ಬೆಂಗಳೂರು, ಸೆಪ್ಟೆಂಬರ್ 12: ಬಾಂಗ್ಲಾದೇಶದ ಅನುಭವಿ ಆಲ್ರೌಂಡರ್ ಶಕೀಬ್ ಅಲ್ ಹಸನ್ ತಮ್ಮದೇ ದೇಶದ ಮೈದಾನದ ಕ್ರಿಕೆಟ್ ಪಿಚ್ ಬಗ್ಗೆ ಕಟುವಾಗಿ ಟೀಕಿಸಿದ್ದಾರೆ. ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯನ್ನು ಆಯೋಜನೆ ಮಾಡಿದ್ದ ಢಾಕಾದ ಮೈದಾನದ ಪಿಚ್ ಬಗ್ಗೆ ಶಕೀಬ್ ಕಿಡಿ ಕಾರಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಈ ಪಿಚ್ಗಳು ಅತ್ಯಂತ ಕಳಪೆಯಾಗಿದೆ ಎಂದು ಶಕೀಬ್ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಈ ಸಂದರ್ಭದಲ್ಲಿ ಶಕೀಬ್ ಇಂತಾ ಪಿಚ್ಗಳಿಂದಾಗಿ ಯುವ ಬ್ಯಾಟ್ಸ್ಮನ್ಗಳ ಭವಿಷ್ಯವೇ ಅಂತ್ಯವಾಗಬಹುದು ಎಂದು ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಢಾಕಾ ಕ್ರೀಡಾಂಗಣದಲ್ಲಿ ನಡೆದ ಟಿ20 ಸರಣಿಯಲ್ಲಿ ಮೊದಲಿಗೆ ಬಾಂಗ್ಲಾದೇಶ 4-1 ಅಂತರದಿಂದ ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆಲುವು ಸಾಧಿಸಿ ದಾಖಲೆ ಬರೆದಿತ್ತು. ಅದಾದ ಬಳಿಕ ನ್ಯೂಜಿಲೆಂಡ್ ತಮಡದ ವಿರುದ್ಧ ಟಿ20 ಸರಣಿ ಕೂಡ ಇದೇ ಮೈದಾನದಲ್ಲಿ ನಡೆದಿದ್ದು ಈ ಸರಣಿಯನ್ನು ಬಾಂಗ್ಲಾದೇಶ 3-2 ಅಂತರದಿಂದ ಗೆದ್ದು ಬೀಗಿತ್ತು. ಈ ಸರಣಿಯಲ್ಲಿ 120 ರನ್ಗಳ ಗುರಿಯನ್ನು ಕೂಡ ಬೆನ್ನಟ್ಟುವುದು ಅಸಾಧ್ಯ ಎಂಬಂತಾ ಸ್ಥಿತಿಯಿತ್ತು. ಹೀಗಾಗಿ ಸಾಕಷ್ಟು ಟೀಕೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಕ್ತವಾಗಿತ್ತು. ಇದೀಗ ಈ ಬಗ್ಗೆ ಸ್ವತಃ ಬಾಂಗ್ಲಾದೇಶದ ಪ್ರಮುಖ ಆಟಗಾರನೇ ಪ್ರತಿಕ್ರಿಯೆ ನೀಡಿದ್ದಾರೆ. ಇಂತಾ ಪಿಚ್ಗಳಲ್ಲಿ ಆಟಗಾರರ ವೈಫಲ್ಯವನ್ನು ಅಳೆಯುವುದು ಸೂಕ್ತವಲ್ಲ ಎಂದಿದ್ದಾರೆ ಶಕೀಬ್.
18 ವರ್ಷಗಳ ಬಳಿಕ ಪ್ರವಾಸ ಸರಣಿಗಾಗಿ ಪಾಕ್ಗೆ ಬಂದಿಳಿದ ನ್ಯೂಜಿಲೆಂಡ್!
