ಬೆಂಗಳೂರು, ಆಗಸ್ಟ್ 11: ಭಾರತೀಯ ಕ್ರಿಕೆಟ್ ತಂಡದ ಪ್ರತಿಭಾವಂತ ಆಟಗಾರ ಶ್ರೇಯಸ್ ಐಯ್ಯರ್ ಸುದೀರ್ಘ ಕಾಲದಿಂದ ಗಾಯಾಳಾಗಿ ಕ್ರಿಕೆಟ್ ಚಟುವಟಿಕೆಯಿಮದ ದೂರವುಳಿದಿದ್ದರು. ಈಗ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಲು ಸಜ್ಜಾಗಿದ್ದಾರೆ. ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಶ್ರೇಯಸ್ ಐಯ್ಯರ್ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಲು ಸಮರ್ಥರಾಗಿದ್ದಾರೆ ಎಂದು ದೃಢಪಡಿಸಿದ್ದು ಗ್ರೀಸ್ ಸಿಗ್ನಲ್ ಪಡೆಯುವಲ್ಲಿ ಐಯ್ಯರ್ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಮುಂದಿನ ತಿಂಗಳು ಯುಎಇನಲ್ಲಿ ನಡೆಯಲಿರುವ ಐಪಿಎಲ್ನ ಎರಡನೇ ಚರಣದಲ್ಲಿ ಭಾಗಿಯಾಗಲು ಐಯ್ಯರ್ಗೆ ಅವಕಾಶ ದೊರೆಯಲಿದೆ.
ಶ್ರೇಯಸ್ ಐಯ್ಯರ್ ಕ್ರಿಕೆಟ್ಗೆ ಮರಳಲು ಅವಕಾಶ ದೊರೆತಿರುವ ಕಾರಣದಿಂದಾಗಿ ಈಗ ಮತ್ತೆ ಐಪಿಎಲ್ನಲ್ಲಿ ಶ್ರೇಯಸ್ ಐಯ್ಯರ್ ಆಡಲಿದ್ದಾರೆ. 2020ರ ಐಪಿಎಲ್ ಆವೃತ್ತಿಯಲ್ಲಿ ಶ್ರೇಯಸ್ ಐಯ್ಯರ್ ನೇತೃತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್ ಇತಿಹಾಸದಲ್ಲಿ ಪ್ರಥಮ ಬಾರಿಗೆ ಫೈನಲ್ ಹಂತಕ್ಕೇರಲು ಯಶಸ್ವಿಯಾಗಿತ್ತು. ಆದರೆ ಈ ಬಾರಿ ಐಪಿಎಲ್ ಮೊದಲ ಭಾಗದ ಆರಂಭಕ್ಕೂ ಮುನ್ನವೇ ಶ್ರೇಯಸ್ ಐಯ್ಯರ್ ಗಾಯಗೊಂಡಿದ್ದ ಕಾರಣ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರಗುಳಿದಿದ್ದರು.
ಎನ್ಸಿಎ ಮುಖ್ಯಸ್ಥರ ಸ್ಥಾನಕ್ಕೆ ಅರ್ಜಿ ಕರೆದ ಬಿಸಿಸಿಐ, ದ್ರಾವಿಡ್ ಮರು ಅರ್ಜಿ ಸಲ್ಲಿಕೆ ನಿರೀಕ್ಷೆ
ರಿಷಭ್ ಪಂತ್ ಹೆಗಲೇರಿತ್ತು ನಾಯಕತ್ವ: ಇನ್ನು ಈ ಬಾರಿಯ ಆವೃತ್ತಿಯ ಮೊದಲ ಭಾಗದಲ್ಲಿ ಶ್ರೇಯಸ್ ಐಯ್ಯರ್ ಭಾಗಿಯಾಗುವುದು ಅಸಾಧ್ಯ ಎಂದು ಖಚಿತವಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮನೂತನ ನಾಯಕನನ್ನು ನೇಮಿಸುವುದು ಅನಿವಾರ್ಯವಾಗಿತ್ತು. ಬಳಿಕ ಡೆಲ್ಲಿ ಮ್ಯಾನೇಜ್ಮೆಂಟ್ ಅನುಭವಿಗಳನ್ನು ಬಿಟ್ಟು ಯುವ ಆಟಗಾರ ರಿಷಭ್ ಪಂತ್ಗೆ ನಾಯಕತ್ವ ನೀಡುವ ಮೂಲಕ ಅಚ್ಚರಿಯನ್ನು ಮೂಡಿಸಿತ್ತು. ಮೊದಲಾರ್ಧದಲ್ಲಿ ರಿಷಬ್ ಪಂತ್ ಉತ್ತಮ ನಾಯಕತ್ವವನ್ನು ಪ್ರದರ್ಶಿಸಿದ್ದು ಸಿಕ್ಕ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದರು.
