ಕ್ರಮಾಂಕಕ್ಕೆ ಒಗ್ಗಿಕೊಳ್ಳಬಲ್ಲರು
ಭಾರತ ತಂಡದ ಮಾಜಿ ನಾಯಕ, ಸದ್ಯ ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಭಾರತದ 4ನೇ ಬ್ಯಾಟಿಂಗ್ ಕ್ರಮಾಂಕ್ಕೆ ಸೂಕ್ತ ಆಟಗಾರರನ್ನು ಹೆಸರಿಸಿದ್ದಾರೆ. ಯುವ ಬ್ಯಾಟ್ಸ್ಮನ್ಗಳಾದ ಶ್ರೇಯಸ್ ಐಯ್ಯರ್ ಮತ್ತು ಮನೀಶ್ ಪಾಂಡೆ ಈ ಕ್ರಮಾಂಕಕ್ಕೆ ಒಗ್ಗಿಕೊಳ್ಳಬಲ್ಲರು ಎಂದು ಗಂಗೂಲಿ ಸಲಹೆಯಿತ್ತಿದ್ದಾರೆ.
ಪ್ರಭಾವ ಬೀರದ ರಾಹುಲ್
ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಬಂಗಾಳ ಹುಲಿ ಗಂಗೂಲಿ, 'ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಟಾಪ್ ಆರ್ಡರ್ನಲ್ಲಿ ಬಂದರೆ, ಕೆಎಲ್ ರಾಹುಲ್ ಕೆಳದೂಡಲ್ಪಡುತ್ತಾರೆ. ಟೆಸ್ಟ್ನಲ್ಲಿ ಫಾರ್ಮ್ ಇಲ್ಲದೆ ರಾಹುಲ್ ಸ್ಥಾನ ಕಳೆದುಕೊಂಡಿದ್ದಾರೆ. ಹೀಗಾಗಿ ಮನೀಷ್ ಪಾಂಡೆ ಮತ್ತು ಶ್ರೇಯಸ್ ಐಯ್ಯರ್ ಬಯಸಿದರೆ 4ನೇ ಕ್ರಮಾಂಕದಲ್ಲಿ ನೆಲೆ ನಿಲ್ಲಬಲ್ಲರು,' ಎಂದರು.
ಐಯ್ಯರ್ ಅರ್ಧ ಶತಕ
ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಎರಡು ಏಕದಿನ ಪಂದ್ಯಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದ ಶ್ರೇಯಸ್, ಎರಡು ಅರ್ಧ ಶತಕಗಳನ್ನು ಬಾರಿಸಿದ್ದರು. ಅಂದು ಗಮನ ಸೆಳೆದಿದ್ದ ಐಯ್ಯರ್ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಟಿ20 ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಆದರೆ ಸದ್ಯ ಆಫ್ರಿಕಾ ವಿರುದ್ಧದ ಟಿ20ಯಲ್ಲಿ ರಿಷಬ್ ಪಂತ್ 4ನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆ.
5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್
ವಿಂಡೀಸ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಶ್ರೇಯಸ್ 68 ಎಸೆತಗಳಿಗೆ 71 ರನ್, ತೃತೀಯ ಪಂದ್ಯದಲ್ಲಿ 41 ಎಸೆತಗಳಿಗೆ 65 ರನ್ ಮಾಡಿದ್ದರು. ಈ ಎರಡೂ ಪಂದ್ಯಗಳನ್ನು ಭಾರತ ಗೆದ್ದಿತ್ತು. ಅಂದ್ಹಾಗೆ ಈ ಪಂದ್ಯಗಳಲ್ಲಿ ಐಯ್ಯರ್ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು.