ಆತ ಬೌಲಿಂಗ್ ಮಾಡುವ ಅಗತ್ಯತೆ ಇರಲಿಲ್ಲ
ವೆಂಕಟೇಶ್ ಅಯ್ಯರ್ ಅವರಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ ಬೌಲಿಂಗ್ ಅವಕಾಶ ಸಿಗದೇ ಇರುವುದರ ಕುರಿತು ಮಾತನಾಡಿರುವ ಶಿಖರ್ ಧವನ್ "ತಂಡದ ಸ್ಪಿನ್ ಬೌಲರ್ಗಳು ಉತ್ತಮವಾಗಿ ಆಟವನ್ನು ಆಡುತ್ತಿದ್ದ ಕಾರಣ ಆತ ಬೌಲಿಂಗ್ ಮಾಡುವ ಅವಶ್ಯಕತೆ ನಮಗೆ ಇರಲಿಲ್ಲ. ಪಂದ್ಯದ ಮಧ್ಯದಲ್ಲಿ ವಿಕೆಟ್ ಬೀಳದೇ ಇದ್ದಾಗ ತಂಡದ ಪ್ರಮುಖ ವೇಗಿಗಳನ್ನು ಬಳಸಲು ಚಿಂತಿಸಿದ್ದೆವು ಆದರೆ ಅದನ್ನು ಮಾಡುವ ಹಾಗಿರಲಿಲ್ಲ. ಏಕೆಂದರೆ ತಂಡದ ಪ್ರಮುಖ ವೇಗಿಗಳನ್ನು ಪಂದ್ಯದ ಅಂತಿಮ ಓವರ್ಗಳಲ್ಲಿ ಬಳಸಬೇಕಾದ ಅನಿವಾರ್ಯತೆ ಇತ್ತು" ಎಂದು ಹೇಳಿಕೆಯನ್ನು ನೀಡಿದ್ದಾರೆ. ಈ ಮೂಲಕ ಪಂದ್ಯದ ಮಧ್ಯದ ಓವರ್ಗಳಲ್ಲಿ ಸ್ಪಿನ್ ಬೌಲರ್ಗಳನ್ನು ಬಳಸಲಾಯಿತು ಹಾಗೂ ಪಂದ್ಯದ ಕೊನೆಯಲ್ಲಿ ಪ್ರಮುಖ ವೇಗಿಗಳನ್ನು ಬಳಸಲಾಯಿತು ಹೀಗಾಗಿ ವೆಂಕಟೇಶ್ ಅಯ್ಯರ್ ಅವರಿಗೆ ಬೌಲಿಂಗ್ ನೀಡಬೇಕೆಂಬ ಅನಿವಾರ್ಯತೆ ಇರಲಿಲ್ಲ ಎಂಬುದನ್ನು ಶಿಖರ್ ಧವನ್ ತಿಳಿಸಿದ್ದಾರೆ.
ಧವನ್ ನೀಡಿದ ಈ ಹೇಳಿಕೆ ಎಷ್ಟು ಸರಿ?
ವೆಂಕಟೇಶ್ ಅಯ್ಯರ್ ಅವರಿಗೆ ಬೌಲಿಂಗ್ ಮಾಡುವ ಅವಕಾಶ ನೀಡಬೇಕೆಂಬ ಅನಿವಾರ್ಯತೆ ತಂಡಕ್ಕಿರಲಿಲ್ಲ ಎಂದು ಶಿಖರ್ ಧವನ್ ತಿಳಿಸಿದ್ದಾರೆ. ಆದರೆ ಶಿಖರ್ ಧವನ್ ಇದಕ್ಕೆ ನೀಡಿರುವ ಕಾರಣಗಳು ಪ್ರಶ್ನೆ ಹಾಕಿದವರಿಗೆ ಸಮಾಧಾನ ತಂದಂತಿಲ್ಲ. ಏಕೆಂದರೆ ಶಿಖರ್ ಧವನ್ ಹೇಳಿಕೆ ಪ್ರಕಾರ ಪಂದ್ಯದ ಮಧ್ಯದ ವೇಳೆ ಟೀಮ್ ಇಂಡಿಯಾದ ಸ್ಪಿನ್ ಬೌಲರ್ಗಳಾಗಲಿ ಅಥವಾ ಪಂದ್ಯದ ಕೊನೆಯ ವೇಳೆಯಲ್ಲಿ ತಂಡದ ಪ್ರಮುಖ ವೇಗಿಗಳಾಗಲಿ ವೇಗವಾಗಿ ವಿಕೆಟ್ ಪಡೆಯುವ ಮೂಲಕ ದಕ್ಷಿಣ ಆಫ್ರಿಕಾ ತಂಡದ ಮೇಲೆ ಒತ್ತಡವನ್ನು ಹೇರುವಲ್ಲಿ ಯಶಸ್ವಿಯಾಗಲಿಲ್ಲ. ಹೀಗಾಗಿ ಶಿಖರ್ ಧವನ್ ವೆಂಕಟೇಶ್ ಅಯ್ಯರ್ ಅವರಿಗೆ ಬೌಲಿಂಗ್ ನೀಡದೇ ಇರಲು ತಿಳಿಸಿರುವ ಕಾರಣಗಳು ಪೂರಕವಾಗಿಲ್ಲ ಎಂಬ ಅಭಿಪ್ರಾಯಗಳೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿವೆ.
ವಿಕೆಟ್ ಪಡೆದದ್ದು ಬುಮ್ರಾ, ಅಶ್ವಿನ್ ಮಾತ್ರ
ಇನ್ನು ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ 4 ವಿಕೆಟ್ಗಳನ್ನು ಕಳೆದುಕೊಂಡಿತು. ಈ ಪೈಕಿ ಏಡನ್ ಮರ್ಕ್ರಮ್ ಅವರನ್ನು ವೆಂಕಟೇಶ್ ಅಯ್ಯರ್ ರನ್ ಔಟ್ ಮಾಡಿದರೆ, ಇನ್ನುಳಿದ 3 ವಿಕೆಟ್ಗಳ ಪೈಕಿ ಜಸ್ಪ್ರೀತ್ ಬುಮ್ರಾ 2 ವಿಕೆಟ್ ಪಡೆದರೆ, ರವಿಚಂದ್ರನ್ ಅಶ್ವಿನ್ 1 ವಿಕೆಟ್ ಪಡೆದರು. ಹೀಗೆ ಈ ಇಬ್ಬರು ಬೌಲರ್ಗಳನ್ನು ಹೊರತುಪಡಿಸಿ ಟೀಮ್ ಇಂಡಿಯಾದ ಉಳಿದ ಯಾವುದೇ ಬೌಲರ್ ಕೂಡ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಲೇ ಇಲ್ಲ.