ಉತ್ತಮ ಆರಂಭ ಪಡೆದ್ರೂ ವಿದರ್ಭ ತಂಡ ಪರಾಜಯ
177ರನ್ಗಳ ಗುರಿ ಬೆನ್ನಟ್ಟಿದ ವಿದರ್ಭ ತಂಡದ ಪರ ಓಪನರ್ಗಳಾದ ಅಥರ್ವ ತೈದೆ, ಗಣೇಶ್ ಸತೀಶ್ ಉತ್ತಮ ಆರಂಭ ನೀಡಿದ್ರು. ತೈದೆ 32ರನ್ ಗಳಿಸಿ ಔಟಾದ್ರೆ, ಗಣೇಶ್ ಸತೀಶ್ 31 ರನ್ಗೆ ಔಟಾದ್ರು. ನಂತರ ಬ್ಯಾಟಿಂಗ್ ಇಳಿದ ನಾಯಕ ಅಕ್ಷಯ್ ವಾಡ್ಕರ್ ಕೇವಲ 15 ರನ್ಗೆ ಕರುಣ್ ನಾಯರ್ಗೆ ವಿಕೆಟ್ ಒಪ್ಪಿಸಿ ಇನ್ನಿಂಗ್ಸ್ ಮುಗಿಸಿದ್ರು.
24ರನ್ಗಳಿಸಿ ಉತ್ತಮವಾಗಿ ಆಡ್ತಿದ್ದ ಶುಭಂ ದುಬೆಗೆ, ಕೆ.ಸಿ ಕರಿಯಪ್ಪ ಪೆವಿಲಿಯನ್ ಹಾದಿ ತೋರಿಸಿದ್ರು. ಜಿತೇಶ್ ಶರ್ಮಾ 12ರನ್ಗೆ ಆಟ ಮುಗಿಸಿದ್ರೆ, ಕೊನೆಯಲ್ಲಿ ಅಪೂರ್ವ ವಾಂಖೆಡೆ (27), ಅಕ್ಷಯ್ ಕರ್ನೆವಾರ್ (22) ಹೋರಾಟ ನಡೆಸಿದ್ರೂ ತಂಡವನ್ನ ಗೆಲುವಿನ ದಡ ತಲುಪಿಸಲು ಸಾಧ್ಯವಾಗ್ಲಿಲ್ಲ.
ವಿದರ್ಭ ತಂಡವು ಅಂತಿಮವಾಗಿ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 172 ರನ್ ಕಲೆಹಾಕಿತು. ಕರ್ನಾಟಕ ನಾಲ್ಕು ರನ್ಗಳ ರೋಚಕ ಜಯ ಸಾಧಿಸಿತು.
ಮೊದಲ ಓವರ್ನಲ್ಲೇ ಜೀವದಾನ ಪಡೆದ ರೋಹನ್ ಕದಂ
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿದ ಕರ್ನಾಟಕ ಪರ ಮೊದಲ ಓವರ್ನಲ್ಲೇ ವಿದರ್ಭ ಮಾಡಿದ ಒಂದು ತಪ್ಪಿಗೆ ಭಾರೀ ಬೆಲೆ ತೆರಬೇಕಾಯಿತು. ಓಪನರ್ ರೋಹನ್ ಕದಂ ನಾಲ್ಕು ರನ್ಗಳಿಸಿದ್ದ , ವಿದರ್ಭ ತಂಡದ ವಿಕೆಟ್ ಕೀಪರ್ ಹಾಗೂ ನಾಯಕ ಅಕ್ಷಯ್ ವಾಡ್ಕರ್ ಕೈ ಚೆಲ್ಲಿದ ಕ್ಯಾಚ್ನಿಂದಾಗಿ ಜೀವದಾನ ಸಿಕ್ಕಿತು. ಈ ಮೂಲಕ ಕರ್ನಾಟಕವು ಭರ್ಜರಿ ಮೊತ್ತಕ್ಕೆ ಮೊದಲ ಮೆಟ್ಟಿಲಾಯಿತು.
ನಾಯಕ ಮನೀಷ್ ಪಾಂಡೆ ಅರ್ಧಶತಕ
ರೋಹನ್ ಕದಂ ಸಿಕ್ಕ ಅವಕಾಶವನ್ನ ಕೈ ಚೆಲ್ಲದೆ ಎದುರಾಳಿ ವಿದರ್ಭ ತಂಡದ ಬೌಲರ್ಗಳನ್ನ ದಂಡಿಸಿದ್ರು. 56 ಎಸೆತಗಳಲ್ಲಿ 87 ರನ್ ಚಚ್ಚಿದ ಕದಂ ಇನ್ನಿಂಗ್ಸ್ನಲ್ಲಿ 7 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್ಗಳಿದ್ದವು. ಕದಂ ಸಖತ್ ಸಾಥ್ ನೀಡಿದ ನಾಯಕ ಮನೀಷ್ ಪಾಂಡೆ ಕೂಡ ಅರ್ಧಶತಕದ ಮೂಲಕ ಮಿಂಚಿದ್ರು.
