ಟ್ರೀಯ ಕ್ರಿಕೆಟಿಗರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.
ಭಾರತ ತಂಡದಲ್ಲಿ ಹಲವು ಕ್ರಿಕೆಟಿಗರು ಕೂಡ ಸುದೀಪ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಇತ್ತೀಚೆಗೆ ಬೆಂಗಳೂರಿನಲ್ಲಿ ಸುದೀಪ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ್ದಾರೆ.
ಕನ್ನಡ ಚಲನಚಿತ್ರ ಕಪ್ 2023: ದಿನಾಂಕ, ಸ್ಥಳ ಬದಲಾವಣೆ; ಕ್ರಿಸ್ ಗೇಲ್, ಲಾರಾ, ರೈನಾ, ಗಿಬ್ಸ್ ಭಾಗಿ
ಸಂಜು ಸ್ಯಾಮ್ಸನ್ಗೆ ಕರ್ನಾಟದ ಕ್ರಿಕೆಟಿಗ ಕೆ.ಸಿ. ಕಾರಿಯಪ್ಪ ಜೊತೆಯಾಗಿದ್ದಾರೆ. ಯಾವ ಉದ್ದೇಶಕ್ಕಾಗಿ ಭೇಟಿಯಾಗಿದ್ದು ಎಂದು ತಿಳಿದಿಲ್ಲವಾದರೂ, ಇದೊಂದು ಸೌಹಾರ್ದ ಭೇಟಿ ಎನ್ನಲಾಗುತ್ತಿದೆ.
ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದ ವೇಳೆ ಮೊಣಕಾಲು ಗಾಯಕ್ಕೆ ತುತ್ತಾಗಿದ್ದ ಸಂಜು ಸ್ಯಾಮ್ಸನ್ ಸರಣಿಯಿಂದ ಹೊರಬಿದ್ದಿದ್ದರು. ಕೊಚ್ಚಿಯಲ್ಲಿ ವೈಯಕ್ತಿಕ ಫಿಸಿಯೋ ಜೊತೆ ಫಿಟ್ನೆಸ್ ಮೇಲೆ ಕೆಲಸ ಮಾಡಿದ್ದ ಅವರು ಸಂಪೂರ್ಣವಾಗಿ ಚೇತರಿಸಿಕೊಂಡರು. ಫಿಟ್ನೆಸ್ ಪರೀಕ್ಷೆಯನ್ನು ತೆಗೆದುಕೊಳ್ಳಲು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್ಸಿಎ) ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಸುದೀಪ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಫಿಟ್ನೆಸ್ ಪರೀಕ್ಷೆಯಲ್ಲಿ ಸ್ಯಾಮ್ಸನ್ ಪಾಸ್
ಇನ್ನು ಎನ್ಸಿಎಯಲ್ಲಿ ಶನಿವಾರ ಫಿಟ್ನೆಸ್ ಪರೀಕ್ಷೆಯಲ್ಲಿ ಭಾಗವಹಿಸಿದ್ದ ಸಂಜು ಸ್ಯಾಮ್ಸನ್ ಯಶಸ್ವಿಯಾಗಿ ತೇರ್ಗಡೆಯಾಗಿದ್ದಾರೆ. ಸದ್ಯ 100 ಪ್ರತಿಶತ ಫಿಟ್ ಆಗಿರುವ ಸಂಜು ಸ್ಯಾಮ್ಸನ್ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡದಲ್ಲಿ ಅವಕಾಶ ಪಡೆಯುವ ವಿಶ್ವಾಸದಲ್ಲಿದ್ದಾರೆ.
ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾದರೆ, 2023ರ ಐಪಿಎಲ್ನತ್ತ ಗಮನ ಹರಿಸಲಿದ್ದಾರೆ. ಐಪಿಎಲ್ನಲ್ಲಿ ಸಂಜು ಸ್ಯಾಮ್ಸನ್ ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿದ್ದಾರೆ.
ಕನ್ನಡ ಚಲನಚಿತ್ರ ಕಪ್ ಘೋಷಿಸಿದ ಸುದೀಪ್
ಕನ್ನಡ ಚಲನಚಿತ್ರ ಕಪ್ (ಕೆಸಿಸಿ) ಕ್ರಿಕೆಟ್ ಪಂದ್ಯಾವಳಿಯ ಮೂರನೇ ಆವೃತ್ತಿಯನ್ನು ಆಯೋಜಿಸುವಲ್ಲಿ ಕಿಚ್ಚ ಸುದೀಪ್ ನಿರತರಾಗಿದ್ದಾರೆ. ಈ ಬಾರಿಯ ಕನ್ನಡ ಚಲನ ಚಿತ್ರ ಕಪ್ನಲ್ಲಿ ಆರು ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗರು ಆಡಲಿದ್ದಾರೆ. ಈ ಮೊಲಕ ಈ ಬಾರಿಯ ಪಂದ್ಯಾವಳಿಗೆ ಹೆಚ್ಚಿನ ಮೆರುಗು ಬಂದಿದೆ.
ಫೆಬ್ರವರಿ 24 ಮತ್ತು 25 ರಂದು ಎರಡು ದಿನಗಳ ಕಾಲ ಪಂದ್ಯಾವಳಿ ನಡೆಯಲಿದೆ. 10 ಓವರ್ ಗಳ ಮಾದರಿಯಲ್ಲಿ ಪಂದ್ಯಗಳು ನಡೆಯಲಿದ್ದು, ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ತಾರೆಗಳ ಸಮಾಗಮಕ್ಕೆ ಸಾಕ್ಷಿಯಾಗಲಿದೆ.
ಗಂಗ ವಾರಿಯರ್ಸ್, ರಾಷ್ಟ್ರಕೂಟ ಪ್ಯಾಂಥರ್ಸ್, ವಿಜಯನಗರ ಪೇಟ್ರಿಯಾಟ್ಸ್, ಒಡೆಯರ್ ಚಾರ್ಜರ್ಸ್ ಮತ್ತು ಹೊಯ್ಸಳ ಈಗಲ್ಸ್ ಎನ್ನುವ ಆರು ತಂಡಗಳು ಭಾಗವಹಿಸಲಿದ್ದು, ಪ್ರತಿ ತಂಡದಲ್ಲಿ ಒಬ್ಬರು ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗರು ಆಡಲಿದ್ದಾರೆ. ಬ್ರಿಯಾನ್ ಲಾರಾ, ಕ್ರಿಸ್ ಗೇಲ್, ಸುರೇಶ್ ರೈನಾ, ಸುಬ್ರಮಣ್ಯಂ ಬದರಿನಾಥ್, ಹರ್ಷಲ್ ಗಿಬ್ಸ್ ಮತ್ತು ತಿಲಕರತ್ನೆ ದಿಲ್ಶಾನ್ ಆಡುತ್ತಿದ್ದಾರೆ.