ಬೆಂಗಳೂರು, ಮೇ 15: ನಾನು ಯಾವತ್ತೂ ಕೂಡ ರಾಹುಲ್ ದ್ರಾವಿಡ್ ಅವರನ್ನು ವಿರೋಧಿಸಿಲ್ಲ, ಅವರಿಗೆ ಅಗೌರವ ಉಂಟಾಗುವ ರೀತಿಯಲ್ಲಿ ನಡೆದುಕೊಂಡಿಲ್ಲ. ರಾಹುಲ್ ದ್ರಾವಿಡ್ ಜೊತೆ ನಾನು ಕಿತ್ತಾಟ ಮಾಡಿಕೊಂಡಿದ್ದೇನೆ ಎನ್ನುವುದು ಸುಳ್ಳು. ಗ್ರೇಟ್ ವಾಲ್ ದ್ರಾವಿಡ್ ಅವರ ಮಾರ್ಗದರ್ಶನ ಇಲ್ಲದೆ ಇದ್ದಿದ್ದರೆ ನಾನು 2007ರ ವಿಶ್ವಕಪ್ ನಲ್ಲಿ ಆಡುತ್ತಲೇ ಇರಲಿಲ್ಲ ಎಂದು ಕೇರಳ ಎಕ್ಸಪ್ರೆಸ್ ಎಸ್. ಶ್ರೀಶಾಂತ್ ಹೇಳಿದ್ದಾರೆ.
ಕಾಲೆಳೆದ ರೋಹಿತ್, ವಾರ್ನರ್ಗೆ ಬೊಂಬಾಟ್ ಉತ್ತರ ಕೊಟ್ಟ ಶಿಖರ್ ಧವನ್
Helo ಲೈವ್ ನಲ್ಲಿ ಮಾತನಾಡಿದ ಶ್ರೀಶಾಂತ್, 'ನನ್ನ ಬಗ್ಗೆ ಭಾರತ ತಂಡದ ಫಿಸಿಯೋ ಪ್ಯಾಡಿ ಆಪ್ಟನ್ ತಮ್ಮ ಪುಸ್ತಕದಲ್ಲಿ ನನ್ನ ಬಗ್ಗೆ ಸುಳ್ಳು ವಿಷಯಗಳನ್ನು ಬರೆದಿದ್ದಾರೆ. ನಾನು ಸಿಎಸ್ಕೆ ಹಾಗೂ ಮಹೇಂದ್ರ ಸಿಂಗ್ ಧೋನಿಯನ್ನು ವಿರೋಧ ಮಾಡುತ್ತೇನೆ ಎಂದೆಲ್ಲ ಬರೆದಿದ್ದಾರೆ. ಪ್ಯಾಡಿ ಆಪ್ಟನ್ ನನ್ನ ಬಗ್ಗೆ ಹೀಗೆ ಬರೆದಾಗ ಬಹಳ ಬೇಜಾರಾಗಿತ್ತು. ನಾನು ಅವರಿಗೆ ಬಹಳ ಗೌರವ ಕೊಡುತ್ತಿದ್ದೆ. ಅವರು ಹೀಗೆಲ್ಲ ಬರೆಯುತ್ತಾರೆ ಎಂದುಕೊಂಡಿರಲಿಲ್ಲ. ನನ್ನ ಬಗ್ಗೆ ಯಾಕೆ ಈ ರೀತಿ ಬರೆದರೂ ಎನ್ನುವುದನ್ನು ಪ್ಯಾಡಿ ಆಪ್ಟನ್ ಬಳಿಯೇ ಕೇಳಬೇಕು. ನನ್ನ ಬಗ್ಗೆ ಬರೆದರೆ ಅವರ ಪುಸ್ತಕ ಹೆಚ್ಚು ಮಾರಾಟವಾಗುತ್ತದೆ ಎಂದುಕೊಂಡಿರಬಹುದು. ಆದರೆ ನಾನು ಹೇಳುವುದಿಷ್ಟೇ, ನನ್ನ ಬಗ್ಗೆ ಬರೆದು ದುಡ್ಡು ಮಾಡಿಕೊಳ್ಳುತ್ತೀರಿ ಎಂದಾದರೆ, ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಎಂದಾದರೆ ಖಂಡಿತವಾಗಿಯೂ ಬರೆಯಿರಿ,' ಎಂದು ಶ್ರೀಶಾಂತ್ ನುಡಿದಿದ್ದಾರೆ.
'ನಾನು ಸಿಎಸ್ಕೆಯನ್ನು ವಿರೋಧಿಸುತ್ತೀನಿ ಎನ್ನುವುದಕ್ಕಿಂತ ನಾನು ಹಳದಿ ಬಣ್ಣವನ್ನು ವಿರೋಧಿಸುತ್ತೀನಿ ಎನ್ನಬಹುದು. ಆಸ್ಟ್ರೇಲಿಯಾ ಕೂಡ ಹಳದಿ ಬಣ್ಣದ ಜೆರ್ಸಿ ಹೊಂದಿದೆ. ಧೋನಿ ವಿಕೆಟ್ ಕೂಡ ಪಡೆದು ಖುಷಿ ಪಟ್ಟಿದ್ದೆ. ಚೆನ್ನೈ ತಂಡ ಆಗಲೂ ಈಗಲೂ ಬಹಳ ಬಲಶಾಲಿ ತಂಡ. ಅದನ್ನು ಸೋಲಿಸುವುದು ಕೂಡ ಬಹಳ ಸಂತೋಷ ತರುವ ವಿಚಾರ. ನನಗೆ ಚೆನ್ನೈ ವಿರುದ್ಧದ ಫೈನಲ್ ಪಂದ್ಯದಲ್ಲಿ ಆಡಲು ಅವಕಾಶ ನೀಡಲಿಲ್ಲ. ಆದರೆ ನಾನು ಆ ವೇಳೆ ಅಭಿಮಾನಿಗಳು ಹೇಗೆ ಸಂಭ್ರಮಾಚರಣೆ ಮಾಡುತ್ತಾರೋ ಹಾಗೆ ಕೂಗಿ, ಖುಷಿ ಪಡುತ್ತಿದ್ದೆ. ಚೆನ್ನೈ ವಿರುದ್ಧ ರಾಜಸ್ತಾನ ಪಂದ್ಯ ಗೆದ್ದಾಗ ನಾನು ಮೊದಲನೆಯದಾಗಿ ಹೋಗಿ ಅಭಿನಂದನೆ ತಿಳಿಸಿದೆ. ದ್ರಾವಿಡ್ ಅವರನ್ನು ಅಭಿನಂದಿಸಿದ್ದೇನೆ,' ಎಂದು ಶ್ರೀಶಾಂತ್ ಹೇಳಿದ್ದಾರೆ.
ಎಂಐ-ಸಿಎಸ್ಕೆ ಸೇರಿಸಿ ಬಲಿಷ್ಠ ತಂಡ ಪ್ರಕಟಿಸಿದ ರೋಹಿತ್, ಸುರೇಶ್ ರೈನಾ
ಮಾತು ಮುಂದುವರೆಸಿದ ಶ್ರೀಶಾಂತ್, 'ನಾನು ಮ್ಯಾಚ್ ಫಿಕ್ಸಿಂಗ್ ಘಟನೆ ಸಂದರ್ಭದಲ್ಲಿ 6 ರಿಂದ 7 ತಿಂಗಳ ಕಾಲ ಖಿನ್ನತೆಯಿಂದ ಬಳಲಿದ್ದೆ. ನಾನು ಈ ಬಗ್ಗೆ ಪುಸ್ತಕವನ್ನೂ ಬರೆಯುತ್ತಿದ್ದೇನೆ. ನಾನು ಕ್ರಿಕೆಟ್ ಗೆ ಮರಳುತ್ತೇನೆ. ಆಮೇಲೆ ಈ ಪುಸ್ತಕ ಪ್ರಕಟಿಸುತ್ತೇನೆ. ಆ ಪುಸ್ತಕದಲ್ಲಿ ಎಲ್ಲವನ್ನೂ ಬರೆಯುತ್ತೇನೆ. ನನ್ನ ಬದುಕಿನಲ್ಲಿ ಏನೇನಾಯಿತೋ ಎಲ್ಲವನ್ನೂ ಬರೆಯುತ್ತೇನೆ,' ಎಂದು ಶ್ರೀಶಾಂತ್ ಇಂಗಿತ ವ್ಯಕ್ತಪಡಿಸಿದ್ದಾರೆ.
'ಅಭಿಮಾನಿಗಳನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಕೊರೊನಾ ಬಂದಿರಬಹುದು ಆದರೆ ಪೂರ್ತಿ ಸ್ಟೇಡಿಯಂ ಯಾಕೆ ಖಾಲಿ ಬಿಡಬೇಕು? ಸಾಮಾಜಿಕ ಅಂತರ ಕೈಗೊಳ್ಳುವ ಮೂಲಕ ಪ್ರೇಕ್ಷಕರಿಗೆ ಅವಕಾಶ ನೀಡಬಹುದು. ಜೊತೆಗೆ ಕ್ರೀಡಾಂಗಣಕ್ಕೆ ಬರುವ ಮೊದಲೇ ಪರೀಕ್ಷೆ ಮಾಡಬೇಕು. ಜೊತೆಗೆ ಹೆಚ್ಚು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಆದರೆ ಅಭಿಮಾನಿಗಳು ಇರಲಿ ಅಥವಾ ಇರದೇ ಇರಲಿ ನಾನು ಆಡಲೇಬೇಕು,' ಎಂದು ಆಟದ ಬಗೆಗಿನ ತುಡಿತ ತೋರಿಕೊಂಡರು.
ಐಪಿಎಲ್ ನಡೆಯದಿದ್ದರೆ ಬಿಸಿಸಿಐಗೆ ಭಾರೀ ನಷ್ಟ : ಸಂಬಳ ಕಡಿತದ ಸುಳಿವು ನೀಡಿದ ಗಂಗೂಲಿ
'ಶೋಯೆಬ್ ಅಕ್ತರ್ ಗೆ ಬೌನ್ಸರ್ ಹಾಕುವುದು ಇಷ್ಟ ಇರಬಹುದು. ಹೀಗಾಗಿ ಬೌನ್ಸರ್ ಹಾಕುವುದರ ಪರವಾಗಿ ಅವರು ಮಾತನಾಡುತ್ತಾರೆ. ಆದರೆ ಕ್ರಿಕೆಟ್ ಎನ್ನುವುದು ಒಂದು ಚಾಲೆಂಜಿಂಗ್ ಆಟ. ಚಾಲೆಂಜಿಂಗ್ ಆಟವನ್ನು ಎಲ್ಲರು ಇಷ್ಟ ಪಡುತ್ತಾರೆ. ನಾವು ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಐಸಿಸಿ ಏನು ನಿಯಮ ಮಾಡಿರುತ್ತದೆಯೋ ಅದರಂತೆ ನಡೆಯುವುದು ಮುಖ್ಯ. ಯುವಿ, ರವಿಶಾಸ್ತ್ರಿ, ಗಿಬ್ಸ್ ಆರು ಬಾಲ್ ಗೆ ಆರು ಸಿಕ್ಸ್ ಹೊಡೆಯಬಹುದಾದರೆ ಬೌಲರ್ ಯಾಕೆ ಆರು ಬಾಲ್ ಗೆ ಯಾಕೆ ಆರು ವಿಕೆಟ್ ಕೀಳಲು ಸಾಧ್ಯವಿಲ್ಲ? ಬೌಲರ್ ತಮ್ಮ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ನಂಬಿಕೆ ಇರಲಿ,' ಎಂದು ಸ್ಫೂರ್ತಿಯ ಮಾತುಗಳನ್ನು ಶ್ರೀಶಾಂತ್ ಹೇಳಿದ್ದಾರೆ.