ಧೋನಿ ಆಯ್ಕೆಯಿಂದ ಇತರ ಆಟಗಾರರನ್ನು ತುಳಿದಂತಾಗುತ್ತದೆ ಎಂದವರಿಗೆ ಅರುಣ್ ಧುಮಾಲ್ ಕೊಟ್ಟ ಉತ್ತರವಿದು
'ಎಂಎಸ್ ಧೋನಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲಿರುವ ಭಾರತ ತಂಡದಲ್ಲಿ ಮಾರ್ಗದರ್ಶಕನಾಗಿರುವುದು ತುಂಬ ಉತ್ತಮವಾದ ವಿಷಯ. ಸದ್ಯಕ್ಕಿರುವ ಟೀಮ್ ಇಂಡಿಯಾ ಆಟಗಾರರು ಎಂಎಸ್ ಧೋನಿ ಕುರಿತಾಗಿ ದೊಡ್ಡಮಟ್ಟದ ಗೌರವವನ್ನು ಹೊಂದಿದ್ದಾರೆ. ಹೀಗಾಗಿ ಧೋನಿ ಮಾರ್ಗದರ್ಶಕನಾಗಿ ತಂಡದಲ್ಲಿರುವುದು ಬೇರೆ ಯಾವುದೇ ಆಟಗಾರರನ್ನು ಸಹ ತುಳಿಯುವುದಕ್ಕಾಗಲಿ ಅಥವಾ ಕಡೆಗಣಿಸುವುದಕ್ಕಾಗಲಿ ಅಲ್ಲ' ಎಂದು ಅರುಣ್ ಧುಮಾಲ್ ಸ್ಪಷ್ಟನೆ ನೀಡಿದ್ದಾರೆ.
ಆತನ ನಾಯಕತ್ವದಲ್ಲಿಯೇ ಭಾರತ ದೊಡ್ಡ ಮಟ್ಟದ ಯಶಸ್ಸು ಗಳಿಸಿದ್ದು
'ಎಂಎಸ್ ಧೋನಿ ಟೀಮ್ ಇಂಡಿಯಾ ಕ್ರಿಕೆಟ್ ಕಂಡ ಅತ್ಯುತ್ತಮ ನಾಯಕ. ಅವರ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡ ಉದ್ಘಾಟನಾ ಆವೃತ್ತಿಯ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿ, 2010 ಮತ್ತು 2016ರ ಏಷ್ಯಾಕಪ್ ಟ್ರೋಫಿಗಳು, ಪ್ರತಿಷ್ಠಿತ 2011ರ ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿಗಳನ್ನು ಗೆದ್ದುಕೊಂಡಿದೆ. ನಾಯಕನಾಗಿ ಧೋನಿಯವರ ಈ ದಾಖಲೆಗಳು ಅತ್ಯದ್ಭುತವಾಗಿದ್ದು ಇಂತಹ ಕ್ರಿಕೆಟಿಗನನ್ನು ಟೀಮ್ ಇಂಡಿಯಾ ಮೆಂಟರ್ ಆಗಿ ತಂಡದಲ್ಲಿ ಹೊಂದುವುದಕ್ಕೆ ಹೆಮ್ಮೆ ಎನಿಸುತ್ತದೆ' ಎಂದು ಅರುಣ್ ಧುಮಾಲ್ ಶ್ಲಾಘಿಸಿದ್ದಾರೆ.
ಕೊಹ್ಲಿ ನಾಯಕತ್ವ ಬಿಡುತ್ತಿರುವುದರ ಕುರಿತು ಕೂಡ ಅರುಣ್ ಧುಮಾಲ್ ಮಾತು
ಇನ್ನೂ ಮುಂದುವರಿದು ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಬಳಿಕ ಭಾರತ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿರುವ ವಿರಾಟ್ ಕೊಹ್ಲಿ ನಿರ್ಧಾರದ ಕುರಿತು ಕೂಡ ಮಾತನಾಡಿರುವ ಅರುಣ್ ಧುಮಾಲ್ ಬಿಸಿಸಿಐ ಕಡೆಯಿಂದ ವಿರಾಟ್ ಕೊಹ್ಲಿ ಮೇಲೆ ನಾಯಕತ್ವವನ್ನು ತ್ಯಜಿಸುವ ವಿಚಾರವಾಗಿ ಯಾವುದೇ ಒತ್ತಡವಿರಲಿಲ್ಲ ಎಂದಿದ್ದಾರೆ. 'ವಿರಾಟ್ ಕೊಹ್ಲಿ ಉತ್ತಮವಾಗಿಯೇ ತಂಡವನ್ನು ಮುನ್ನಡೆಸುತ್ತಿದ್ದರು ಆದರೆ ತಮ್ಮ ಸ್ವಇಚ್ಛೆಯಿಂದಲೇ ಅವರು ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರ ಕೈಗೊಂಡಿದ್ದಾರೆಯೇ ಹೊರತು ಬಿಸಿಸಿಐ ಯಾವುದೇ ಒತ್ತಡವನ್ನು ಸಹ ಹೇರಿರಲಿಲ್ಲ' ಎಂದು ಅರುಣ್ ಧುಮಾಲ್ ಹೇಳಿಕೆ ನೀಡಿದ್ದಾರೆ.