ಈ ಪಿಚ್ನಲ್ಲಿ ಆಡಿದ ಬಾಂಗ್ಲಾದೇಶ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಆಟಗಾರರು ರನ್ಗಳಿಸಲು ಅಕ್ಷರಶಃ ಪರದಾಡಿದ್ದಾರೆ. 200ಕ್ಕಿಂತ ಹೆಚ್ಚಿನ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ನಡೆಸುವುದು ಅಸಾಧ್ಯವೆಂಬಂತಾ ಸ್ಥಿತಿಯಿತ್ತು. "ಕಳೆದ 9-10 ಪಂದ್ಯಗಳನ್ನು ಆಡಿದ ಮೈದಾನದ ಪಿಚ್ ನಿಜಕ್ಕೂ ಸೂಕ್ತವಾದುದಲ್ಲ. ಪಿಚ್ ಅಷ್ಟು ಕಳಪೆಯಾಗಿತ್ತು. ಇಲ್ಲಿ ಯಾರೂ ಕೂಡ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಇಂತಾ ಪಿಚ್ನಲ್ಲಿ ಬ್ಯಾಟ್ಸ್ಮನ್ಗಳ ಪ್ರದರ್ಶನವನನ್ಉ ಪರಿಗಣಿಸಲು ಸಾಧ್ಯವಿಲ್ಲ. ಇಂತಾ ಪಿಚ್ನಲ್ಲಿ ಯಾವುದೇ ಬ್ಯಾಟ್ಸ್ಮನ್ ಕೂಡ 10-15 ಪಂದ್ಯಗಳನ್ನು ಆಡಿದರೆ ಅಲ್ಲಿಗೆ ಆತನ ವೃತ್ತಿ ಜೀವನ ಅಂತ್ಯವಾಯಿತೆಂದೇ ಹೇಳಬಹುದು. ಹಾಗಾಗಿ ಇವುಗಳನ್ನು ಪರಿಗಣಿಸದಿರುವುದು ಸೂಕ್ತ" ಎಂದಿದ್ದಾರೆ ಶಕೀಬ್ ಅಲ್ ಹಸನ್.
ಬಾಂಗ್ಲಾದೆಶದ ಅನುಭವಿ ಆಟಗಾರನಾಗಿರುವ ಶಕೀಬ್ ಅಲ್ ಹಸನ್ ಚುಟುಕು ಕ್ರಿಕೆಟ್ ಲೀಗ್ನಲ್ಲಿ ಹೆಚ್ಚು ಬೇಡಿಕೆಯನ್ನು ಹೊಂದಿರುವ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಮುಂಬರುವ ಟಿ20 ವಿಶ್ವಕಪ್ನಲ್ಲಿ ಬಾಂಗ್ಲಾದೇಶ ತಂಡ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಢಾಕಾದ ಕಠಿಣ ಪಿಚ್ನಲ್ಲಿ ಆಡಿದ ನಂತರ ತನ್ನ ತಂಡದ ಆಟಗಾರರಿಗೆ ಮತ್ತಷ್ಟು ಹೆಚ್ಚಿನ ಆತ್ಮವಿಶ್ವಾಸ ಬಂದಿದ್ದು ಇದು ಒಮಾನ್ ಹಾಗೂ ಯುಎಇನಲ್ಲಿ ನಡೆಯಲಿರುವ ವಿಶ್ವಕಪ್ನಲ್ಲಿ ತಂಡಕ್ಕೆ ಪ್ರಯೋಜನವಾಗಲಿದೆ ಎಂದಿದ್ದಾರೆ ಶಕೀಬ್ ಅಲ್ ಹಸನ್.
