ಲೀಡ್ಸ್ ಗೆ ತೆರಳಿ ಬೆರಳಿಗೆ ಸ್ಕ್ಯಾನಿಂಗ್
ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಆಸೀಸ್ ವೇಗಿ ನಥಾನ್ ಕೌಲ್ಟರ್ ನೀಲ್ ಎಸೆತದಲ್ಲಿ ಆಕಸ್ಮಿಕವಾಗಿ ಚೆಂಡು ಧವನ್ ಕೈಬೆರಳಿಗೆ ಬಡಿದಿತ್ತು. ಗಾಯಗೊಂಡಿದ್ದ ಧವನ್ ಅವರು ಫೀಲ್ಡಿಂಗ್ ಮಾಡಲು ಮೈದಾನಕ್ಕಿಳಿದಿರಲಿಲ್ಲ. ಲೀಡ್ಸ್ ನಲ್ಲಿ ಶಿಖರ್ ಧವನ್ ಅವರ ಎಡಗೈ ಹೆಬ್ಬರಳಿಗೆ ಮತ್ತೊಮ್ಮೆ ಸ್ಕ್ಯಾನಿಂಗ್ ಮಾಡಿಸಲಾಗುತ್ತಿದೆ. ಈ ಸ್ಕ್ಯಾನಿಂಗ್ ವರದಿ ಮಂಗಳವಾರ(ಜೂನ್ 11)ಸಂಜೆ ವೇಳೆಗೆ ಬರಲಿದ್ದು, ಇದನ್ನು ಪರಿಶೀಲಿಸಿ ಬಿಸಿಸಿಐ ತನ್ನ ಅಧಿಕೃತ ಪ್ರಕಟಣೆ ಹೊರಡಿಸಲಿದೆ. ಒಂದು ವೇಳೆ ಗಾಯದ ಸ್ವರೂಪ ಹಾಗೆ ಇದ್ದರೆ ಮುಂದಿನ ಎರಡು ವಿಶ್ವಕಪ್ ಪಂದ್ಯಗಳಿಗೆ ವಿಶ್ರಾಂತಿ ಪಡೆಯಬೇಕಾಗುತ್ತದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಬದಲಿ ಆಟಗಾರ ಆಯ್ಕೆಗೆ ಮನವಿ?
ವಿಶ್ವಕಪ್ 2019ಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಐಸಿಸಿ) ನೀಡಿರುವ ನೀತಿ ನಿಯಮಾವಳಿಗಳ ಪ್ರಕಾರ ಮೊದಲಿಗೆ 25 ಆಟಗಾರರ ತಂಡ ನಂತರ 16 ಮಂದಿ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಕಟಿಸಿದೆ. ಒಂದು ವೇಳೆ ಟೂರ್ನಮೆಂಟ್ ವೇಳೆ ಆಟಗಾರರು ಗಾಯಗೊಂಡು ಅಲಭ್ಯರಾದರೆ ಯಾವ ನಿಯಮ ಬಳಸಬೇಕು ಎಂಬುದನ್ನು ಸೂಚಿಸಲಾಗಿದೆ.
ಶಿಖರ್ ಧವನ್ ಅವರು ಜೂನ್ 13ರಂದು ನ್ಯೂಜಿಲೆಂಡ್ ವಿರುದ್ಧ ಹಾಗೂ ಜೂನ್ 16ರಂದು ಪಾಕಿಸ್ತಾನದ ವಿರುದ್ಧದ ಪಂದ್ಯಗಳಿಗೆ ಮಾತ್ರ ಅಲಭ್ಯರಾದರೆ, ಬದಲಿ ಆಟಗಾರನಿಗಾಗಿ ಐಸಿಸಿಯನ್ನು ಬಿಸಿಸಿಐ ಕೋರುವ ಅಗತ್ಯವಿಲ್ಲ. ಆದರೆ, ವಿಶ್ವಕಪ್ ಟೂರ್ನಮೆಂಟ್ ನಿಂದಲೇ ಹೊರಗುಳಿಯಬೇಕಾದರೆ ಮಾತ್ರ ಐಸಿಸಿ ತಾಂತ್ರಿಕ ಸಮಿತಿಯ ಮುಂದೆ ಬದಲಿ ಆಟಗಾರನಿಗಾಗಿ ಮನವಿ ಸಲ್ಲಿಸಬೇಕಾಗುತ್ತದೆ.