ಕರ್ನಾಟಕದ ಓಪನಿಂಗ್ ಜೋಡಿ ಶತಕದ ಜೊತೆಯಾಟದ ಮೂಲಕ ಭಾರೀ ಮೊತ್ತ ಕಲೆಹಾಕಲು ನೆರವಾಯಿತು. ರೋಹನ್ ಕದಂ 87 ರನ್ಗಳಿಸಿ ಔಟಾದ್ರೆ, ಮನೀಷ್ ಪಾಂಡೆ 54 ರನ್ ಕಲೆಹಾಕಿದ್ರು.
ಅಂತಿಮ ಓವರ್ಗಳಲ್ಲಿ ಎಡವಿದ ಕರ್ನಾಟಕ, ದರ್ಶನ್ಗೆ ನಾಲ್ಕು ವಿಕೆಟ್
ಓಪನರ್ಗಳಿಬ್ಬರು ಉತ್ತಮ ರನ್ ಕಲೆಹಾಕುವ ಮೂಲಕ ಕರ್ನಾಟಕವನ್ನ ಅತ್ಯಂತ ಸುರಕ್ಷಿತ ಸ್ಕೋರ್ನತ್ತ ಸಾಗಿಸಿದ್ರು. ಆದ್ರೆ ನಂತರ ಬಂದ ಬ್ಯಾಟ್ಸ್ಮನ್ಗಳ ಪೆವಿಲಿಯನ್ ಪರೇಡ್ ಮೂಲಕ ಕರ್ನಾಟಕ ಮತ್ತಷ್ಟು ಮೊತ್ತ ಕಲೆಹಾಕುವ ಕನಸಿಗೆ ತಣ್ಣೀರೆರಚಿದ್ರು. ಅದ್ರಲ್ಲೂ ಕೊನೆಯ ಓವರ್ನಲ್ಲಿ ದರ್ಶನ್ ನಲ್ಕಂಡೆ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಕಬಳಿಸುವ ಮೂಲಕ ದಾಖಲೆಯನ್ನೇ ಸೃಷ್ಟಿಸಿದ್ರು. ಈ ಸಾಧನೆ ಮಾಡಿದ ಭಾರತದ ಎರಡನೇ ಕ್ರಿಕೆಟಿಗ ಎಂಬ ಸಾಧನೆ ಮಾಡಿದ್ರು. ಇದಕ್ಕೂ ಮೊದಲು 2019ರಲ್ಲಿ ಕರ್ನಾಟಕ ಪರ ಅಭಿಮನ್ಯು ಮಿಥುನ್ ಹೈದ್ರಾಬಾದ್ ವಿರುದ್ಧ ಈ ಸಾಧನೆ ಮಾಡಿದ್ರು.
ಅಂತಿಮವಾಗಿ ಕರ್ನಾಟಕ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿತು. ಆದ್ರೆ ಈ ಗುರಿ ಬೆನ್ನತ್ತಿದ ಟೂರ್ನಿಯ ಅಜೇಯ ತಂಡ ವಿದರ್ಭ ಗುರಿ ಮುಟ್ಟುವಲ್ಲಿ ವಿಫಲಗೊಂಡಿತು. ಪರಿಣಾಮ ಕರ್ನಾಟಕ ಫೈನಲ್ ಪ್ರವೇಶಿಸಿದ್ದು, ನೆರೆ ರಾಜ್ಯದ ಬದ್ಧ ಎದುರಾಳಿ ತಮಿಳುನಾಡು ವಿರುದ್ಧ ಕಾದಾಟ ನಡೆಸಲಿದೆ. ತಮಿಳುನಾಡು ತಂಡ ಮೊದಲ ಸೆಮಿಫೈನ್ನಲ್ಲಿ ಹೈದ್ರಾಬಾದ್ ತಂಡವನ್ನ 90ರನ್ಗೆ ಆಲೌಟ್ ಮಾಡಿದ್ದಷ್ಟೇ ಅಲ್ಲದೆ, 14.2 ಓವರ್ಗಳಲ್ಲಿ ಗುರಿ ಮುಟ್ಟಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.