ಕೊಲಂಬೋ, ಜುಲೈ 30: ಶ್ರೀಲಂಕಾ ಕ್ರಿಕೆಟ್ ತಮಡದ ಮೂವರು ಕ್ರಿಕೆಟಿಗರಿಗೆ ಒಂದು ವರ್ಷಗಳ ಕಾಲ ನಿಷೇಧವನ್ನು ಹೇರಲಾಗಿದೆ. ಧನುಷ್ಕಾ ಗುಣ ತಿಲಕ, ಕುಸಾಲ್ ಮೆಂಡಿಸ್ ಹಾಗೂ ನಿರೋಶನ್ ಡಿಕ್ವೆಲ್ಲಾ ಈ ನಿಷೇಧ ಶಿಕ್ಷೆಗೆ ಗುರಿಯಾದ ಶ್ರೀಲಂಕಾ ಕ್ರಿಕೆಟ್ ತಂಡದ ಆಟಗಾರರಾಗಿದ್ದಾರೆ. ಕಳೆದ ತಿಂಗಳು ಇಂಗ್ಲೆಂಡ್ನಲ್ಲಿ ನಡೆದ ಸರಣಿಯ ಸಂದರ್ಭದಲ್ಲಿ ಈ ಮೂವರು ಆಟಗಾರರು ಬಯೋಬಬಲ್ ಉಲ್ಲಂಘಿಸಿದ್ದರು. ಈ ಹಿನ್ನೆಲೆಯಲ್ಲಿ ಈ ನಿಷೇಧವನ್ನು ಲಂಕಾ ಕ್ರಿಕೆಟ್ ಮಂಡಳಿ ಘೋಷಿಸಿದೆ.
ಶ್ರೀಲಂಕಾ ಕ್ರಿಕೆಟ್ ತಂಡದ ಆಟಗಾರರಾದ ಧನುಷ್ಕಾ ಗುಣ ತಿಲಕ, ಕುಸಾಲ್ ಮೆಂಡಿಸ್ ಹಾಗೂ ನಿರೋಶನ್ ಡಿಕ್ವೆಲ್ಲಾ ಅವರಿಗೆ ಒಂದು ವರ್ಷದ ನಿಷೇಧದ ಜೊತೆಗೆ 10 ಮಿಲಿಯನ್ ಶ್ರೀಲಂಕನ್ ರೂಪಾಯಿ ದಂಡವನ್ನು ಕೂಡ ವಿಧಿಸಲಾಗಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯ ಸಂದರ್ಭದಲ್ಲಿ ಈ ಮೂವರು ಆಟಗಾರರು ಬಯೋ ಬಬಲ್ ಉಲ್ಲಂಘಿಸಿ ಡರ್ಹಾನ್ನ ರಸ್ತೆ ಬದಿಯಲ್ಲಿ ಕಾಣಿಸಿಕೊಂಡಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಸ್ ಆಗಿತ್ತು. ಇದರ ಪರಿಣಾಮವಾಗಿ ಈ ಮೂವರು ಕ್ರಿಕೆಟಿಗರ ವಿರುದ್ಧ ಲಂಕಾ ಮಂಡಳಿ ತಕ್ಷಣ ಕ್ರಮವನ್ನು ಕೈಗೊಂಡಿತ್ತು. ಪ್ರವಾಸದ ಮಧ್ಯದಲ್ಲಿಯೇ ಈ ಎಲ್ಲಾ ಆಟಗಾರರನ್ನು ಶ್ರೀಲಂಕಾಗೆ ವಾಪಾಸ್ ಕಳುಹಿಸಲಾಗಿತ್ತು.
