ಯುಜುವೇಂದ್ರ ಚಾಹಲ್ ಪರಿಗಣಿಸದ್ದಕ್ಕೆ ಸೆಹ್ವಾಗ್ ಪ್ರತಿಕ್ರಿಯೆ
ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅನುಭವಿ ಆಟಗಾರ ಯುಜುವೇಂದ್ರ ಚಾಹಲ್ಗೆ ಟಿ20 ವಿಶ್ವಕಪ್ನ ತಂಡದಲ್ಲಿ ಸ್ಥಾನವನ್ನು ನೀಡದ ಬಗ್ಗೆ ಸೆಹ್ವಾಗ್ ತಮ್ಮ ಗೊಂದಲವನ್ನು ವ್ಯಕ್ತಪಡಿಸಿದ್ದಾರೆ. ಟಿ20 ವಿಶ್ವಕಪ್ನ ತಂಡದಲ್ಲಿ ಚಾಹಲ್ಗೆ ಯಾವ ಕಾರಣಕ್ಕೆ ಅವಕಾಶ ನೀಡಿಲ್ಲ ಎಂಬುದು ನನಗೆ ಅರ್ಥವೇ ಆಗುತ್ತಿಲ್ಲ ಎಂದಿದ್ದಾರೆ ವೀರೇಂದ್ರ ಸೆಹ್ವಾಗ್.
ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ ಚಾಹಲ್
ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಯುಜುವೇಂದ್ರ ಚಾಹಲ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.ಅದರಲ್ಲೂ ಮುಂಬೈ ಇಂಡಿಯನ್ಸ್ ವಿರುದ್ಧಧ ಪಂದ್ಯದಲ್ಲಿ ಚಾಹಲ್ ತಮ್ಮ ಅಮೋಘ ಬೌಲಿಂಗ್ ದಾಳಿಯ ಮೂಲಕ ಮುಂಬೈ ದಾಂಡಿಗರಿಗೆ ಸವಾಲಾದರು. ಈ ಪಂದ್ಯದಲ್ಲಿ ನಾಲ್ಕು ಓವರ್ಗಳನ್ನು ಎಸೆದ ಚಾಹಲ್ ಕೇವಲ 11 ರನ್ಗಹಳನ್ನು ನೀಡಿದ್ದು 3 ವಿಕೆಟ್ ಪಡೆದುಕೊಂಡಿದ್ದಾರೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 111 ರನ್ಗಳಿಗೆ ಆಲೌಟ್ ಆಗಿತ್ತು.
ಇನ್ನು ಮತ್ತೊಂದೆಡೆ ಚಾಹಲ್ ಬದಲಿಗೆ ಈ ಬಾರಿಯ ಟಿ20 ವಿಶ್ವಕಪ್ಗೆ ಆಯ್ಕೆಯಾಗಿರುವ ರಾಹುಲ್ ಚಹರ್ ಎರಡನೇ ಚರಣದ ಐಪಿಎಲ್ನಲ್ಲಿ ಈವರೆಗೆ ಕೇವಲ 1 ವಿಕೆಟ್ ಪಡೆಯುವಲ್ಲಿ ಮಾತ್ರವೇ ಯಶಸ್ವಿಯಾಗಿದ್ದಾರೆ. ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಚಹರ್ 33 ರನ್ಗಳನ್ನು ನೀಡಿ 1 ವಿಕೆಟ್ ಕಬಳಿಸಿದ್ದರು. ಹೀಗಾಗಿ ವೀರೇಂದ್ರ ಸೆಹ್ವಾಗ್ ಚಾಹಲ್ಗೆ ಸ್ಥಾನವನ್ನು ನಿರಾಕರಿಸಿದ್ದಕ್ಕೆ ಆಯ್ಕೆಗಾರರು ಕಾರಣವನ್ನು ನೀಡಬೇಕಾಗುತ್ತದೆ ಎಂದಿದ್ದಾರೆ.
