ನಾಲ್ಕು ದಿನಗಳಲ್ಲಿ ನಿರ್ಧಾರ
ಜೂನ್ 30ರಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇಂಗ್ಲೆಂಡ್ನಲ್ಲಿ ಶ್ರೀಲಂಕಾ ಕ್ರಿಕೆಟಿಗರು ಬಯೋಬಬಲ್ ಉಲ್ಲಂಘಿಸಿದ ನಾಲ್ಕೇ ದಿನಗಳಲ್ಲಿ ಈ ದೊಡ್ಡ ನಿರ್ಧಾರವನ್ನು ಶ್ರೀಲಂಕಾ ಕ್ರಿಕೆಟ್ ಪ್ರಕಟಿಸಿದೆ. ಈ ಮೂವರು ಶ್ರೀಲಂಕಾ ಕ್ರಿಕೆಟಿಗರು ಕೂಡ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕಣಕ್ಕಿಳಿದಿದ್ದರು.
ಶನಿವಾರ ರಾತ್ರಿ ಬಯೋಬಬಲ್ ಉಲ್ಲಂಘನೆ
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಶ್ರೀಲಂಕಾ 0-3 ಅಂತರದಿಂದ ಸೋಲು ಕಂಡ ರಾತ್ರಿಯೇ ಈ ಆಟಗಾರರು ಬಯೋಬಬಲ್ ಉಲ್ಲಂಘಿಸಿ ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಂಡಿದ್ದರು. ಕೊರೊನಾವೈರಸ್ನ ಕಾರಣದಿಂದಾಗಿ ಕಠಿಣ ನಿಯಮಗಳ ಹೊರತಾಗಿಯೂ ಕುಸಲ್ ಮೆಂಡಿಸ್, ನಿರೋಶನ್ ಡಿಕ್ವೆಲ್ ಮತ್ತು ದನುಷ್ಕಾ ಗುಣತಿಲಕ ಬಯೋಬಬಲ್ ವ್ಯಾಪ್ತಿಯಿಂದ ಹೊರಹೋಗಿದ್ದರು.
ವಿಶ್ವಕಪ್ನಿಂದಲೂ ದೂರ
ಶ್ರೀಲಂಕಾ ಕ್ರಿಕೆಟ್ ಮಂಡಳಿ ತೆಗೆದುಕೊಂಡಿರುವ ಈ ಕಠಿಣ ನಿರ್ಧಾರದಿಂದಾಗಿ ಈ ಮೂವರು ಕ್ರಿಕೆಟಿಗರು ಮುಂದಿನ ಜೂನ್ ತಿಂಗಳಿನವರೆಗೂ ಕ್ರಿಕೆಟ್ ಚಟುವಟಿಕೆಗಳಿಂದ ದೂರವುಳಿಯಲಿದ್ದಾರೆ. ಹೀಗಾಗಿ ಈ ವರ್ಷಾಂತ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಿಂದಲೂ ಈ ಆಟಗಾರರು ಹೊರಗುಳಿಯಲಿದ್ದಾರೆ.
ಶ್ರೀಲಂಕಾ ತಂಡಕ್ಕೆ ಹಿನ್ನಡೆ
ಈ ಮೂವರು ಆಟಗಾರರ ನಿಷೇಧ ಶ್ರೀಲಂಕಾ ಕ್ರಿಕೆಟ್ ತಂಡದ ಪಾಲಿಗೆ ನಿಜಕ್ಕೂ ದೊಡ್ಡ ಹಿನ್ನೆಡೆಯಾಗಲಿದೆ. ಈಗಾಗಲೇ ಸೋಲಿನ ಮೇಲೆ ಸೋಲನ್ನು ಕಂಡು ಸಾಕಷ್ಟು ಟೀಕೆಗೆ ಗುರಿಯಾಗಿರುವ ಲಂಕಾ ಕ್ರಿಕೆಟ್ ತಂಡ ಹಠಾತ್ ಆಗಿ ಮೂವರು ಆಟಗಾರರ ಸೇವೆಯಿಂದ ವಂಚಿತವಾಗಲಿದೆ. ಮೂವರು ಕೂಡ ಲಂಕಾ ತಂಡದ ಅನುಭವಿ ಆಟಗಾರರಾಗಿದ್ದಾರೆ. ಮೂವರು ಆಟಗಾರರು ಕೂಡ ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ ಕನಿಷ್ಟ 25 ಪಂದ್ಯಗಳನ್ನು ಆಡಿದ ಅನುಭವಿಗಳಾಗಿದ್ದಾರೆ.