2022-23ನೇ ಸಾಲಿನ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಗೆ ಮುಂಬೈ ತಂಡವನ್ನು ಪ್ರಕಟಿಸಲಾಗಿದೆ. ಬಲಿಷ್ಠ ಆಟಗಾರರ ಪಡೆಯನ್ನು ಹೊಂದಿರುವ ಮುಂಬೈ ತಂಡಕ್ಕೆ ಅಜಿಂಕ್ಯಾ ರಹಾನೆ ನಾಯಕತ್ವ ವಹಿಸಿಕೊಂಡಿದ್ದು ಹಲವು ಸ್ಟಾರ್ ಆಟಗಾರರು ಈ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅಜಿಂಕ್ಯಾ ರಹಾನೆ ಇಒತ್ತೀಚೆಗಷ್ಟೇ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ವೆಸ್ಟ್ ಝೋನ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಈ ತಂಡ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಯಶಸ್ವಿಯಾಗಿತ್ತು.
ಅನೇಕ ಖ್ಯಾತನಾಮರನ್ನು ಒಳಗೊಂಡಿರುವ ಮುಂಬೈ ತಂಡ ಬಲಿಷ್ಠವಾಗಿ ಕಾಣಿಸುತ್ತಿದ್ದು ಇತರ ತಂಡಗಳಿಗೆ ತೀವ್ರ ಪೈಪೋಟಿ ನೀಡುವುದರಲ್ಲಿ ಅನುಮಾನವಿಲ್ಲ. ಯಶಸ್ವಿ ಜೈಸ್ವಾಲ್, ಪೃಥ್ವಿ ಶಾ, ಸರ್ಫರಾಜ್ ಖಾನ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಧವಲ್ ಕುಲಕರ್ಣಿ ಮತ್ತು ತುಷಾರ್ ದೇಶಪಾಂಡೆಯಂತಾ ಆಟಗಾರರು ಈ ತಂಡದಲ್ಲಿದ್ದಾರೆ. ಸಲಿಲ್ ಅಂಕೋಲಾ ನೇತೃತ್ವದ ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಆಯ್ಕೆ ಸಮಿತಿ ತಂಡವನ್ನು ಅಂತಿಮಗೊಳಿಸಿದೆ. ಹಾರ್ದಿಕ್ ತಮೋರ್ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ.
ಮುಂಬೈ, ರಾಜಸ್ಥಾನ, ಮಧ್ಯಪ್ರದೇಶ, ಅಸ್ಸಾಂ, ರೈಲ್ವೇಸ್, ಉತ್ತರಾಖಂಡ, ವಿದರ್ಭ ಮತ್ತು ಮಿಜೋರಾಂನೊಂದಿಗೆ ಎ ಗುಂಪಿನಲ್ಲಿ ಸ್ಥಾನವನ್ನು ಪಡೆದಿದೆ. ಟೂರ್ನಿಯ ಆರಂಭಕ್ಕೂ ಮುನ್ನ ತಂಡ ಅಕ್ಟೋಬರ್ 2 ರಂದು ಅಹಮದಾಬಾದ್ಗೆ ಪ್ರಯಾಣಿಸಲಿದ್ದು ಗುಜರಾತ್ ಮತ್ತು ರಾಜಸ್ಥಾನ ವಿರುದ್ಧ ಮೂರು ಅಭ್ಯಾಸ ಟಿ20 ಪಂದ್ಯಗಳನ್ನು ಆಡಲಿದೆ. ನಂತರ ರಸ್ತೆ ಮೂಲಕ ರಾಜ್ಕೋಟ್ಗೆ ಪ್ರಯಾಣಿಸಲಿದೆ.
ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಗೆ ಆಯ್ಕೆಯಾಗಿರುವ ಮುಂಬೈ ತಂಡ: ಅಜಿಂಕ್ಯ ರಹಾನೆ (ನಾಯಕ), ಯಶಸ್ವಿ ಜೈಸ್ವಾಲ್, ಪೃಥ್ವಿ ಶಾ, ಸರ್ಫರಾಜ್ ಖಾನ್, ಶಾರ್ದೂಲ್ ಠಾಕೂರ್, ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಹಾರ್ದಿಕ್ ತಮೋರ್ (ವಿಕೆಟ್ ಕೀಪರ್), ಪ್ರಶಾಂತ್ ಸೋಲಂಕಿ, ಧವಲ್ ಕುಲಕರ್ಣಿ, ತುಷಾರ್ ದೇಶಪಾಂಡೆ, ಶಿವಂ ದುಬೆ, ಅಮನ್ ಖಾನ್, ಸಾಯಿರಾಜ್ ಪಾಟೀಲ್, ಮೋಹಿತ್ ಅವಸ್ತಿ