ಬೆಂಗಳೂರು, ಜಲೈ 18: ಅದ್ಭುತ ಶತಕದೊಂದಿಗೆ ಭಾರತ 'ಎ' ತಂಡಕ್ಕೆ ವೆಸ್ಟ್ ಇಂಡೀಸ್ "ಎ' ತಂಡದ ವಿರುದ್ಧದ ಏಕದಿನ ಕ್ರಿಕೆಟ್ ಸರಣಿ ಗೆದ್ದುಕೊಟ್ಟ ನಾಯಕ ಮನೀಶ್ ಪಾಂಡೆ, ಸ್ಥಿರ ಪ್ರದರ್ಶನ ಮತ್ತು ಫಿಟ್ನೆಸ್ ಕಾಯ್ದುಕೊಳ್ಳುವ ಮೂಲಕ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಳ್ಳುವುದಾಗಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಆಂಟಿಗುವಾದ ನಾರ್ತ್ಸೌಂಡ್ನಲ್ಲಿ ಮಂಗಳವಾರ ನಡೆದ ಅನಧಿಕೃತ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಮಿಂಚಿದ ಮನೀಶ್ 87 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದೀಗ ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಭಾರತ ತಂಡದ ಆಯ್ಕೆ ಸಮಿತಿ ಶುಕ್ರವಾರ ತಂಡ ಪ್ರಕಟಿಸಲಿದ್ದು ಸ್ಥಾನ ಪಡೆಯುವ ವಿಶ್ವಾಸದಲ್ಲಿ ಕರ್ನಾಟಕದ ಬ್ಯಾಟ್ಸ್ಮನ್ ಎದುರು ನೋಡುತ್ತಿದ್ದಾರೆ.
2019-2020ರಲ್ಲಿ ಭಾರತ ತವರಿನಲ್ಲಿ ಆಡುವ ಕ್ರಿಕೆಟ್ ಸರಣಿಗಳ ವಿವರ ಇಲ್ಲಿದೆ
ಆಗಸ್ಟ್ 3ರಂದು ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಮೊದಲಿಗೆ 3 ಪಂದ್ಯಗಳ ಟಿ20 ಕ್ರಿಕೆಟ್ ಸರಣಿ ಆರಂಭವಾಗಲಿದ್ದು, ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ನಂತರ ಚೊಚ್ಚಲ ಆವೃತ್ತಿಟ ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ ಅಂಗವಾಗಿ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ.
ಇನ್ನು ಭಾರತ 'ಎ' ತಂಡದ ಪರ ಭರ್ಜರಿ ಪ್ರದರ್ಶನ ನೀಡಿರುವುದರ ಕುರಿತಾಗಿ ಮಾತನಾಡಿರುವ ಮನೀಶ್, "ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಆಡಲು ಕಣಕ್ಕಿಳಿದ ಮೊದಲ ಪಂದ್ಯದಲ್ಲೇ ಅರ್ಧಶತಕ ಬಾರಿಸಿದೆ. ಅಲ್ಲಿಂದ ಆರಂಭವಾಯಿತು. ಬಳಿಕ ಎಲ್ಲವೂ ಒಳ್ಳೆಯ ರೀತಿಯಲ್ಲಿ ಸಾಗಿದೆ. ಆ ಪಂದ್ಯವೇ ನನ್ನ ರನ್ಗಳಿಕೆಗೆ ಹೊಸ ಹುರುಪು ತಂದುಕೊಟ್ಟಿದ್ದು," ಎಂದು ಬಿಸಿಸಿಐಗೆ ನೀಡಿರುವ ಅಧಿಕೃತ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ವಿಂಡೀಸ್ ಪ್ರವಾಸಕ್ಕೆ ಟೀಮ್ ಇಂಡಿಯಾಗೆ ಪೃಥ್ವಿ ಅಲಭ್ಯ ಸಾಧ್ಯತೆ
ದೇಶಿ ಟೂರ್ನಿಗಳಲ್ಲಿ ರನ್ ಹೊಳೆಯನ್ನೇ ಹರಿಸಿರುವ ಮನೀಶ್ ಪಾಂಡೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂಥದ್ದೇ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. 2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದರಾದರೂ ಆಯ್ಕೆ ದಾರರನ್ನು ಸೆಳೆಯುವಂತಹ ಪ್ರದರ್ಶನ ಅವರಿಂದ ಹೊರಬರಲಿಲ್ಲ. ನಂತರ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಸ್ಥಾನ ಪಡೆದರಾದರೂ ಆಡುವ 11ರ ಬಳಗದಲ್ಲಿ ಅವಕಶ ಸಿಗದಂತಾಯಿತು. ನಂತರ ನ್ಯೂಜಿಲೆಂಡ್ ಪ್ರವಾಸದಿಂದ ಮನೀಶ್ ಅವರನ್ನು ಕೈ ಬಿಡಲಾಗಿತ್ತು.
ಮನೀಶ್, ಈ ಭಾರಿಯ ಐಪಿಎಲ್ನಲ್ಲಿ ಆಡಿದ 12 ಪಂದ್ಯಗಳಿಂದ 344 ರನ್ಗಳನ್ನು ಗಳಿಸಿದ್ದಾರೆ. ಇದಾದ ಬಳಿಕ ಫಿಟ್ನೆಸ್ ಕಡೆಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ.
ಧೋನಿಗೆ ಟೀಮ್ ಇಂಡಿಯಾದ ಕದ ಮುಚ್ಚುವ ಸಮಯ ಹತ್ತಿರ?!
"ಭಾರತ 'ಎ' ತಂಡದ ಪರ ಆಡಲು ಬಂದಿದ್ದೇನೆ. ಈ ತಂಡವನ್ನು ಕಳೆದೆರಡು ವರ್ಷಗಳಿಂದ ಮುನ್ನಡೆಸುತ್ತಿದ್ದೇನೆ. ನಮ್ಮ ತಂಡ ಸದಾ ಒಳ್ಳೆಯ ಪ್ರದರ್ಶನ ನೀಡಿದೆ. ನಮ್ಮದು ಚಾಂಪಿಯನ್ ತಂಡ. ಅಷ್ಟು ಗುಣಮಟ್ಟ ನಮ್ಮಲ್ಲಿದೆ. ರನ್ ಗಳಿಸಿದರಷ್ಟೇ ಮುಂದಿನ ಹಂತ ತಲುಪಲು ಸಾಧ್ಯ. ಐಪಿಎಲ್ನಲ್ಲಿ ಉತ್ತಮವಾಗಿ ಆಡಿದ್ದೇನೆ, ಇದೀಗ 'ಎ' ಸರಣಿಯಲ್ಲಿನ ಪ್ರದರ್ಶ ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ನನ್ನನ್ನು ಆಯ್ಕೆಯಾಗುವಂತೆ ಮಾಡುತ್ತದೆ ಎಂಬ ಆಶಯವಿದೆ," ಎಂದಿದ್ದಾರೆ.