ಆರಂಭಿಕ ಆಟಗಾರನಾಗಿ ಕೆಎಲ್ ರಾಹುಲ್
ಶಿಖರ್ ಧವನ್ ಅವರು ಜೂನ್ 13ರಂದು ನ್ಯೂಜಿಲೆಂಡ್ ವಿರುದ್ಧ ಹಾಗೂ ಜೂನ್ 16ರಂದು ಪಾಕಿಸ್ತಾನದ ವಿರುದ್ಧದ ಪಂದ್ಯಗಳಿಗೆ ಮಾತ್ರ ಅಲಭ್ಯರಾದರೆ ಆಗ ಯಾವುದೇ ಬದಲಿ ಆಟಗಾರನಿಗಾಗಿ ಬಿಸಿಸಿಐ ಮನವಿ ಸಲ್ಲಿಸುವುದಿಲ್ಲ. ಉಳಿದ ಪಂದ್ಯಗಳಲ್ಲಿ ಆರಂಭಿಕ ಆಟಗಾರ ಶಿಖರ್ ಧವನ್ ಗಾಯಗೊಂಡಿದ್ದು, ಪಂದ್ಯಗಳಿಗೆ ಅಲಭ್ಯರಾದರೆ, ಅವರ ಬದಲಿಗೆ ಕೆಎಲ್ ರಾಹುಲ್ ಅವರು ರೋಹಿತ್ ಶರ್ಮ ಜೊತೆ ಓಪನರ್ ಆಗಿ ಕಣಕ್ಕಿಳಿಯಬಹುದು. ನಾಲ್ಕನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಅಥವಾ ವಿಜಯ್ ಶಂಕರ್ ಅವರನ್ನು ಆಡಿಸುವ ಸಾಧ್ಯತೆಯಿದೆ.
ಬದಲಿ ಆಟಗಾರ ಯಾರಾಗಬಹುದು?
ಶಿಖರ್ ಧವನ್ ಅವರು ವಿಶ್ವಕಪ್ ನಿಂದಲೆ ಹೊರಗುಳಿದರೆ, ಬಿಸಿಸಿಐ ಬದಲಿ ಆಟಗಾರನಿಗಾಗಿ ಮನವಿ ಸಲ್ಲಿಸಲಿದೆ. ಈಗಾಗಲೇ ಪ್ರಕಟಿಸಿದಂತೆ ಅಂಬಟಿ ರಾಯುಡು ಹಾಗೂ ರಿಷಬ್ ಪಂತ್ ಅವರು ರಿಸರ್ವ್ ಆಟಗಾರರಾಗಿದ್ದು, ಇವರಲ್ಲಿ ಒಬ್ಬರು ಆಯ್ಕೆಯಾಗಲಿದ್ದು, ತಕ್ಷಣವೇ ಲಂಡನ್ನಿಗೆ ತೆರಳಬೇಕಾಗುತ್ತದೆ. ಆದರೆ, ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಇನ್ನೂ ಆಶಾಭಾವದಲ್ಲಿದ್ದು, ಧವನ್ ಅವರ ಪೂರ್ಣ ವೈದ್ಯಕೀಯ ವರದಿ ಪರಿಶೀಲಿಸಿ ಮುಂದಿನ ಹೆಜ್ಜೆ ಇಡುವ ಸಾಧ್ಯತೆಯಿದೆ.