ಜನಾಂಗೀಯ ನಿಂದನೆಯ ಆರೋಪ
ಜಿಯೋ ಕ್ರಿಕೆಟ್ ಜೊತೆ ಯೂಟ್ಯೂಬ್ ಚಾನೆಲ್ನಲ್ಲಿ ಪಾಲ್ಗೊಂಡಿದ್ದ ಶೋಯೆಬ್ ಅಖ್ತರ್, ಹರ್ಭಜನ್ ಸಿಂಗ್ ಮತ್ತು ಬಿಸಿಸಿಐ ವಿರುದ್ಧ ಜನಾಂಗೀಯ ನಿಂದನೆಯ ಆರೋಪ ಹೊರಿಸಿದ್ದಾರೆ. 'ಒಬ್ಬ ಆಟಗಾರ ಮತ್ತೊಬ್ಬನನ್ನು ಮಂಗ ಅಂತ ಕರೀತಾನೆ. ಆದರೆ ಅದು ದೊಡ್ಡ ತಪ್ಪು ಅನ್ನಿಸಲ್ಲ. ಹೀಗಾಗಿಯೇ ಟೆಸ್ಟ್ ಸರಣಿಯನ್ನು ಬಹಿಷ್ಕರಿಸುವ ಭೀತಿ ಒಡ್ಡಲಾಗುತ್ತದೆ. ನಾನು ಆಸ್ಟ್ರೇಲಿಯಾದವರಲ್ಲಿ ಕೇಳುತ್ತೇನೆ, ನಿಮ್ಮ ನೀತಿ ಎಲ್ಲಿ ಹೋಗಿದೆ?,' ಎಂದು ಅಖ್ತರ್ ಹೇಳಿದ್ದಾರೆ.
ಏನಿದು ಮಂಕೀಗೇಟ್ ವಿವಾದ?
ಮಂಕೀಗೇಟ್ ವಿವಾದ ಶುರುವಾಗಿದ್ದು 2008ರಲ್ಲಿ ಭಾರತ ತಂಡ ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿದ್ದಾಗ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಈ ವಿವಾದ ಹುಟ್ಟಿಕೊಂಡಿತ್ತು. ಭಾರತದ ಮೊದಲ ಇನ್ನಿಂಗ್ಸ್ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಹರ್ಭಜನ್ ಸಿಂಗ್, ಆ್ಯಂಡ್ರ್ಯೂ ಸೈಮಂಡ್ಸ್ ಅವರನ್ನು 'ಮಂಕೀ' ಎಂದು ಕರೆದಿದ್ದರು. ಇದಕ್ಕೆ ಆಸ್ಟ್ರೇಲಿಯಾ, ಭಜ್ಜಿ ಮೇಲೆ ಜನಾಂಗೀಯ ನಿಂದನೆಯ ದೂರು ನೀಡಿತ್ತು. ಆ ಬಳಿಕ ಐಸಿಸಿಯು ಹರ್ಭಜನ್ ಅವರನ್ನು 3 ಟೆಸ್ಟ್ ಪಂದ್ಯಗಳಿಂದ ನಿಷೇಧಿಸಿತ್ತು.
ಇದೇನ ನಿಮ್ಮ ನೈತಿಕತೆ?
'ನೀವು ಚೆಂಡು ವಿರೂಪಗೊಳಿಸಿದ್ದಕ್ಕಾಗಿ ಇಬ್ಬರು ಹುಡುಗರನ್ನು ಅಳುವಂತೆ ಮಾಡಿದವರು (ಬಹುಶಃ ಡೇವಿಡ್ ವಾರ್ನರ್-ಸ್ಟೀವ್ ಸ್ಮಿತ್ ಉದ್ದೇಶಿಸಿ). ಇನ್ನೊಂದು ಕಡೆ ಅವರು (ಭಾರತದವರು) ಯಾರೊಬ್ಬರನ್ನೋ ಮಂಕಿ ಅಂತ ಕರೀತಾರೆ. ಮತ್ತೆ ಬಿಸಿಸಿಐ ಸರಣಿ ಕೊನೆಗೊಳಿಸುವ ಭೀತಿಯೊಡ್ಡಿದಾಗ, ಅವರು (ಕ್ರಿಕೆಟ್ ಆಸ್ಟ್ರೇಲಿಯಾ) ಅಂಥ ಘಟನೆಗಳೇ ಏನೂ ನಡೆದಿಲ್ಲ ಅನ್ನುವ ಹಾಗೆ ನಡೆದುಕೊಂಡರು. ಇದೆಲ್ಲ ನಿಮ್ಮ ನೈತಿಕತೆಯೇ? ಎಂದು ಅಖ್ತರ್ ದೂರಿದ್ದಾರೆ.
ಪಂದ್ಯದುದ್ದಕ್ಕೂ ವಿವಾದಗಳ ಸರಮಾಲೆ
ಆವತ್ತು ನಡೆದಿದ್ದ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಪಂದ್ಯದ ಉದ್ದಕ್ಕೂ ವಿದಾದಗಳು ನಡೆದಿದ್ದವು. ಆನ್ ಫೀಲ್ಡ್ ಅಂಪೈರ್ ಆಗಿದ್ದ ಸ್ಟೀವ್ ಬಕ್ನರ್ ಆಸ್ಟ್ರೇಲಿಯಾ ಇನ್ನಿಂಗ್ಸ್ನಲ್ಲಿ ಆಸೀಸ್ ಪರವಾಗಿ ಸಾಕಷ್ಟು ತೀರ್ಪು ಪ್ರಕಟಿಸಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 463 ರನ್, ದ್ವಿತೀಯ ಇನ್ನಿಂಗ್ಸ್ನಲ್ಲಿ 401 ರನ್ ಗಳಿಸಿತ್ತು. ಅಂಪೈರ್, ಆಸ್ಟ್ರೇಲಿಯಾ ಪರವಾಗಿದ್ದರೂ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 532 ರನ್ ಗಳಿಸಿ ಮುನ್ನಡೆ ಸಾಧಿಸಿತ್ತು. ಆದರೆ ದ್ವಿತೀಯ ಇನ್ನಿಂಗ್ಸ್ನಲ್ಲಿ 210 ರನ್ ಗಳಿಸಿದ್ದರಿಂದ ಭಾರತ ಪಂದ್ಯದಲ್ಲಿ 122 ರನ್ ಸೋಲನುಭವಿಸಿತ್ತು. ಟೆಸ್ಟ್ ಸರಣಿ 2-1ರಿಂದ ಆಸ್ಟ್ರೇಲಿಯಾ ವಶವಾಗಿತ್ತು.