ನವದೆಹಲಿ, ಆಗಸ್ಟ್ 14: ಉತ್ತಮ ಸಾಧನೆ ತೋರಿದರೂ ಹಿರಿಯರ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗದಿರುವ ಬೇಸರ ತಲೆಯಲ್ಲಿ ಸುತ್ತುತ್ತಲೇ ಇರುತ್ತದೆ. ಇದರಿಂದ ಆಟದೆಡೆಗೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಭಾರತ ಎ ತಂಡದ ನಾಯಕ ಶ್ರೇಯಸ್ ಐಯರ್ ಹೇಳಿದ್ದಾರೆ.
ಲಾರ್ಡ್ಸ್ ಸೋಲು: ನಾಯಕ ಕೊಹ್ಲಿ, ಕೋಚ್ ಶಾಸ್ತ್ರಿ ಅಧಿಕಾರಕ್ಕೆ ಕತ್ತರಿ?
'ರನ್ ಸಾಧನೆ ಇದ್ದೂ ಹಿರಿಯರ ತಂಡಕ್ಕೆ ಆಯ್ಕೆಯಾಗದಾಗ ಸುಮ್ಮನೆ ಕುಳಿತುಕೊಳ್ಳಲು ನಿಜಕ್ಕೂ ಕಷ್ಟವಾಗುತ್ತದೆ. ಹೀಗಾದರೆ ಆ ಸಂಗತಿ ಯಾವಾಗಲೂ ತಲೆಯಲ್ಲಿ ಸುತ್ತುತ್ತಿರುತ್ತದೆ. ಒಳ್ಳೆಯ ಬೌಲರ್ ಗಳನ್ನು ಎದುರುಗೊಳ್ಳುವಾಗ ಇಂಥ ಬೇಸರಗಳು ತಲೆಯಲ್ಲಿದ್ದರೆ ಆಟವಾಡಲು ಕಷ್ಟವಾಗುತ್ತದೆ' ಎಂದು ಶ್ರೇಯಸ್ ಬೇಸರ ತೋರಿಕೊಂಡಿದ್ದಾರೆ.
ದೇಸಿ ಕ್ರಿಕೆಟ್ ನಲ್ಲಿ ಉತ್ತಮ ಸಾಧನೆ ತೋರಿರುವ ಶ್ರೇಯಸ್ ಅವರನ್ನು ನಿಗದಿತ ಓವರ್ ಗಳ ಕ್ರಿಕೆಟ್ ಗೆ ಮಾತ್ರ ರಾಷ್ಟ್ರೀಯ ತಂಡಕ್ಕಾಗಿ ಆಡಿಸಲಾಗಿತ್ತು. ಈ ವರ್ಷ ಫೆಬ್ರವರಿಯಲ್ಲಿ ನಡೆದಿದ್ದ ಭಾರತ v ದಕ್ಷಿಣ ಆಫ್ರಿಕಾ ಏಕದಿನ ಪಂದ್ಯದಲ್ಲಿ ಕಡೆಯಸಾರಿ ಶ್ರೇಯಸ್ ಗೆ ಭಾರತ ತಂಡದಲ್ಲಿ ಅವಕಾಶ ನೀಡಲಾಗಿತ್ತು.
ಕಳೆದ ವರ್ಷ ಇಂಡಿಯಾ ಎ ಪ್ರತಿನಿಧಿಸಿದ್ದ ಐಯರ್ ನ್ಯೂಜಿಲ್ಯಾಂಡ್ ಎ ವಿರುದ್ಧ 317 ರನ್ ಸಿಡಿಸಿದ್ದರು. ಇದರಲ್ಲಿ 108 ಅಧಿಕರನ್ ಸೇರಿತ್ತು. ಕ್ರಿಕೆಟ್ ನಲ್ಲಿ ಗುರುತಿಸಿಕೊಂಡಿದ್ದ ಕಾರಣಕ್ಕೆ ಐಪಿಎಲ್ ನಲ್ಲಿ ಐಯರ್ ಡೆಲ್ಲಿ ಡೇರ್ ಡೆವಿಲ್ಸ್ ಗೆ ನಾಯಕನಾಗಿಯೂ ಆಯ್ಕೆಯಾಗಿದ್ದರು.
'ಎ ತಂಡಕ್ಕೆ ನಾಯಕನ ಸ್ಥಾನ ನೀಡಿರುವುದಕ್ಕೆ ನನಗೆ ಖುಷಿಯಿದೆ. ಈ ಜವಾಬ್ದಾರಿ ದೊರೆತಮೇಲೆ ನನ್ನ ವರ್ತನೆ, ಮನೋಭಾವವೇ ಬದಲಾಗಿದೆ. ಒತ್ತಡದ ಸಂದರ್ಭಗಳು ಎದುರಾದಷ್ಟು ಉತ್ತಮ ಫಲಿತಾಂಶ ತರುವತ್ತ ನಾನು ಗಮನ ಹರಿಸುತ್ತಿದ್ದೇನೆ' ಎಂದು ದಕ್ಷಿಣ ಆಫ್ರಿಕಾ ವಿರುದ್ಧ 1-0 ಅಂತರದಿಂದ ಅನಧಿಕೃತ ಟೆಸ್ಟ್ ಸರಣಿ ಗೆದ್ದಿರುವ ಭಾರತ ಎ ತಂಡದ ನಾಯಕ ಶ್ರೇಯಸ್ ಹೇಳಿದ್ದಾರೆ.