ಶರತ್ ಬಿಆರ್ ಮತ್ತು ಕೆ ಸಿ ಕಾರಿಯಪ್ಪ ಮ್ಯಾಚ್ ವಿನ್ನರ್ಸ್
ಛತ್ತೀಸ್ ಗಢ ವಿರುದ್ಧ ಕರ್ನಾಟಕ ತಂಡದ ಈ ಗೆಲುವಿನಲ್ಲಿ ಪಾತ್ರ ವಹಿಸಿದವರಲ್ಲಿ ಪ್ರಮುಖವಾಗಿ ನಿಂತದ್ದು ವಿಕೆಟ್ ಕೀಪರ್ ಶರತ್ ಬಿಆರ್ ಮತ್ತು ಕೆಸಿ ಕಾರಿಯಪ್ಪ. ಹೌದು, ಛತ್ತೀಸ್ ಗಢ ನೀಡಿದ 146 ರನ್ಗಳ ಗುರಿಯನ್ನು ಬೆನ್ನತ್ತಿದ ಕರ್ನಾಟಕ 14.5 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 78 ರನ್ ಗಳಿಸಿತ್ತು. ಈ ವೇಳೆ ಕರ್ನಾಟಕಕ್ಕೆ ಗೆಲ್ಲಲು ಇನ್ನೂ 31 ಎಸೆತಗಳಲ್ಲಿ 68 ರನ್ಗಳ ಅಗತ್ಯತೆ ಇತ್ತು. ಈ ಸಂದರ್ಭದಲ್ಲಿ ಒಂದಾದ ಶರತ್ ಬಿಆರ್ ಮತ್ತು ಕೆಸಿ ಕಾರಿಯಪ್ಪ ಭರ್ಜರಿ ಬ್ಯಾಟಿಂಗ್ ನಡೆಸಿ ಇನ್ನೂ 3 ಎಸೆತಗಳು ಬಾಕಿ ಇರುವಾಗಲೇ ಕರ್ನಾಟಕಕ್ಕೆ ಗೆಲುವನ್ನು ತಂದುಕೊಟ್ಟರು. ಶರತ್ ಬಿಆರ್ 26 ಎಸೆತಗಳಲ್ಲಿ ಅಜೇಯ 46 ರನ್ ( 5 ಬೌಂಡರಿ ಮತ್ತು 1 ಸಿಕ್ಸರ್ ) ಸಿಡಿಸಿದರೆ, ಕೆ ಸಿ ಕಾರಿಯಪ್ಪ 10 ಎಸೆತಗಳಲ್ಲಿ ಅಜೇಯ 21 ರನ್ ಕಲೆ ಹಾಕಿದರು. ಕೆ ಸಿ ಕಾರಿಯಪ್ಪ 3 ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಗಮನ ಸೆಳೆದರು. ಅಷ್ಟೇ ಅಲ್ಲದೆ ಬೌಲಿಂಗ್ನಲ್ಲಿಯೂ ಮಿಂಚಿದ ಕೆ ಸಿ ಕಾರಿಯಪ್ಪ 4 ಓವರ್ ಮಾಡಿ ಕೇವಲ 14 ರನ್ ನೀಡಿ 2 ಪ್ರಮುಖ ವಿಕೆಟ್ ಪಡೆದು ಮಿಂಚಿದರು.
ಅಬ್ಬರಿಸಿದ ಪಡಿಕ್ಕಲ್, ಶರತ್ ಮತ್ತು ಕಾರಿಯಪ್ಪ; ಮಂಕಾದ ಮನೀಷ್ ಮತ್ತು ಕರುಣ್ ನಾಯರ್
ಪಂದ್ಯದ ಅಂತಿಮ ಹಂತದಲ್ಲಿ ಕೆ ಸಿ ಕಾರಿಯಪ್ಪ ಮತ್ತು ಶರತ್ ಬಿಆರ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ಭರ್ಜರಿ ಗೆಲುವನ್ನು ಸಾಧಿಸಿತು. ಹಾಗೂ ಈ ಪಂದ್ಯದಲ್ಲಿ ಕರ್ನಾಟಕ ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿಸಿದ ದೇವದತ್ ಪಡಿಕ್ಕಲ್ 44 ಎಸೆತಗಳಲ್ಲಿ 42 ರನ್ ಬಾರಿಸಿ ಜವಾಬ್ದಾರಿಯುತ ಆಟವನ್ನಾಡಿದರು. ಇನ್ನು ಮಯಾಂಕ್ ಅಗರ್ವಾಲ್ 23 ರನ್ ಗಳಿಸಿದರೆ ಕಳೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ್ದ ನಾಯಕ ಮನೀಷ್ ಪಾಂಡೆ ಮತ್ತು ಕರುಣ್ ನಾಯರ್ ಈ ಪಂದ್ಯದಲ್ಲಿ ನೀರಸ ಪ್ರದರ್ಶನವನ್ನು ನೀಡಿದರು. ಮನೀಷ್ ಪಾಂಡೆ 2 ರನ್ ಕಲೆಹಾಕಿದರೆ, ಕರುಣ್ ನಾಯರ್ ಶೂನ್ಯ ಸುತ್ತಿದರು. ಇನ್ನುಳಿದಂತೆ ಅನಿರುದ್ಧ ಜೋಶಿ 1 ರನ್ ಮತ್ತು ಕೃಷ್ಣಪ್ಪ ಗೌತಮ್ 2 ರನ್ ಕಲೆ ಹಾಕಿದರು.
ಸತತ ಎರಡನೇ ಗೆಲುವು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ
ಕರ್ನಾಟಕ ಮತ್ತು ಛತ್ತೀಸ್ ಗಢ ತಂಡಗಳ ನಡುವಿನ ಈ ಪಂದ್ಯ ಮುಗಿದ ಸಮಯಕ್ಕೆ ಕರ್ನಾಟಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಈ ಬಾರಿಯ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಇದುವರೆಗೂ ಒಟ್ಟು 2 ಪಂದ್ಯಗಳನ್ನಾಡಿರುವ ಕರ್ನಾಟಕ ಎರಡೂ ಪಂದ್ಯಗಳಲ್ಲಿಯೂ ಗೆಲುವನ್ನು ಸಾಧಿಸುವುದರ ಮೂಲಕ 4 ಅಂಕಗಳನ್ನು ಪಡೆದುಕೊಂಡು ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.