ಕೊರೊನಾವೈರಸ್ನಿಂದ ಮುಂದೂಡಲ್ಪಟ್ಟ ಐಪಿಎಲ್: ಈ ಬಾರಿಯ ಐಪಿಎಲ್ನಲ್ಲಿ ರಿಷಭ್ ಪಂತ್ ನೇತೃತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಉತ್ತಮ ಪ್ರದರ್ಶನ ನೀಡುತ್ತಿತ್ತು. ಆದರೆ ಇದೇ ಸಂದರ್ಭದಲ್ಲಿ ಇಡೀ ಟೂರ್ನಿಗೆ ಆಘಾತ ಕಾದಿತ್ತು. ಕೊರೊನಾವೈರಸ್ನ ಕಾರಣದಿಮದಾಗಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಈ ಬಾರಿಯ ಐಪಿಎಲ್ ಟೂರ್ನಿಯನ್ನು ಆಯೋಜನೆ ಮಾಡಲಾಗಿತ್ತಾದರೂ ಬಯೋಬಬಲ್ನ ಒಳಗೆ ಕೊರೊನಾವೈರಸ್ ಸ್ಪೋಟಗೊಂಡಿತ್ತು. ಹೀಗಾಗಿ ಅನಿವಾರ್ಯವಾಗಿ ಇಡೀ ಟೂರ್ನಿಯನ್ನು ಅನಿರ್ದಿಷ್ಟವಧಿಗೆ ಮುಂದೂಡಲಾಯಿತು. ಇದೀಗ ಬಿಸಿಸಿಐ ಯುಎಇನಲ್ಲಿ ಟೂರ್ನಿಯನ್ನು ಆಯೋಜನೆ ಮಾಡಲು ಸಿದ್ಧತೆ ನಡೆಸಿದ್ದು ಮುಂದಿನ ತಿಂಗಳು ಟೂರ್ನಿ ಆರಂಭವಾಗಲಿದೆ.
ಡೆಲ್ಲಿ ತಂಡದಲ್ಲಿ ಮತ್ತೆ ನಾಯಕತ್ವ ಗೊಂದಲ: ಶ್ರೇಯಸ್ ಐಯ್ಯರ್ ಈಗ ತಮ್ಮ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಐಪಿಎಲ್ನಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ನಾಯಕನಾಗಿ ಯಾರು ಮುಂದುವರಿಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಈ ಬಾರಿಯ ಆವೃತ್ತಿಯ ಆರಂಭದಿಂದ ತಂಡವನ್ನು ಉತ್ತಮವಾಗಿ ಮುನ್ನಡೆಸುತ್ತಿರುವ ರಿಷಭ್ ಪಂತ್ ಅವರನ್ನು ಬಿಟ್ಟು ಮತ್ತೆ ಶ್ರೇಯಸ್ ಐಯ್ಯರ್ಗೆ ಡೆಲ್ಲಿ ಹೊಣೆಗಾರಿಕೆ ದೊರೆಯಲಿದೆಯಾ ಅಥವಾ ರಿಷಭ್ ಪಂತ್ ನಾಯಕತ್ವದಲ್ಲಿಯೇ ಟೂರ್ನಿಯನ್ನು ಸಂಪೂರ್ಣವಾಗಿ ಆಡಿಸಲಾಗುತ್ತದೆಯಾ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಗಾಯಗೊಂಡಿದ್ದ ಐಯ್ಯರ್: ಟೀಮ್ ಇಂಡಿಯಾದ ಸೀಮಿತ ಓವರ್ಗಳ ತಂಡದಲ್ಲಿ ಶ್ರೇಯಸ್ ಐಯ್ಯರ್ ಮಧ್ಯಮ ಕ್ರಮಾಂಕದ ಖಾಯಂ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿಯೂ ಶ್ರೇಯಸ್ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಶ್ರೇಯಸ್ ಐಯ್ಯರ್ ಫೀಲ್ಡಿಂಗ್ ವೇಳೆ ಡೈವ್ ಮಾಡಿದ ಸಂದರ್ಭದಲ್ಲಿ ಭುಜದ ನೋವಿಗೆ ಒಳಗಾಗಿದ್ದರು. ಅಸಾಧ್ಯ ನೋವಿನಿಂದ ಅಂಗಳದಿಂದ ಹೊರನಡೆದಿದ್ದ ಐಯ್ಯರ್ ಅವರ ಭುಜದ ಮೂಳೆಯಲ್ಲಿ ಸಣ್ಣ ಸ್ಥಾನಪಲ್ಲಟವಾಗಿತ್ತು. ಹೀಗಾಗಿ ಯುಕೆಗೆ ತೆರಳಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಮೂರು ತಿಂಗಳ ವಿಶ್ರಾಂತಿಗೆ ಸೂಚಿಸಲಾಗಿತ್ತು. ಈಗ ಶ್ರೇಯಸ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಲು ಸಜ್ಜಾಗಿದ್ದಾರೆ.