ಚಾಹಲ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಸೆಹ್ವಾಗ್
ಮುಂಬೈ ವಿರುದ್ಧದ ಪಂದ್ಯದ ಬಳಿಕ ಕ್ರಿಕ್ಬಜ್ಗೆ ವಿರೇಂದ್ರ ಸೆಹ್ವಾಗ್ ಪ್ರತಿಕ್ರಿಯಿಸಿದ್ದಾರೆ. "ಚಾಹಲ್ ಇದಕ್ಕೂ ಮೊದಲು ಕೂಡ ಉತ್ತಮವಾಗಿ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಆತನನ್ನು ತಂಡದಿಂದ ಹೊರಗಿಟ್ಟ ಕಾರಣ ನನಗೆ ಅರ್ಥವಾಗುತ್ತಿಲ್ಲ. ಆಯ್ಕೆಗಾರರು ಈಬಗ್ಗೆ ಖಂಡಿತಾ ವಿವರಣೆಯನ್ನು ನೀಡಬೇಕು. ಇದು ಶ್ರೀಲಂಕಾದಲ್ಲಿ ರಾಹುಲ್ ಚಹರ್ ಉತ್ತಮವಾಗಿ ಬೌಲಿಂಗ್ ಮಾಡಿದಂತಲ್ಲ. ಚಾಹಲ್ ಬೌಲಿಂಗ್ ಮಾಡುವ ರೀತಿ, ಟಿ20 ಮಾದರಿಯಲ್ಲಿ ಯಾವುದೇ ತಂಡಕ್ಕಾದರೂ ಚಾಹಲ್ ಮಿಂಚಬಲ್ಲ ಸಾಮರ್ಥ್ಯ ಅವರನ್ನು ತಂಡದ ಪ್ರಮುಖ ಅಸ್ತ್ರವನ್ನಾಗಿ ಮಾಡಬಲ್ಲದು" ಎಂದಿದ್ದಾರೆ ಸೆಹ್ವಾಗ್.
ಹರ್ಷಲ್ಗೂ ಮುನ್ನ ಮುಂಬೈಗೆ ಆಘಾತ ನೀಡಿದ್ದು ಚಾಹಲ್- ಮ್ಯಾಕ್ಸ್ವೆಲ್ ಜೋಡಿ
ಇನ್ನು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡದ ವೇಗಿ ಹರ್ಷಲ್ ಪಟೇಲ್ ಹ್ಯಾಟ್ರಿಕ್ ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ. ಆದರೆ ಮುಂಬೈ ಇಂಡಿಯನ್ಸ್ಗೆ ಆರಂಭದಿಂದ ಆಘಾರ ನೀಡಿದ್ದು ಯುಜುವೇಂದ್ರ ಚಾಹಲ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಜೋಡಿ. ಆರ್ಸಿಬಿ ತಂಡದ ಈ ಇಬ್ಬರು ಸ್ಪಿನ್ನರ್ಗಳು ಮುಂಬೈ ವಿರುದ್ಧದ ಪಂದ್ಯದಲ್ಲಿ ಐದು ವಿಕೆಟ್ಗಳನ್ನು ಹಂಚಿಕೊಂಡಿದ್ದಾರೆ. ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳಿಗೆ ಈ ಜೋಡಿಯೇ ಫೆವಿಲಿಯನ್ ಹಾದಿ ತೋರಿಸಿತ್ತು. ಈ ಪಂದ್ಯದಲ್ಲಿ ಚಾಹಲ್ 3 ವಿಕೆಟ್ ಪಡೆದರೆ ಮ್ಯಾಕ್ಸ್ವೆಲ್ 2 ವಿಕೆಟ್ ಸಂಪಾದಿಸಿದರು.
ಅರ್ಧಶತಕಕ್ಕಾಗಿ ಚೆನ್ನೈ ವಿರುದ್ಧ ಬ್ಯಾಟ್ ಬೀಸಿದ್ರಾ ಕೊಹ್ಲಿ?; ಮಾಜಿ ಕ್ರಿಕೆಟಿಗನ ಅಸಮಾಧಾನ
ಇನ್ನು ಯುಎಇ ಚರಣದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಚಾಹಲ್ ಐದು ವಿಕೆಟ್ಗಳನ್ನು ಸಂಪಾದಿಸಿದ್ದಾರೆ. ಈ ಬಾರಿಯ ಆವೃತ್ತಿಯಲ್ಲಿ ಚಾಹಲ್ ಈಗ 9 ವಿಕೆಟ್ ಕಬಳಿಸಿದ್ದಾರೆ. ಮೊದಲ ಚರಣದ ಟೂರ್ನಿಯಲ್ಲಿ ಮಿಂಚಿವಲ್ಲಿ ವಿಫಲವಾಗಿದ್ದ ಚಾಹಲ್ ಈಗ ತಮ್ಮ ಎಂದಿನ ಲಯಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ.
ಟಿ20 ವಿಶ್ವಕಪ್ಗೆ ಆಯ್ಕೆಯಾಗಿರುವ ಭಾರತ ತಂಡ
ಭಾರತ ವಿಶ್ವಕಪ್ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ
ಮೀಸಲು ಆಟಗಾರರು: ಶ್ರೇಯಸ್ ಅಯ್ಯರ್, ದೀಪಕ್ ಚಹಾರ್, ಶಾರ್ದೂಲ್ ಠಾಕೂರ್