ಟೋಕಿಯೋ ಒಲಿಂಪಿಕ್ಸ್: ಸೆಮಿಫೈನಲ್ ಪ್ರವೇಶಿಸುವಲ್ಲಿ ಎಡವಿದ ದ್ಯುತಿ ಚಾಂದ್
ಮೊದಲಿಗೆ ಗುರುವಾರ ನಿವೃತ್ತಿ ನ್ಯಾಯಾಧೀಶರನ್ನು ಒಳಗೊಂಡ ಶಿಸ್ತು ಸಮಿತಿ ಈ ಮೂವರು ಕ್ರಿಕೆಟಿಗರಲ್ಲಿ ಧನುಷ್ಕಾ ಗುಣ ತಿಲಕ ಮತ್ತು ಕುಸಾಲ್ ಮೆಂಡಿಸ್ಗೆ ತಲಾ ಎರಡು ವರ್ಷಗಳ ನಿಷೇಧ ಹಾಗೂ ನಿರೋಶನ್ ಡಿಕ್ವೆಲ್ಲಾಗೆ 18 ತಿಂಗಳ ನಿಷೇಧವನ್ನು ಹೇರಲು ಶಿಫಾರಸ್ಸು ಮಾಡಿತ್ತು. ಆದರೆ ಶುಕ್ರವಾರ ಶ್ರೀಲಂಕಾ ಕ್ರಿಕೆಟ್ ಮಂಡಳಿ ಒಂದು ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಹಾಗೂ ಆರು ತಿಂಗಳುಗಳ ಕಾಲ ದೇಶೀಯ ಕ್ರಿಕೆಟ್ಗೆ ನಿಷೇಧ ಹೇರುವ ನಿರ್ಧಾರವನ್ನು ತೆಗೆದುಕೊಂಡಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸಾಕಷ್ಟು ಹಿನ್ನೆಡೆಯನ್ನು ಅನುಭವಿಸುತ್ತಿರುವ ಶ್ರೀಲಂಕಾ ಕ್ರಿಕೆಟ್ಗೆ ಇದು ಸಾಕಷ್ಟು ಹಿನ್ನೆಡೆಯನ್ನುಂಟು ಮಾಡುವುದರಲ್ಲಿ ಅನುಮಾನವಿಲ್ಲ. ಶ್ರೀಲಂಕಾ ತಂಡ ಇಂಗ್ಲೆಂಡ್ನಲ್ಲಿ ನಡೆದ ಸೀಮಿತ ಓವರ್ಗಳ ಸರಣಿಯಲ್ಲಿಯೂ ಹೀನಾಯ ಸೋಲು ಕಂಡಿತ್ತು. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮೂರು ಸೋಲು ಕಂಡು ವೈಟ್ವಾಶ್ ಮುಖಬಂಧ ಅನುಭವಿಸಿದ್ದ ಶ್ರೀಲಂಕಾ ತಂಡ ಬಳಿಕ ಏಕದಿನ ಸರಣಿಯಲ್ಲಿಯೂ ಮುರು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಸೋತು ಸರಣಿಯನ್ನು ಕಳೆದುಕೊಂಡಿತ್ತು. ಅಂತಿಮ ಪಂದ್ಯ ಫಲಿತಾಂಶ ಪಡೆಯದೆ ರದ್ದಾಗಿದೆ.
ಇನ್ನು ಈ ಸರಣಿಯ ನಂತರ ಭಾರತದ ವಿರುದ್ಧದ ಸರಣಿಯಲ್ಲಿಯೂ ಆಘಾತವನ್ನು ಅನುಭವಿಸಿದೆ. ಟೀಮ್ ಇಂಡಿಯಾದ ಪ್ರಮುಖ ಆಟಗಾರರ ತಂಡ ಇಂಗ್ಲೆಂಡ್ನಲ್ಲಿರುವಂತೆಯೇ ಯುವ ಆಟಗಾರರೊಂದಿಗೆ ಕಣಕ್ಕಿಳಿದ ತಂಡದ ವಿರುದ್ಧ ಮೊದಲಿಗೆ ಏಕದಿನ ಸರಣಿಯಲ್ಲಿ 2-1 ಅಂತರದಿಂದ ಸೋಲು ಕಂಡಿತು ಶ್ರೀಲಂಕಾ. ಬಳಿಕ ಟಿ20 ಸರಣಿಯ ಮೊದಲ ಪಂದ್ಯದಲ್ಲಿಯೂ ಭಾರೀ ಅಂತರದಿಂದ ಭಾರತ ತಂಡಕ್ಕೆ ಶರಣಾಯಿತು.
ಆದರೆ ಈ ಸಂದರ್ಭದಲ್ಲಿ ಭಾರತ ತಂಡ ಕೊರೊನಾವೈರಸ್ ದಾಳಿಗೆ ತುತ್ತಾದ ಹಿನ್ನೆಲೆಯಲ್ಲಿ ಮೊದಲ ಟಿ20 ಪಂದ್ಯದಲ್ಲಿ ಆಡಿದ್ದ ಬರೊಬ್ಬರಿ ಏಳು ಆಟಗಾರರು ಸರಣಿಯಿಂದ ಹೊರಗುಳಿದಿದ್ದರು. ಹೀಗಾಗಿ ಬಹುತೇಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅನುಭವವಿಲ್ಲದ ಆಟಗಾರರೊಂದಿಗೆ ಭಾರತ ಕಣಕ್ಕಿಳಿದಿತ್ತು. ಇದರಲ್ಲಿ ದ್ವಿತೀಯ ಪಂದ್ಯವನ್ನು ಸಾಕಷ್ಟು ಪೈಪೋಟಿಯನ್ನು ಎದುರಿಸಿ ಶ್ರೀಲಂಕಾ ಗೆದ್ದುಕೊಂಡಿತು. ಆದರೆ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ತಂಡದ ಬೌಲಿಂಗ್ ಪ್ರದರ್ಶನ ತಂಡಕ್ಕೆ ಸಾಕಷ್ಟು ಆತ್ಮಸ್ಥೈರ್ಯವನ್ನು ತುಂಬಿರುವುದರಲ್ಲಿ ಆಶ್ಚರ್ಯವಿಲ್ಲ. ಇನ್ನು ಕೆಲವೇ ಸಮಯದಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು ಶ್ರೀಲಂಕಾ ಕ್ರಿಕೆಟ್ ತಂಡದ ಮುಂದೆ ಸಾಕಷ್ಟು ದೊಡ್ಡ ಅಗ್ನಿ ಪರೀಕ್ಷೆಯಿದೆ.