ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 13ನೇ ಆವೃತ್ತಿಯನ್ನು ಏಪ್ರಿಲ್ 15ಕ್ಕೆ ಮುಂದೂಡಿ ಅದಾಗಲೆ ಹತ್ತು ದಿನಗಳಾಗಿದೆ. ಇಂದು ಟೂರ್ನಿಯ ಆಯೋಜನೆಯ ಕುರಿತಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿಕೆ ನೀಡಿದ್ದಾರೆ.
"ಸಧ್ಯ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಪರಿಸ್ಥಿತಿಯಿಲ್ಲ ಎಂದಿದ್ದಾರೆ ಸೌರವ್ ಗಂಗೂಲಿ . ಟೂರ್ನಿಯನ್ನು ಮುಂದೂಡಿದ ದಿನದಲ್ಲಿ ಪರಿಸ್ಥಿತಿ ಹೇಗಿತ್ತೋ ಈಗಲೂ ಹಾಗೆಯೇ ಇದೆ. ಕಳೆದ 10 ದಿನಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದಿದ್ದಾರೆ.
ದೇಶದಲ್ಲಿ ಕೊರೊನಾ ವೈರಸ್ ಹೆಚ್ಚಾಗುತ್ತಿದ್ದಂತೆಯೇ ಮಾರ್ಚ್ 14ರಂದು ಬಿಸಿಸಿಐ ತುರ್ತು ಸಭೆ ನಡೆಸಿ ಐಪಿಎಲ್ 2020 ಟೂರ್ನಿಯನ್ನು ಏಪ್ರಿಲ್ 15ಕ್ಕೆ ಮುಂದೂಡಲಾಗಿದೆ ಎಂದು ಘೋಷಿಸಿತ್ತು. ವೈರಸ್ ಹರಡದಂತೆ ತಡೆಯಲು ಸರಕಾರದ ಆದೇಶದಂತೆ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಬಿಸಿಸಿಐ ತಿಳಿಸಿತ್ತು.
ಈ ಮಧ್ಯೆ ಐಪಿಎಲ್ ಆಯೋಜನೆಗೆ ಬಿಸಿಸಿಐ ಹಲವು ಕಸರತ್ತುಗಳನ್ನು ನಡೆಸುತ್ತಿದೆ. ಎಲ್ಲದಕ್ಕೂ ಪರಿಸ್ಥಿತಿ ಸುಧಾರಿಸಬೇಕಿದೆ. ಕೊರೊನಾ ವೈರಸ್ ಭೀತಿ ಕಡಿಮೆಯಾದರೆ ಕೇವಲ 37 ದಿನಗಳ ಒಳಗಾಗಿ ಐಪಿಎಲ್ನ ಎಲ್ಲಾ ಪಂದ್ಯಗಳನ್ನು ನಡೆಸಲು ಬಿಸಿಸಿಐ ಮಾಸ್ಟರ್ ಪ್ಲಾನ್ ಮಾಡುತ್ತಿದೆ. ಆದರೆ, ಪರಿಸ್ಥಿತಿ ಸುಧಾರಿಸುವ ಯಾವುದೇ ಲಕ್ಷಣ ಇಲ್ಲವಾಗಿದ್ದು, ಭಾರತದಲ್ಲಿ ಈವರೆಗೆ 500ಕ್ಕೂ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ.