ಆಸ್ಟ್ರೇಲಿಯಾದ ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್ ಕೊರೊನಾವೈರಸ್ಗೆ ತುತ್ತಾಗಿದ್ದಾರೆ. ಹೀಗಾಗಿ ಅವರು ಸ್ವಯಂ ಐಸೋಲೇಶನ್ಗೆ ಒಳಗಾಗಿದ್ದಾರೆ ಎಂದು ಕ್ರಿಕ್ ಇನ್ಫೋ ವರದಿ ಮಾಡಿದೆ.
ವರದಿಗಳ ಪ್ರಕಾರ ಭಾನುವಾರ ಮುಂಜಾನೆ ಸೌಥರ್ನ್ ಬ್ರೇವ್ ತಂಡದ ವಿರುದ್ಧದ ಪಂದ್ಯಕ್ಕೂ ಮುನ್ನ ಲಂಡನ್ ಸ್ಪಿರಿಟ್ ತಂಡದ ಕೋಚ್ ಶೇನ್ ವಾರ್ನ್ ಅನಾರೋಗ್ಯಕ್ಕೆ ಒಳಗಾಗಿದ್ದರು. ಹೀಗಾಗಿ ತಕ್ಷಣವೇ ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರ ವರದಿಯಲ್ಲಿ ಶೇನ್ ವಾರ್ನ್ ಕೊರೊನಾವೈರಸ್ಗೆ ತುತ್ತಾಗಿರುವುದು ದೃಢಪಟ್ಟಿದೆ. ಆದರೆ ಈವರೆಗೆ ಸ್ಪಿರಿಟ್ಸ್ ತಂಡದ ಆಟಗಾರರು ಯಾರು ಕೂಡ ಕೊರೊನಾವೈರಸ್ಗೆ ತುತ್ತಾಗಿಲ್ಲ ಎನ್ನಲಾಗಿದೆ.
ಇದಕ್ಕೂ ಮುನ್ನ ಟ್ರೆಂಟ್ ರಾಕೆಟ್ಸ್ ತಂಡದ ಹೆಡ್ ಕೋಚ್ ಆಂಡಿ ಫ್ಲವರ್ ಕೂಡ ಕೊರೊನಾವೈರಸ್ಗೆ ತುತ್ತಾಗಿದ್ದರು. ಹೀಗಾಗಿ ಉಳಿದ ಪಂದ್ಯಗಳಿಂದ ಅವರು ಹೊರಗುಳಿಯಬೇಕಾಗಿತ್ತು. ಇದೀಗ ಶೇನ್ ವಾರ್ನ್ ಕೂಡ ಸೆಲ್ಫ್ ಐಸೋಲೇಶನ್ಗೆ ಒಳಗಾಗಿದ್ದಾರೆ.
ಟೋಕಿಯೋ ಒಲಿಂಪಿಕ್ಸ್: ಬಾಕ್ಸಿಂಗ್ನಲ್ಲಿ ದಿಟ್ಟ ಹೋರಾಟ ನಡೆಸಿದ ಸೈನಿಕ ಸತೀಶ್!
ಇಂಗ್ಲೆಂಡ್ನಲ್ಲಿರುವ ಟೀಮ್ ಇಂಡಿಯಾಗೂ ಕೊರೊನಾ ಕಾಟ: ಸದ್ಯ ಭಾರತ ಕ್ರಿಕೆಟ್ ತಂಡವು ಕೂಡ ಇಂಗ್ಲೆಂಡ್ ವಿರುದ್ಧದ ಟೆಸ್ ಸರಣಿಯಲ್ಲಿ ಭಾಗಿಯಾಗುವ ದೃಷ್ಟಿಯಿಂದ ಇಂಗ್ಲೆಂಡ್ನಲ್ಲಿದೆ. ಭಾರತ ತಂಡಕ್ಕೆ ಕೂಡ ಇಂಗ್ಲೆಂಡ್ನಲ್ಲಿ ಕೊರೊನಾವೈರಸ್ ಆಘಾತವನ್ನು ನೀಡಿತ್ತು. ಆದರೆ ತಂಡದ ಆಟಗಾರರು ವಿರಾಮದಲ್ಲಿದ್ದ ಅವಧಿಯಲ್ಲಿ ಈ ಪ್ರಕರಣ ಕಾಣಿಸಿಕೊಂಡಿದ್ದ ಕಾರಣದಿಂದಾಗಿ ಸರಣಿಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಕೊರೊನಾವೈರಸ್ಗೆ ತುತ್ತಾಗಿದ್ದರು.
ಕೊರೊನಾವೈರಸ್ನಿಂದ ಸಂಪೂರ್ಣ ಚೇತರಿಸಿಕೊಂಡಿರುವ ಪಂತ್: ಸದ್ಯ ರಿಷಭ್ ಪಂತ್ ಸಂಪೂರ್ಣವಾಗಿ ಗುಣಮುಖವಾಗಿದ್ದು ಇಂಗ್ಲೆಂಡ್ ವಿರುದ್ಧದ ಸರಣಿಗೆ ಸಜ್ಜಾಗಿದ್ದಾರೆ. ಕೌಂಟಿ ಸೆಲೆಕ್ಟ್ ತಂಡದ ವಿರುದ್ಧದ ಅಭ್ಯಾಸ ಪಂದ್ಯದ ಸಂದರ್ಭದಲ್ಲಿಯೇ ರಿಷಭ್ ಪಂತ್ ಟೀಮ್ ಇಂಡಿಯಾವನ್ನು ಸೇರಿಕೊಂಡಿದ್ದು ಬಳಿಕ ತಂಡದ ಜೊತೆಗೆ ಅಭ್ಯಾಸದಲ್ಲಿಯೂ ಭಾಗಿಯಾಗಿದ್ದಾರೆ.