"ನನ್ನ ಪ್ರಕಾರ ಕಳೆದ ಮೂರು ಸರಣಿಗಳನ್ನು ಗೆದ್ದಿಕೊಂಡ ಬಳಿಕ ನಾವೆಲ್ಲರೂ ಉತ್ತಮವಾಗಿ ಸಿದ್ಧವಾಗಿದ್ದೇವೆ. ಪಿಚ್ ವಿಚಾರವಾಗಿ ಹಾಗೂ ಕಡಿಮೆ ರನ್ಗಳ ವಿಚಾರವಾಗಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. ಆದರೆ ಗೆಲುವಿಗಿಂತ ಉತ್ತಮವಾದದ್ದು ಯಾವುದೂ ಇಲ್ಲ. ಇಂತಾ ಗೆಲುವುಗಳು ನಮ್ಮ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚುಗೊಳಿಸುತ್ತದೆ. ನೀವು ಉತ್ತಮವಾಗಿ ಆಡಿದ ಬಳಿಕವೂ ಸೋಲು ಕಂಡರೆ ಆತ್ಮ ವಿಶ್ವಾಸವನ್ನು ಹೊಂದಿರುವುದಿಲ್ಲ. ನಾವು ವಿಶ್ವಕಪ್ಗೆ ಆತ್ಮವಿಶ್ವಾಸದೊಂದಿಗೇ ಹೋಗಲು ಬಯಸುತ್ತೇವೆ" ಎಂದಿದ್ದಾರೆ ಶಕೀಬ್ ಅಲ್ ಹಸನ್.
ಟಿ20 ವಿಶ್ವಕಪ್ಗೆ ಪ್ರಕಟವಾಗಿರುವ ಕೊಹ್ಲಿ ಪಡೆ ವಿರುದ್ಧ ಇದೆಂಥಾ ಆರೋಪ!
ಇನ್ನು ಇದೇ ಸಂದರ್ಭದಲ್ಲಿ ಶಕೀಬ್ ಅಲ್ ಹಸನ್ ಟಿ20 ವಿಶ್ವಕಪ್ಗೂ ಮುನ್ನ ಐಪಿಎಲ್ನಲ್ಲಿ ಭಾಗವಹಿಸುವುದು ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ಹೆಚ್ಚಿನ ಲಾಭವನ್ನು ನೀಡಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮುಸ್ತಫಿಜುರ್ ರಹ್ಮಾನ್ ಹಾಗೂ ಶಕೀಬ್ ಅಲ್ ಹಸನ್ ಯುಎಇ ನೆಲದಲ್ಲಿ ಐಪಿಎಲ್ನಲ್ಲಿ ಆಡಿದ ಅನುಭವವನ್ನು ತಂಡದ ಸದಸ್ಯರೊಂದಿಗೆ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.
ಟಿ20 ವಿಶ್ವಕಪ್ಗೆ ಆಯ್ಕೆಯಾದ ಬಾಂಗ್ಲಾದೇಶ ತಂಡ: ಮಹ್ಮದ್ ಉಲ್ಲಾ (ನಾಯಕ), ನೈಮ್ ಶೇಖ್, ಸೌಮ್ಯ ಸರ್ಕಾರ್, ಲಿಟ್ಟನ್ ಕುಮರ್ ದಾಸ್, ಶಕೀಬ್ ಅಲ್ ಹಸನ್, ಮುಷ್ಫಿಕರ್ ರಹೀಮ್, ಅಫೀಫ್ ಹೊಸೈನ್, ನೂರುಲ್ ಹಸನ್ ಸೋಹನ್, ಶಾಕ್ ಮಹೇದಿ ಹಸನ್, ನಸುಮ್ ಅಹ್ಮದ್, ಮುಸ್ತಫಿಜುರ್ ರೆಹಮಾನ್, ಶೊರಿಫುಲ್ ಇಸ್ಲಾಂ, ತಸ್ಕಿನ್ ಅಹ್ಮದ್, ಶೈಫ್ ಉದ್ದೀನ್, ಶಮೀಮ್ ಹೊಸೇನ್
ಮೀಸಲು ಆಟಗಾರರು: ರುಬೆಲ್ ಹುಸೇನ್, ಅಮೀನುಲ್ ಇಸ್ಲಾಂ ಬಿಪ್ಲಬ್