ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಸೋಲಿಗೆ ಜಸ್ಪ್ರೀತ್ ಬೂಮ್ರಾ ಅವರ ಕಳಪೆ ಫಾರ್ಮ್ ಕೂಡ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಟೀಮ್ ಇಂಡಿಯಾ ಪರವಾಗಿ ಸಾಕಷ್ಟು ಅದ್ಭುತ ಪ್ರದರ್ಶನಗಳನ್ನು ನೀಡಿರುವ ಬೂಮ್ರಾ ಇತ್ತೀಚಿನ ದಿನಗಳಲ್ಲಿ ತಮ್ಮ ಮೊನಚನ್ನು ಕಳೆದುಕೊಂಡವರಂತೆ ಭಾಸವಾಗುತ್ತಿದ್ದಾರೆ. ಈ ವಿಚಾರವಾಗಿ ಭಾರತೀಯ ಕ್ರಿಕೆಟ್ನ ಮಾಜಿ ವಿಕೆಟ್ ಕೀಪರ್ ಹಾಗೂ ಮಾಜಿ ಆಯ್ಕೆಗಾರ ಸಬಾ ಕರೀಮ್ ಪ್ರತಿಕ್ರಿಯಿಸಿದ್ದಾರೆ.
ಜಸ್ಪ್ರೀತ್ ಬೂಮ್ರಾ ಅವರನ್ನು ತಂಡಕ್ಕೆ ಆಯ್ಕೆ ಮಾಡುವಾಗ ಅವರ ಸದ್ಯದ ಫಾರ್ಮ್ಅನ್ನು ಗಮನಿಸುವುದು ಬಿಟ್ಟು ಅವರ ಖ್ಯಾತಿಯನ್ನು ನೋಡಿ ತಂಡದಲ್ಲಿ ಅವರಿಗೆ ಮಣೆ ಹಾಕಲಾಯಿತು ಎಂದು ಸಬಾ ಕರೀಮ್ ಹೇಳಿಕೆ ನೀಡಿದ್ದಾರೆ. ಈ ಮೂಲಕ ಬೂಮ್ರಾ ಆಯ್ಕೆಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
'ಗ್ರೇಟ್ವಾಲ್-2' ಪೂಜಾರಗೆ ಮುಂದೆ ಭಾರತ ತಂಡದಲ್ಲಿ ಜಾಗ ಇಲ್ವಾ?!
ಸೌಥಾಂಪ್ಟನ್ನ ಏಜಸ್ ಬೌಲ್ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭಾರತೀಯ ಕ್ರಿಕೆಟ್ ತಂಡವನ್ನು 8 ವಿಕೆಟ್ಗಳಿಂದ ಮಣಿಸಿತ್ತು. ಆದರೆ ಈ ಪಂದ್ಯದ ಎರಡು ಇನ್ನಿಂಗ್ಸ್ಗಳಲ್ಲಿಯೂ ಇಂಗ್ಲೆಂಡ್ನ ಈ ವೇಗದ ಬೌಲಿಂಗ್ ಸ್ನೇಹಿ ಪಿಚ್ನಲ್ಲಿ ಭಾರತದ ಪ್ರಮುಖ ವೇಗಿ ಜಸ್ಪ್ರೀತ್ ಬೂಮ್ರಾ ಒಂದೇ ಒಂದು ವಿಕೆಟ್ ಪಡೆಯುವಲ್ಲಿ ವಿಫಲರಾದರು.
"ನನ್ನ ಪ್ರಕಾರ ಆಯ್ಕೆಗಾರರು ಸದ್ಯದ ಫಾರ್ಮ್ಅನ್ನು ಪರಿಗಣನೆಗೆ ತೆಗೆದುಕೊಳ್ಳಲಿಲ್ಲ ಎನಿಸುತ್ತದೆ. ಬೂಮ್ರಾ ಆಯ್ಕೆಗೆ ಅವರ ಖ್ಯಾತಿಯನ್ನು ಪರಿಗಣಿಸಲಾಗಿದೆ. ಆಸ್ಟ್ರೇಲಿಯಾದಲ್ಲಿ ಗಾಯಗಿಂಡ ನಂತರ ಅವರು ಯಾವುದೇ ಟೆಸ್ಟ್ ಕ್ರಿಕೆಟ್ನಲ್ಲಿ ಭಾಗಿಯಾಗಿಲ್ಲ" ಎಂದು ಸಬಾ ಕರೀಮ್ ಪ್ರತಿಕ್ರಿಯಿಸಿದ್ದಾರೆ. ಆತ ವೈಟ್ ಬಾಲ್ ಕ್ರಿಕೆಟ್ನಲ್ಲಿ ಮಾತ್ರವೇ ಭಾಗಿಯಾಗಿದ್ದಾರೆ. ಅದು ಕೂಡ ಟಿ20 ಪಂದ್ಯಗಳು. ಇಂಗ್ಲೆಂಡ್ ವಿರುದ್ಧದ ತವರಿನ ಸರಣಿಯಲ್ಲಿ ಅವರು ಭಾಗಿಯಾಗಿರಲಿಲ್ಲ ಎಂದು ಸಬಾ ಕರೀಮ್ ಹೇಳಿದ್ದಾರೆ. ಆದರೆ ಬೂಮ್ರಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು ಎಂಬುದು ಗಮನಿಸಬೇಕು.
ಭಾರತ ಆಗಸ್ಟ್ ತಿಂಗಳಿನಲ್ಲಿ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ಸೋಲು ಕಂಡಿರುವ ವಿರಾಟ್ ಬಳಗ ಈ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.