ಸೂರ್ಯಕುಮಾರ್ ಯಾದವ್, ಪೃಥ್ವಿ ಶಾಗೆ ಬುಲಾವ್: ಇನ್ನು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯದ ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನ ಭಾರತ ತಂಡದ ಆರಂಭಿಕ ಆಟಗಾರ ಶುಬ್ಮನ್ ಗಿಲ್, ವಾಶಿಂಗ್ಟನ್ ಸುಂದರ್ ಹಾಗೂ ಆವೇಶ್ ಖಾನ್ ಗಾಯಗೊಂಡಿರುವ ಕಾರಣದಿಂದಾಗಿ ಈ ಇಬ್ಬರು ಆಟಗಾರರು ಕೂಡ ಸರಣಿಯಿಂದ ಅನಿವಾರ್ಯವಾಗಿ ಹೊರಗುಳಿದಿದ್ದಾರೆ. ಹೀಗಾಗಿ ಈ ಇಬ್ಬರು ಆಟಗಾರರ ಬದಲಿಗೆ ಭಾರತೀಯ ಟೆಸ್ಟ್ ತಂಡಕ್ಕೆ ಪೃಥ್ವಿ ಶಾ ಹಾಗೂ ಸೂರ್ಯಕುಮಾರ್ ಯಾದವ್ ಅವರನ್ನು ಸೇರಿಸಿಕೊಳ್ಳಲಾಗಿದೆ.
ಟೋಕಿಯೋ ಒಲಿಂಪಿಕ್ಸ್: ಆಗಸ್ಟ್ 2ಕ್ಕೆ ಭಾರತೀಯರ ವೇಳಾಪಟ್ಟಿ
ಪೃಥ್ವಿ ಶಾ ಸೂರ್ಯಕುಮಾರ್ಗೂ ಕೊರೊನಾ ಆಘಾತ: ಈ ಮಧ್ಯೆ ಶ್ರೀಲಂಕಾ ವಿರುದ್ಧದ ಸೀಮಿತ ಸರಣಿಯಲ್ಲಿ ಭಾರತೀಯ ತಂಡವನ್ನು ಪ್ರತಿನಿಧಿಸಿದ್ದ ಭಾರತೀಯ ತಂಡದ ಆಟಗಾರರಾದ ಸೂರ್ಯ ಕುಮಾರ್ ಯಾದವ್ ಹಾಗೂ ಪೃಥ್ವಿ ಶಾ ಟೆಸ್ಟ್ ತಂಡಕ್ಕೆ ಕರೆಯನ್ನು ಸ್ವೀಕರಿಸಿದ ಸಂತಸದಲ್ಲಿದ್ದರು. ಆದರೆ ಈ ಇಬ್ಬರು ಆಟಗಾರರಿಗೂ ಕೂಡ ಕೊರೊನಾವೈರಸ್ ಆಘಾತವನ್ನು ನೀಡಿದೆ. ಕೊರೊನಾವೈರಸ್ ಇವರಿಗೆ ತಗುಲದಿದ್ದರೂ ಶ್ರಿಲಂಕಾ ಸರಣಿಯ ಸಂದರ್ಭದಲ್ಲಿ ಇವರು ಕೊರೊನಾವೈರಸ್ಗೆ ತುತ್ತಾಗಿದ್ದ ಕೃನಾಲ್ ಪಾಂಡ್ಯ ಜೊತೆಗೆ ಆಪ್ತ ಸಂಪರ್ಕದಲ್ಲಿದ್ದರು. ಹೀಗಾಗಿ ಈ ಇಬ್ಬರು ಆಟಗಾರರ ಸಹಿತ ತಂಡದ ಎಂಟು ಸದಸ್ಯರನ್ನು ಪ್ರತ್ಯೇಕವಾಗಿರಲಿಸಲಾಗಿತ್ತು. ರಿಷಭ್ ಪಂತ್ ಹಾಗೂ ಸೂರ್ಯಕುಮಾರ್ ಯಾದವ್ ತಮ್ಮ ಕ್ವಾರಂಟೈನ್ ಅವಧಿಯನ್ನು ಪೂರೈಸಿದ ನಂತರ ಇಂಗ್ಲೆಂಡ್ಗೆ ಪ್ರಯಾಣವನ್ನು ಬೆಳೆಸಲಿದ್ದಾರೆ. ಇಂಗ್ಲೆಂಡ್ಗೆ ತೆರಳಿದ ಬಳಿಕವೂ ಈ ಆಟಗಾರರು ಹತ್ತು ದಿನಗಳ ಕಡ್ಡಾಯ ಕ್ವಾರಂಟೈನ್ ಪೂರೈಸಬೇಕಿದೆ. ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಆಗಸ್ಟ್ ನಾಲ್ಕರಿಂದ ಆರಂಭವಾಗಲಿದೆ.