ಸ್ವಿಟ್ಜರ್ಲೆಂಡ್, ಫೆಬ್ರವರಿ 10 : ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಮ್ಯಾಚ್ ಎಂದರೆ ಎರಡು ರಾಷ್ಟ್ರಗಳ ನಡುವಿನ ಯುದ್ಧ, ಪಾಕಿಸ್ತಾನಿಗಳು ಭಾರತದ ಬದ್ಧ ವೈರಿಗಳು ಎಂದೇ ಪರಿಗಣಿಸಲಾಗುತ್ತದೆ. ಮೈದಾನದಲ್ಲಿ ಯುದ್ಧದ ವಾತಾವರಣವಿದ್ದರೂ, ಹೊರಗೆ ಅಂತಹ ಸನ್ನಿವೇಶಗಳಿರುವುದಿಲ್ಲ.
ಪಾಕಿಸ್ತಾನದ ಮಾಜಿ ಕ್ರಿಕೆಟ್ ಕ್ಯಾಪ್ಟನ್, ಭಾರೀ ಹೊಡೆತಗಳಿಗಾಗಿ ಹೆಸರಾಗಿದ್ದ 'ಬೂಮ್ ಬೂಮ್' ಶಾಹೀದ್ ಅಫ್ರೀದಿ ಅವರು, ಭಾರತದ ಪರ ತಮ್ಮ ಪ್ರೀತಿಯನ್ನು ಮೆರೆದಿರುವ ಅಪರೂಪದ ಘಟನೆ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದೆ.
ಸ್ವಿಟ್ಜರ್ಲೆಂಡ್ ನಲ್ಲಿ ನಡೆಯುತ್ತಿರುವ ಸೇಂಟ್ ಮಾರಿಟ್ಜ್ ಐಸ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಜಾಕ್ ಕಾಲಿಸ್, ಶೋಯಾಬ್ ಅಖ್ತರ್, ಮಹೇಲ ಜಯವರ್ಧನೆ ಮುಂದಾದವರು ಭಾಗವಹಿಸುತ್ತಿದ್ದಾರೆ. ಪ್ಯಾಲೇಸ್ ಡೈಮಂಡ್ಸ್ ಗೆ ಸೆಹ್ವಾಗ್ ಕ್ಯಾಪ್ಟನ್ ಆಗಿದ್ದರೆ, ರಾಯಲ್ಸ್ ಗೆ ಅಫ್ರೀದಿ ಕ್ಯಾಪ್ಟನ್.
Thank u Switzerland 👍 pic.twitter.com/qANtR9LAwr
— Shahid Afridi (@SAfridiOfficial) February 9, 2018
ನೋಡಲು ಸುರಸುಂದರನಾಗಿರುವ ಅಪ್ರೀದಿ ಅವರ ಹೊಡೆತಗಳನ್ನು ಮಾತ್ರವಲ್ಲ ಅವರನ್ನೂ ಆರಾಧಿಸುವವರಿದ್ದಾರೆ, ಅವರ ವ್ಯಕ್ತಿತ್ವವನ್ನೂ ಮೆಚ್ಚಿಕೊಂಡವರಿದ್ದಾರೆ. ಅಲ್ಲಿ ನೆರೆದಿದ್ದ ಭಾರತದ ಅಭಿಮಾನಿಯೊಬ್ಬರು ಅಪ್ರೀದಿ ಜೊತೆ ಸೆಲ್ಫಿ ತೆಗೆದುಕೊಳ್ಳು ಇಚ್ಛೆ ವ್ಯಕ್ತಪಡಿಸಿದ್ದಾರೆ. ಅಫ್ರೀದಿ ಕೂಡ ಓಕೆ ಅಂದಿದ್ದಾರೆ.
ಮಹಿಳಾ ಅಭಿಮಾನಿಯ ಕೈಯಲ್ಲಿ ಭಾರತದ ಧ್ವಜವಿತ್ತು. ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಅವರು ಭಾರತದ ಧ್ವಜವನ್ನು ಸರಿಯಾಗಿ ಹಿಡಿದುಕೊಂಡಿರಲಿಲ್ಲ. ಇದನ್ನು ಗಮನಿಸಿದ ಶಾಹೀದ್ ಅಫ್ರೀದಿ ಅವರು ಭಾರತದ ಬಾವುಟವನ್ನು ಸರಿಯಾಗಿ ಹಿಡಿಯಲು ಹೇಳಿ ನಂತರ ಸೆಲ್ಫಿಗೆ ಸಖತ್ತಾಗಿ ಪೋಸ್ ನೀಡಿದ್ದಾರೆ.
ಶಾಹೀದ್ ಅಫ್ರೀದಿಯವರ ಈ ವರ್ತನೆ ಭಾರತದ ಅಭಿಮಾನಿಗಳಿಂದ ಮಾತ್ರವಲ್ಲ ಪಾಕಿಸ್ತಾನದ ಅಭಿಮಾನಿಗಳಿಂದಲೂ ಹೊಗಳಿಕೆಗೆ ಪಾತ್ರವಾಗಿದೆ. ನೀವೊಬ್ಬ ಅತ್ಯುತ್ತಮ ಆಟಗಾರ ಮಾತ್ರವಲ್ಲ, ಗ್ರೇಟ್ ಮಾನವತಾವಾದಿ ಎಂದು ಹೊಗಳಿದ್ದಾರೆ. ಭಾರತದಲ್ಲಿ ಅತೀಹೆಚ್ಚು ಪ್ರೀತಿಸಲ್ಪಡುವ ಪಾಕಿಸ್ತಾನಿ ಆಟಗಾರನೆಂದರೆ ಶಾಹೀದ್ ಅಫ್ರೀದಿ ಎಂದೆಲ್ಲ ಪ್ರಶಂಸೆಯ ಸುರಿಮಳೆಗರೆದಿದ್ದಾರೆ.